ತಿ.ನರಸೀಪುರ: ‘ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬರಗಾಲದಲ್ಲೂ ಜನರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ’ ಎಂದು ವರುಣ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಗರ್ಗೇಶ್ವರಿ ಗ್ರಾಮದಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಪರ ಮತಯಾಚಿಸಿ ಅವರು ಮಾತನಾಡಿದರು.
‘ಮೋದಿಯವರ ಹಿಂದುತ್ವದಿಂದ ಹೊಟ್ಟೆ ತುಂಬುವುದಿಲ್ಲ. ನಮ್ಮಲ್ಲಿ ಯಾವುದೇ ಮೋದಿ ಅಲೆ ಇಲ್ಲ. ಅವರ ಸುಳ್ಳು ಭರವಸೆಗಳನ್ನು ನಂಬಿ ಜನ ಮೋಸ ಹೋಗಿದ್ದಾರೆ. ಕಾಂಗ್ರೆಸ್ ನುಡಿದಂತೆ ನಡೆದಿದೆ. ಗ್ಯಾರೆಂಟಿ ಯೋಜನೆಗಳ ಮೂಲಕ ಜನರ ಅಭಿವೃದ್ಧಿಗೆ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸುನಿಲ್ ಬೋಸ್ಗೆ ಹೆಚ್ಚಿನ ಮತ ನೀಡುವಂತೆ’ ಅವರು ಮನವಿ ಮಾಡಿದರು.
‘ನುಡಿದಂತೆ ನಡೆದ ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಸರ್ಕಾರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ಕೋಟ್ಯಂತರ ಮಹಿಳೆಯರ ಬದುಕು ಹಸನುಗಳಿಸಿದೆ. ಇದರಿಂದ ರಾಜ್ಯದ ಬಡ ಕುಟುಂಬಗಳು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ’ ಎಂದು ತಿಳಿಸಿದರು.
ಮುಖಂಡರಾದ ಕೆ.ಮಹದೇವು, ಟಿ.ಎಸ್.ಪ್ರಶಾಂತ್ ಬಾಬು, ಮಸ್ರೂರ್ ಅಹಮ್ಮದ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹದೇವಣ್ಣ, ರಮೇಶ್ ಮುದ್ದೇಗೌಡ, ಮೆಡಿಕಲ್ ಆದಿಲ್, ಮಹಮ್ಮದ್, ನಾಜೀರ್, ಹಾಲೆಗೌಡ, ಕಲೀಲ್, ಸಿದ್ದರಾಜು, ಗೋಪಾಲ್ ರಾಜು ಇದ್ದರು.