ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಮುಗಿಯದ ಸರ್ವೀಸ್ ರಸ್ತೆ ಗೋಳು

Published 29 ಜನವರಿ 2024, 7:01 IST
Last Updated 29 ಜನವರಿ 2024, 7:01 IST
ಅಕ್ಷರ ಗಾತ್ರ

ಉಡುಪಿ: ಕುಂದಾಪುರ ತಾಲ್ಲೂಕಿನಿಂದ ಮೂಲ್ಕಿಯವರೆಗೂ ಚಾಚಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಮರ್ಪಕ ಸರ್ವೀಸ್‌ ರಸ್ತೆ ನಿರ್ಮಾಣ ಮಾಡದ ಪರಿಣಾಮ ಸಾರ್ವಜನಿಕರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಸೇವಾ ರಸ್ತೆ ಇಲ್ಲದ ಕಡೆಗಳಲ್ಲಿ ವಾಹನಗಳು ಹೆದ್ದಾರಿಯಲ್ಲಿ ಏಕಮುಖವಾಗಿ ಸಂಚರಿಸುತ್ತಿರುವ ಪರಿಣಾಮ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಎರಡೂ ಬದಿಗಳಲ್ಲಿ ಜನವಸತಿ ಪ್ರದೇಶಗಳಿದ್ದರೆ ಸುಗಮ ಸಂಚಾರಕ್ಕೆ ಸರ್ವೀಸ್‌ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂಬ ನಿಯಮವಿದ್ದರೂ ಸಮರ್ಪಕವಾಗಿ ಪಾಲನೆಯಾಗಿಲ್ಲ. ಅಪೂರ್ಣ ಸೇವಾ ರಸ್ತೆಗಳ ನಿರ್ಮಾಣದಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.

ದಶಕಗಳು ಕಳೆದರೂ ಬಗೆಹರಿಯದ ಸಮಸ್ಯೆ: ಉಡುಪಿ ತಾಲ್ಲೂಕಿನ ಕಿನ್ನಿಮೂಲ್ಕಿಯಿಂದ ಕಾಪು ತಾಲ್ಲೂಕಿನ ಕಟಪಾಡಿಯವರೆಗೂ ಸರ್ವೀಸ್‌ ರಸ್ತೆ ನಿರ್ಮಾಣವಾಗಬೇಕು ಎಂಬ ದಶಕಗಳ ಬೇಡಿಕೆ ಇಂದಿಗೂ ಈಡೇರಿಲ್ಲ. ಕಿನ್ನಿಮೂಲ್ಕಿಯಿಂದ ಬಲೈಪಾದೆ–ಉದ್ಯಾವರ–ಗುಡ್ಡೆಯಂಗಡಿ–ಕಟಪಾಡಿಯವರೆಗೂ ವಾಹನಗಳು ಹೆದ್ದಾರಿ ಬದಿಯಲ್ಲಿ ಏಕಮುಖವಾಗಿಯೇ ಸಂಚರಿಸುತ್ತವೆ.

ಈ ಭಾಗದಲ್ಲಿ ಸೇವಾ ರಸ್ತೆ ಇಲ್ಲದಿರುವುದರಿಂದ ಬಲಾಯಿಪಾದೆ, ಗುಡ್ಡೆಯಂಗಡಿ, ಕೊರಂಗ್ರಪಾಡಿ ಕಡೆಯಿಂದ ಉಡುಪಿ ಕಡೆಗೆ ಬರುವ ಆಟೋ ರಿಕ್ಷಾ, ಬೈಕ್‌, ಕಾರು, ಸರಕು ಸಾಗಣೆ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಬಂದು ಉದ್ಯಾವರ ಜಂಕ್ಷನ್‌ ಬಳಿ ತಿರುವು ತೆಗೆದುಕೊಂಡು ಉಡುಪಿ ಮಾರ್ಗವಾಗಿ ತೆರಳುತ್ತವೆ. ಹೀಗೆ ಸಾಗುವಾಗ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ.

ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೆದ್ದಾರಿಯಲ್ಲಿ ವೇಗವಾಗಿ ಸಾಗುವಾಗ ಧುತ್ತನೆ ಎದುರಾಗುವ ವಾಹನಗಳು ಯಮನಂತೆ ಕಾಡುತ್ತಿವೆ. ವಿರುದ್ಧ ದಿಕ್ಕಿನಲ್ಲಿ ಎದುರಾಗುವ ವಾಹನಗಳಿಂದ ಹೆದ್ದಾರಿಯಲ್ಲಿ ಸಾಗುವ ಸವಾರರಿಗೆ ಆತಂಕ ಎದುರಾಗಿದೆ. ಸಮಯ ಹಾಗೂ ಇಂಧನ ಉಳಿಸಲು ಹೋಗಿ ಸವಾರರು ಆಪತ್ತನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಎಲ್ಲೆಲ್ಲಿ ಅಪಾಯಕಾರಿ: ಹಲಿಮಾ ಸಬ್ಜು ಹಾಗೂ ಅಫ್ಸಾ ಆಡಿಟೋರಿಯಂನಲ್ಲಿ ನಡೆಯುವ ಸಮಾರಂಭಗಳಲ್ಲಿ ಭಾಗವಹಿಸುವವರು, ಪಕ್ಕದಲ್ಲಿರುವ ಗ್ಯಾಸ್‌ ಸ್ಟೇಷನ್‌ನಲ್ಲಿ ಇಂಧನ ಹಾಕಿಸುವವರು ಉಡುಪಿ ಕಡೆಗೆ ಬರಲು ಸುತ್ತಿಬಳಸಿ ಬರುವ ಬದಲು ವಿರುದ್ಧ ದಿಕ್ಕಿನಲ್ಲಿ ಅರ್ಧ ಕಿ.ಮೀ ಸಂಚರಿಸಿ ಉದ್ಯಾವರ ಜಂಕ್ಷನ್‌ನಲ್ಲಿ ತಿರುವು ಪಡೆಯುತ್ತಾರೆ. ಈ ಭಾಗದಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣ ಬಹಳ ಅಗತ್ಯವಿದೆ ಎನ್ನುತ್ತಾರೆ ಸವಾರರಾದ ವಿಷ್ಣುಪ್ರಸಾದ್‌.

ಸಂತೆಕಟ್ಟೆ ಜಂಕ್ಷನ್‌ನಿಂದ ಉಡುಪಿಯ ಕರಾವಳಿಯ ಬೈಪಾಸ್‌ವರೆಗೂ ಸರ್ವೀಸ್‌ ರಸ್ತೆ ಸಮರ್ಪಕವಾಗಿರದ ಕಾರಣ ಇಲ್ಲಿಯೂ ವಾಹನಗಳು ಏಕಮುಖವಾಗಿ ಸಂಚರಿಸುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ.

ಕುಂದಾಪುರದಲ್ಲೂ ಮುಗಿಯದ ಗೋಳು: ಕುಂದಾಪುರ ತಾಲ್ಲೂಕಿನಲ್ಲಿ ಕುಂಭಾಸಿ-ತೆಕ್ಕಟ್ಟೆ ಮಾರ್ಗದಲ್ಲಿಯೂ ಸರ್ವೀಸ್ ರಸ್ತೆ ನಿರ್ಮಾಣವಾಗಿಲ್ಲ. ಹೆದ್ದಾರಿಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬರಲು ವಾಹನಗಳು ಒಂದು ಕಿ.ಮೀ ಸುತ್ತಿಬಳಸಿ ಬರಬೇಕು. 

ಪೂರಕ ಮಾಹಿತಿ: ಅಬ್ದುಲ್ ಹಮೀದ್‌, ಶೇಷಗಿರಿ ಭಟ್‌, ರಾಜೇಶ್‌ ಕೆ.ಸಿ

ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸಮೀಪ ಸರ್ವೀಸ್ ರಸ್ತೆ ಇಲ್ಲದೆ ವಿರುದ್ಧ ಧಿಕ್ಕಿನಲ್ಲಿ ಸಂಚರಿಸುತ್ತಿರುವ ವಾಹನಗಳು
ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸಮೀಪ ಸರ್ವೀಸ್ ರಸ್ತೆ ಇಲ್ಲದೆ ವಿರುದ್ಧ ಧಿಕ್ಕಿನಲ್ಲಿ ಸಂಚರಿಸುತ್ತಿರುವ ವಾಹನಗಳು
‘ವರದಿ ಸಲ್ಲಿಕೆ’
ರಾಷ್ಟ್ರೀಯ ಹೆದ್ದಾರಿ 66ರ ವ್ಯಾಪ್ತಿಯಲ್ಲಿ 17 ಬ್ಲಾಕ್‌ ಸ್ಪಾಟ್‌ಗಳಿದ್ದು ಅಪಘಾತಗಳ ತಡೆಗೆ ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಯಿಂದ ಹೆದ್ದಾರಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಕೆಲವು ಕಡೆಗಳಲ್ಲಿ ಮಾತ್ರ ಸುರಕ್ಷತಾ ಕ್ರಮಗಳ ಪಾಲನೆಯಾಗಿದ್ದರೆ ಬಹಳಷ್ಟು ಕಡೆ ಪಾಲನೆಯಾಗಬೇಕಿದೆ. ಶೀಘ್ರ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತೊಮ್ಮೆ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲಾಗುವುದು ಎಂದು ಎಸ್‌ಪಿ ಕೆ.ಅರುಣ್‌ ಹೇಳಿದರು. 
‘ಸರ್ವೀಸ್‌ ರಸ್ತೆ ಬೇಡಿಕೆ ಪರಿಶೀಲನೆ’
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರಿಂದ ಬೇಡಿಕೆ ಇದೆ. ಕಿನ್ನಿಮೂಲ್ಕಿಯಿಂದ ಕಟಪಾಡಿವರೆಗೂ ಸರ್ವೀಸ್‌ ರಸ್ತೆ ಬೇಕು ಎಂಬ ಬೇಡಿಕೆಯನ್ನು ಪರಿಶೀಲಿಸುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳ ಪಾಲನೆಯ ಮೂಲಕ ಅಪಘಾತಗಳ ತಡೆಗೂ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.
ಪಡುಬಿದ್ರಿ ಕಥೆ ವ್ಯಥೆ
ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಿಂದ ಕಟಪಾಡಿವರೆಗೆ ಬಹುತೇಕ ಸ್ಥಳಗಳಲ್ಲಿ ಸರ್ವೀಸ್ ರಸ್ತೆಗಳು ಇಲ್ಲ. ಹೆಜಮಾಡಿಯ ಒಳರಸ್ತೆ ಸಂಪರ್ಕಿಸುವುದಕ್ಕೆ ಕನ್ನಂಗಾರ್‌ನಿಂದ ಪಡುಬಿದ್ರಿಯ ಬೀಡು ಬಳಿಯ ಸುಜ್ಲಾನ್ ಗೇಟ್ ಬಳಿ ಸೇವಾ ರಸ್ತೆಗಳು ಇಲ್ಲ. ಪರಿಣಾಮ ವಾಹನಗಳು ವಿರುದ್ಧ ಧಿಕ್ಕಿನಲ್ಲಿ ಸಂಚರಿಸುತ್ತವೆ. ಈ ಭಾಗದಲ್ಲಿ ಹಲವು ಅಪಘಾತಗಳು ನಡೆದಿವೆ. ಸೇವಾ ರಸ್ತೆಯ ಸಮಸ್ಯೆಯನ್ನು ಮನಗಂಡು ಕನ್ನಂಗಾರ್ ಬೈಪಾಸ್‌ನಿಂದ ಪಡುಬಿದ್ರಿವರೆಗೆ 350 ಮೀಟರ್ ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ ಹಲವು ವರ್ಷಗಳಿಂದ ಆಗ್ರಹಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ. ಈ ಭಾಗದಲ್ಲಿ ಸರ್ವೀಸ್ ರಸ್ತೆ ಇಲ್ಲದಿರುವುದರಿಂದ ಏಳು ವರ್ಷಗಳಲ್ಲಿ 36 ಅಪಘಾತಗಳು ನಡೆದಿವೆ. ಎಂಟು ಮಂದಿ ಮೃತಪಟ್ಟದ್ದಾರೆ. 54 ಮಂದಿ ಗಾಯಗೊಂಡಿದ್ದಾರೆ. ಪಡುಬಿದ್ರಿಯಲ್ಲೂ ಸರ್ವೀಸ್ ರಸ್ತೆ ಅವೈಜ್ಞಾನಿಕವಾಗಿದ್ದು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಎರ್ಮಾಳು ಕಲ್ಸಂಕದಿಂದ ಉಚ್ಚಿಲ ಬಡಾದವರೆಗೂ ಹಾಗೂ ಮೂಳೂರಿನಿಂದ ಕಾಪುವಿನವರೆಗೂ ಹಾಗೂ ಕೈಪುಂಜಾಲುವಿನಿಂದ ಕಟಪಾಡಿವರೆಗೂ ಸರ್ವೀಸ್ ರಸ್ತೆಯ ಅಗತ್ಯತೆ ಇದೆ ಎಂಬುವುದು ಈ ಭಾಗದ ಜನರ ಆಗ್ರಹ.
ಅಪಘಾತಕ್ಕೆ ಆಹ್ವಾನ
ಬ್ರಹ್ಮಾವರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಒಂದು ಕಿ.ಮೀನಷ್ದು ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ಅಗತ್ಯವಿದ್ದರೂ ಬಸ್‌ ನಿಲ್ದಾಣದ ಬಳಿ ಮಾತ್ರ ನಿರ್ಮಿಸಲಾಗಿದೆ. ನಗರದಲ್ಲಿರುವ ಖಾಸಗಿ ಆಸ್ಪತ್ರೆ ಶಿಕ್ಷಣ ಸಂಸ್ಥೆಗಳು ಬ್ಯಾಂಕ್ ಎಲ್.ಐ.ಸಿ ಕಚೇರಿಗಳು ನಗರದ ಹೊರ ಭಾಗದಲ್ಲಿದ್ದು ಅಲ್ಲಿಗೆ ಸಾಗಲು ಸರ್ವಿಸ್ ರಸ್ತೆ ಅತಿ ಅಗತ್ಯವಾಗಿದೆ. ಆದರೂ ಬಸ್‌ ನಿಲ್ದಾಣದಿಂದ ಕೇವಲ 500 ಮೀ ವರೆಗೆ ಮಾತ್ರ ಸೇವಾ ರಸ್ತೆ ನಿರ್ಮಿಸಿ ಹೆದ್ದಾರಿ ಇಲಾಖೆ‌ ಕಣ್ಮುಚ್ಚಿ  ಕುಳಿತುಕೊಂಡಿದೆ. ಬ್ರಹ್ಮಾವರದಿಂದ ಮಾಬುಕಳದ ತನಕ ಸಾಸ್ತಾನ ಪೇಟೆಯಿಂದ ಟೋಲ್‌ತನಕ ಸಾಲಿಗ್ರಾಮದಿಂದ ಕಾರ್ಕಡ ರಸ್ತೆವರೆಗೆ ಸರ್ವಿಸ್ ರಸ್ತೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ಬ್ರಹ್ಮಾವರದಿಂದ ರುಡ್ ಸೆಟ್‌ವರೆಗೆ ಸರ್ವಿಸ್ ರಸ್ತೆ ನಿರ್ಮಾಣವಾದರೆ ಹೊನ್ನಾಳಕ್ಕೆ ಸಾಗುವವರಿಗೂ ಉಪಯೋಗವಾಗಲಿದೆಸಾಲಿಗ್ರಾಮದಿಂದ ಚೇಂಪಿಯವರೆಗೆ ಸರ್ವಿಸ್ ರಸ್ತೆ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಿಂದಿನಿಂದಲೂ ಒತ್ತಾಯಿಸಿಕೊಂಡು ಬಂದರೂ ಈಡೇರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT