ಭಟ್ಕಳ: ಭಟ್ಕಳದಲ್ಲಿ ಶನಿವಾರ ಸುರಿದ ಬಾರಿ ಮಳೆಗೆ ಅಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ದೋಣಿಯೊಂದು ಸಮುದ್ರದ ಅಲೆಯ ಹೊಡೆತಕ್ಕೆ ಸಿಕ್ಕಿ ಮುಳುಗಡೆಯಾಗಿದ್ದು, ದೋಣಿಯಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ.
ಬಂದರ ನಿವಾಸಿ ಮಾದೇವ ಗೋವಿಂದ ಖಾರ್ವಿ ಎನ್ನುವವರಿಗೆ ಸೇರಿದ ಮಹಾಗಣಪತಿ ದೋಣಿ ಮುಳುಗಡೆಯಾಗಿದೆ. ಶನಿವಾರ ಬೆಳಿಗ್ಗೆ 5 ಗಂಟೆಗೆ ಭಟ್ಕಳ ಬಂದರಿನಲ್ಲಿ ದೋಣಿ ಮೀನುಗಾರಿಕೆಗೆ ತೆರಳಿತ್ತು. ಶನಿವಾರ ಬೆಳಿಗ್ಗೆ ಸುರಿದ ಬಾರಿ ಮಳೆ ಹಾಗೂ ಗಾಳಿಯ ರಭಸಕ್ಕೆ ಸಿಕ್ಕಿದ ದೋಣಿ ಮುಳುಗುವ ಸಂದರ್ಭದಲ್ಲಿ ಅಲ್ಲಿಯೇ ಮೀನುಗಾರಿಕೆ ಮಾಡುತ್ತಿದ್ದ ಸಚ್ಚಿದಾನಂದ ದೋಣಿಯವರು ಮುಳುಗುತ್ತಿದ್ದ ದೋಣಿಯಲ್ಲಿದ್ದ ಐವರನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ.
ದೋಣಿಯ ಮಾಲಿಕ ಮಾದೇವ ಗೋವಿಂದ ಖಾರ್ವಿಯ ಜೊತೆಗೆ ದೋಣಿಯಲ್ಲಿದ್ದ ಶ್ರೀಧರ ನಾರಾಯಣ ಖಾರ್ವಿ, ಮಂಜುನಾಥ ಮಾದೇವ ಖಾರ್ವಿ, ರವಿ ಸುಬ್ಬ ಪೂಜಾರಿ ಹಾಗೂ ಸಾಯಿ ಮೊಂಡಲ ಕೊಲಕತ್ತಾ ಅವರನ್ನು ರಕ್ಷಣೆ ಮಾಡಿ ದಡಕ್ಕೆ ಕರೆತರಲಾಗಿದೆ.