ನಾಲತವಾಡ: ಪಟ್ಟಣದ 5ನೇ ವಾರ್ಡ್ನ ಅಂಬೇಡ್ಕರ್ ನಗರದಲ್ಲಿರುವ ಸಾರ್ವಜನಿಕ ಶೌಚಾಲಯದ ಸೆಫ್ಟಿಕ್ ಟ್ಯಾಂಕ್ ತುಂಬಿ ತ್ಯಾಜ್ಯ ನೀರು ಹೊರ ಬರುತ್ತಿದ್ದು, ಕೆಟ್ಟ ದುರ್ನಾತ ಬರುತ್ತಿದೆ ಎಂಬುದು ಅಂಬೇಡ್ಕರ್ ನಗರ ನಿವಾಸಿಗಳ ಅಳಲು.
ಸಾರ್ವಜನಿಕ ಶೌಚಾಲಯ ನಿರ್ಮಾಣಗೊಂಡು ಕೆಲವೆ ತಿಂಳಾಗಿವೆ. ಇಷ್ಟು ಬೇಗ ತ್ಯಾಜ್ಯ ಟ್ಯಾಂಕ್ ತುಂಬಿರುವುದೇ ಆಶ್ಚರ್ಯ ತಂದಿದೆ ಎನ್ನುತ್ತಾರೆ ಡಿಎಸ್ಎಸ್ ರಾಜ್ಯ ಪದಾಧಿಕಾರಿ ಮಾರುತಿ ಸಿದ್ದಾಪೂರ.
6, 7, ಹಾಗೂ 8ನೇ ವಾರ್ಡನ ಮಹಿಳೆಯರಿಗೆಂದು ಶೌಚಾಲಯ ನಿರ್ಮಾಣ ಮಾಡಲಾಗಿದೆ. ///ಶೌಚಾಲಯ ಪ್ರಾರಂಭದ ಮರುದಿನವೇ/// ಶೌಚದ ಸೆಫ್ಟಿಕ್ ಟ್ಯಾಂಕ್ ಚಿಕ್ಕದಾಗಿರುವುದರಿಂದ ತುಂಬಿ ಕೆಟ್ಟ ವಾಸನೆಯೊಂದಿಗೆ ಹರಿಯುತ್ತಿರುವುದು ಕಾಮಗಾರಿ ಬಗೆಗೆ ಸಂಶಯ ಹುಟ್ಟಿಸಿದೆ. ಕಾಮಗಾರಿ ಯಾವ ಯೋಜನೆಯಲ್ಲಿ ನಡೆದಿದೆ, ಗುತ್ತಿಗೆದಾರರ ಹೆಸರು, ತಗುಲಿದ ವೆಚ್ಚ ಈ ಕುರಿತಂತೆ ಯಾವುದೇ ಫಲಕವನ್ನೂ ಹಾಕದೇ ಇರುವುದು ಸಂಶಯವನ್ನು ಹೆಚ್ಚಿಸಿದೆ ಎನ್ನುತ್ತಾರೆ ಅವರು.
ಶಚೌಲಯದ ಸಮೀಪದಲ್ಲಿ ತಿಪ್ಪೆಗುಂಡಿಯೂ ಇದ್ದು, ಬೇರೆ ಓಣಿಯ ಜನರು ಇಲ್ಲಿ ಕಸ ತಂದು ಸುರಿಯುತ್ತಾರೆ. ಅಂಬೇಡ್ಕರ್ ನಗರ ಎಂದರೆ ಕಸ ಸ್ವೀಕರಿಸುವ ತಾಣವಾಗಿದೆ, ಕಸದಲ್ಲಿರುವ ಪ್ಲಾಸ್ಟಿಕ್ ಹಾಳೆಗಳು, ತಿಪ್ಪೆಯ ದೂಳು ಗಾಳಿಯ ಮೂಲಕ ಶಾಲಾ ಆವರಣ, ಮನೆ ಸೇರುತ್ತಿದೆ ಎಂದು ಅಂಬೇಡ್ಕರ್ ನಿವಾಸಿಗಳಾದ ರಾಘವೇಂದ್ರ ಮಾದರ, ಶಿವಪ್ಪ, ಲಕ್ಷ್ಮವ್ವ ಮಾದರ, ಯಲ್ಲವ್ವ ದೂರಿದ್ದಾರೆ.
ಪಟ್ಟಣದ ಶುಚಿತ್ವಕ್ಕೆ ದುಡಿಯುತ್ತಿರುವ ಪೌರ ಕಾರ್ಮಿಕರ ಕುಟುಂಬಗಳೇ ಅಧಿಕ ಸಂಖ್ಯೆಯಲ್ಲಿರುವ ಈ ಕಾಲೊನಿಯಲ್ಲಿ ಶುಚಿತ್ವ ಮರಿಚೀಕೆಯಾಗಿದೆ. ಕಾಲೊನಿಗೆ ಹೊಂದಿಕೊಂಡು ಸರ್ಕಾರಿ ಅಂಬೇಡ್ಕರ್ ನಗರ ಶಾಲೆ ಇದ್ದು, ಶಾಲೆಯ ಮುಂಭಾಗದ ಕೊಳಚೆ ನೀರಿನ ಕಂದಕ ಮಕ್ಕಳ ಪ್ರಾಣಕ್ಕೆ ಅಪಾಯ ತರುವ ಸಾಧ್ಯತೆ ಇದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ತಿಪ್ಪೆಯ ಕಸದ ರಾಶಿ, ಸಾರ್ವಜನಿಕ ಶೌಚಾಲಯದ ದುರ್ವಾಸನೆಯ ಮಧ್ಯೆಯೇ ಮಕ್ಕಳು ಪಾಠ ಕೇಳಬೇಕು, ಮಧ್ಯಾಹ್ನ ಬಿಸಿಯೂಟ ಸವಿಯಬೇಕಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾಯಿಲೆಗೆ ತುತ್ತಾದರೇ ಅದಕ್ಕೆ ಯಾರು ಹೊಣೆ ಎಂದು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಗುಂಡಪ್ಪ ಚಲವಾದಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಶುಚಿತ್ವಕ್ಕೆ ದುಡಿಯುವ ಪೌರ ಕಾರ್ಮಿಕರಿರುವ ಓಣಿಯ ಸ್ಥಿತಿ ಹೀಗಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಪರಿಶಿಷ್ಟರ ಓಣಿಗಳ ಬಗೆಗೆ ತಾತ್ಸಾರ ಸಲ್ಲದು ಮಾರುತಿ ಸಿದ್ದಾಪೂರ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.