ಉಡುಪಿ: ಕುಂದಾಪುರ ತಾಲ್ಲೂಕಿನಿಂದ ಮೂಲ್ಕಿಯವರೆಗೂ ಚಾಚಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಮರ್ಪಕ ಸರ್ವೀಸ್ ರಸ್ತೆ ನಿರ್ಮಾಣ ಮಾಡದ ಪರಿಣಾಮ ಸಾರ್ವಜನಿಕರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಸೇವಾ ರಸ್ತೆ ಇಲ್ಲದ ಕಡೆಗಳಲ್ಲಿ ವಾಹನಗಳು ಹೆದ್ದಾರಿಯಲ್ಲಿ ಏಕಮುಖವಾಗಿ ಸಂಚರಿಸುತ್ತಿರುವ ಪರಿಣಾಮ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಎರಡೂ ಬದಿಗಳಲ್ಲಿ ಜನವಸತಿ ಪ್ರದೇಶಗಳಿದ್ದರೆ ಸುಗಮ ಸಂಚಾರಕ್ಕೆ ಸರ್ವೀಸ್ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂಬ ನಿಯಮವಿದ್ದರೂ ಸಮರ್ಪಕವಾಗಿ ಪಾಲನೆಯಾಗಿಲ್ಲ. ಅಪೂರ್ಣ ಸೇವಾ ರಸ್ತೆಗಳ ನಿರ್ಮಾಣದಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.
ದಶಕಗಳು ಕಳೆದರೂ ಬಗೆಹರಿಯದ ಸಮಸ್ಯೆ: ಉಡುಪಿ ತಾಲ್ಲೂಕಿನ ಕಿನ್ನಿಮೂಲ್ಕಿಯಿಂದ ಕಾಪು ತಾಲ್ಲೂಕಿನ ಕಟಪಾಡಿಯವರೆಗೂ ಸರ್ವೀಸ್ ರಸ್ತೆ ನಿರ್ಮಾಣವಾಗಬೇಕು ಎಂಬ ದಶಕಗಳ ಬೇಡಿಕೆ ಇಂದಿಗೂ ಈಡೇರಿಲ್ಲ. ಕಿನ್ನಿಮೂಲ್ಕಿಯಿಂದ ಬಲೈಪಾದೆ–ಉದ್ಯಾವರ–ಗುಡ್ಡೆಯಂಗಡಿ–ಕಟಪಾಡಿಯವರೆಗೂ ವಾಹನಗಳು ಹೆದ್ದಾರಿ ಬದಿಯಲ್ಲಿ ಏಕಮುಖವಾಗಿಯೇ ಸಂಚರಿಸುತ್ತವೆ.
ಈ ಭಾಗದಲ್ಲಿ ಸೇವಾ ರಸ್ತೆ ಇಲ್ಲದಿರುವುದರಿಂದ ಬಲಾಯಿಪಾದೆ, ಗುಡ್ಡೆಯಂಗಡಿ, ಕೊರಂಗ್ರಪಾಡಿ ಕಡೆಯಿಂದ ಉಡುಪಿ ಕಡೆಗೆ ಬರುವ ಆಟೋ ರಿಕ್ಷಾ, ಬೈಕ್, ಕಾರು, ಸರಕು ಸಾಗಣೆ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಬಂದು ಉದ್ಯಾವರ ಜಂಕ್ಷನ್ ಬಳಿ ತಿರುವು ತೆಗೆದುಕೊಂಡು ಉಡುಪಿ ಮಾರ್ಗವಾಗಿ ತೆರಳುತ್ತವೆ. ಹೀಗೆ ಸಾಗುವಾಗ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ.
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೆದ್ದಾರಿಯಲ್ಲಿ ವೇಗವಾಗಿ ಸಾಗುವಾಗ ಧುತ್ತನೆ ಎದುರಾಗುವ ವಾಹನಗಳು ಯಮನಂತೆ ಕಾಡುತ್ತಿವೆ. ವಿರುದ್ಧ ದಿಕ್ಕಿನಲ್ಲಿ ಎದುರಾಗುವ ವಾಹನಗಳಿಂದ ಹೆದ್ದಾರಿಯಲ್ಲಿ ಸಾಗುವ ಸವಾರರಿಗೆ ಆತಂಕ ಎದುರಾಗಿದೆ. ಸಮಯ ಹಾಗೂ ಇಂಧನ ಉಳಿಸಲು ಹೋಗಿ ಸವಾರರು ಆಪತ್ತನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಎಲ್ಲೆಲ್ಲಿ ಅಪಾಯಕಾರಿ: ಹಲಿಮಾ ಸಬ್ಜು ಹಾಗೂ ಅಫ್ಸಾ ಆಡಿಟೋರಿಯಂನಲ್ಲಿ ನಡೆಯುವ ಸಮಾರಂಭಗಳಲ್ಲಿ ಭಾಗವಹಿಸುವವರು, ಪಕ್ಕದಲ್ಲಿರುವ ಗ್ಯಾಸ್ ಸ್ಟೇಷನ್ನಲ್ಲಿ ಇಂಧನ ಹಾಕಿಸುವವರು ಉಡುಪಿ ಕಡೆಗೆ ಬರಲು ಸುತ್ತಿಬಳಸಿ ಬರುವ ಬದಲು ವಿರುದ್ಧ ದಿಕ್ಕಿನಲ್ಲಿ ಅರ್ಧ ಕಿ.ಮೀ ಸಂಚರಿಸಿ ಉದ್ಯಾವರ ಜಂಕ್ಷನ್ನಲ್ಲಿ ತಿರುವು ಪಡೆಯುತ್ತಾರೆ. ಈ ಭಾಗದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಬಹಳ ಅಗತ್ಯವಿದೆ ಎನ್ನುತ್ತಾರೆ ಸವಾರರಾದ ವಿಷ್ಣುಪ್ರಸಾದ್.
ಸಂತೆಕಟ್ಟೆ ಜಂಕ್ಷನ್ನಿಂದ ಉಡುಪಿಯ ಕರಾವಳಿಯ ಬೈಪಾಸ್ವರೆಗೂ ಸರ್ವೀಸ್ ರಸ್ತೆ ಸಮರ್ಪಕವಾಗಿರದ ಕಾರಣ ಇಲ್ಲಿಯೂ ವಾಹನಗಳು ಏಕಮುಖವಾಗಿ ಸಂಚರಿಸುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ.
ಕುಂದಾಪುರದಲ್ಲೂ ಮುಗಿಯದ ಗೋಳು: ಕುಂದಾಪುರ ತಾಲ್ಲೂಕಿನಲ್ಲಿ ಕುಂಭಾಸಿ-ತೆಕ್ಕಟ್ಟೆ ಮಾರ್ಗದಲ್ಲಿಯೂ ಸರ್ವೀಸ್ ರಸ್ತೆ ನಿರ್ಮಾಣವಾಗಿಲ್ಲ. ಹೆದ್ದಾರಿಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬರಲು ವಾಹನಗಳು ಒಂದು ಕಿ.ಮೀ ಸುತ್ತಿಬಳಸಿ ಬರಬೇಕು.
ಪೂರಕ ಮಾಹಿತಿ: ಅಬ್ದುಲ್ ಹಮೀದ್, ಶೇಷಗಿರಿ ಭಟ್, ರಾಜೇಶ್ ಕೆ.ಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.