ವಿಜಯಪುರ: ಕೈದಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಿಕೊಳ್ಳಲು ಕೇಂದ್ರ ಕಾರಾಗೃಹದ ಎಫ್.ಎಂ.ರೇಡಿಯೊ ಕೇಂದ್ರವನ್ನು ಉತ್ತಮ ಮಾಧ್ಯಮವನ್ನಾಗಿಸಿಕೊಳ್ಳುವುಂತೆ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಸಲಹೆ ನೀಡಿದರು.
ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಿರ್ಮಾಣವಾಗಿರುವ ಎಫ್.ಎಂ.ರೇಡಿಯೊ ಸ್ಟೇಷನ್ ಅನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೈದಿಗಳು ತಮ್ಮ ಮನಪರಿವರ್ತನೆಯ ಅಂಗವಾಗಿಯೂ ಕೂಡಾ ಭಾಷಣ, ಜಾನಪದ ಕಲೆ, ಸಂಗೀತ, ಸುಗಮ ಸಂಗೀತದಂತಹ ಕಾರ್ಯಕ್ರಮಗಳನ್ನು ಎಫ್.ಎಂ.ರೇಡಿಯೊ ಕೇಂದ್ರದ ಮೂಲಕ ನೀಡಿ ಕಲೆ, ಸಾಹಿತ್ಯ, ಸಂಸ್ಕೃತಿಗಳ ಮೂಲಕ ಈ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಕಾರಾಗೃಹದ ಅಧೀಕ್ಷಕ ಡಾ.ಎಸ್.ಜಿ ಮ್ಯಾಗೇರಿ ಮಾತನಾಡಿ, ಎಫ್.ಎಂ.ರೇಡಿಯೊದ ಉದ್ದೇಶ ಕೇವಲ ಮನರಂಜನೆ ಮಾತ್ರವಲ್ಲ, ವಿವಿಧ ಸಾಮಾಜಿಕ ಹಿನ್ನೆಲೆ, ವರ್ಗದಿಂದ ಬಂದಿರುವ ಬಂದಿಗಳಿಗೆ ಎಫ್.ಎಂ.ರೇಡಿಯೊ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಅವರ ಮನಃಪರಿವರ್ತನೆ ಮಾಡುವುದು ಕಾರಾಗೃಹದಲ್ಲಿ ಸ್ಥಾಪನೆಯಾಗಿರುವ ಎಫ್.ಎಂ.ರೇಡಿಯೊದ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಬಂದಿಗಳಿಗೆ ಅಗತ್ಯವಿರುವ ವಿವಿಧ ಮಾಹಿತಿ ಸಂದೇಶಗಳನ್ನು ಈ ಕೇಂದ್ರದ ಮೂಲಕ ಬಿತ್ತರಿಸಲಾಗುತ್ತದೆ ಎಂದರು.
ಇಲಾಖೆಯ ₹3.5 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿರುವ ಎಫ್.ಎಂ.ರೇಡಿಯೊ ಕೇಂದ್ರವು ಕಾರಾಗೃಹದ ನೂತನ ಮಾದರಿಯ ಮನರಂಜನೆಯಾಗಿದ್ದು, ಜಿಲ್ಲೆಯ ಸಾಹಿತಿಗಳನ್ನು, ಚಿಂತಕರನ್ನು ಪ್ರಸಿದ್ಧ ಕಲಾವಿದರನ್ನು ಕರೆಯಿಸಿ ಬಂದಿಗಳಿಗೆ ಉತ್ತಮ ಜೀವನ ನಿರ್ವಹಣೆಯ ಮತ್ತು ಅಪರಾಧ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಸಂದೇಶಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಸಹಾಯಕ ಆಡಳಿತಾಧಿಕಾರಿ ಡಿ.ವಿ.ರಾಜೇಶ, ಕಚೇರಿ ಅಧೀಕ್ಷಕ ರವಿ ಲಮಾಣಿ, ಸಹಾಯಕ ಅಧೀಕ್ಷಕ ಎಚ್.ಎ ಚೌಗಲೆ, ಮುಖ್ಯ ವೀಕ್ಷಕ ಎಸ್.ವಿ. ಅಂಗಡಿ ಉಪಸ್ಥಿತರಿದ್ದರು.