ವಯನಾಡ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಸಹೋದರಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರೊಂದಿಗೆ ರಾಹುಲ್ ಚುನಾವಣಾಧಿಕಾರಿಯೂ ಆಗಿರುವ ವಯನಾಡ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ವಯನಾಡ್ಗೆ ಬಂದ ರಾಹುಲ್, ನಾಮಪತ್ರ ಸಲ್ಲಿಕೆಗೂ ಮುನ್ನ ಕಲ್ಪೆಟ್ಟಾದಿಂದ ಸಿವಿಲ್ ಸ್ಟೇಷನ್ವರೆಗೆ ರೋಡ್ ಶೋ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಟ್ಟುವ ಮುನ್ನ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಲವರನ್ನು ಬಲಿ ಪಡೆದ ಮಾನವ ಪ್ರಾಣಿ ಸಂಘರ್ಷ ಸೇರಿದಂತೆ ಎಲ್ಲ ಸಮಸ್ಯೆಗಳ ಸಂದರ್ಭದಲ್ಲಿಯೂ ತಾವು ಸದಾ ವಯನಾಡ್ ಜನರೊಂದಿಗೆ ಇರುವುದಾಗಿ ಹೇಳಿದ್ದಾರೆ. ಬೆಟ್ಟಗುಡ್ಡಗಳಿಂದ ಕೂಡಿರುವ ಕ್ಷೇತ್ರದ ಸಮಸ್ಯೆಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ಯುವುದಾಗಿ ಮತದಾರರಿಗೆ ಭರವಸೆ ನೀಡಿದ್ದಾರೆ.
ಹಾಲಿ ವಯನಾಡ್ ಸಂಸದರಾಗಿರುವ ರಾಹುಲ್ ಗಾಂಧಿ ಅವರು ಕ್ಷೇತ್ರದಿಂದ ಪುನರಾಯ್ಕೆ ಬಯಸುತ್ತಿದ್ದು, ಅವರಿಗೆ ವಿರುದ್ಧವಾಗಿ ಬಿಜೆಪಿಯಿಂದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಮತ್ತು ಸಿಪಿಐನಿಂದ ಅನ್ನಿ ರಾಜಾ ಸ್ಪರ್ಧಿಸಿದ್ದಾರೆ.
Wayanad is my home, and the people of Wayanad are my family. From them, I have learned a great deal over the last five years and received an abundance of love and affection. It is with great pride and humility that I file my nomination for Lok Sabha 2024 once again from this… pic.twitter.com/rjgz0cYTyB
— Rahul Gandhi (@RahulGandhi) April 3, 2024
‘ದೇಶದ ಆತ್ಮಕ್ಕಾಗಿ ನಡೆಯುತ್ತಿರುವ ಹೋರಾಟ’
ನಾಮಪತ್ರ ಸಲ್ಲಿಕೆಯ ನಂತರ ರಾಹುಲ್ ‘ಎಕ್ಸ್’ ವೇದಿಕೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ವಯನಾಡ್ ನನ್ನ ಮನೆ ಇಲ್ಲಿನ ಜನ ನನ್ನ ಕುಟುಂಬ’ ಎಂದಿರುವ ರಾಹುಲ್ ‘ಈ ಚುನಾವಣೆಯು ದೇಶದ ಆತ್ಮಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ. ಭಾರತ ಮಾತೆಯ ಧ್ವನಿಯನ್ನು ಉಡುಗಿಸಲು ಪ್ರಯತ್ನಿಸುತ್ತಿರುವ ದ್ವೇಷ ಭ್ರಷ್ಟಾಚಾರ ಮತ್ತು ಅನ್ಯಾಯದ ಶಕ್ತಿಗಳಿಂದ ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟವಾಗಿದೆ. ಈ ಯುದ್ಧ ಗೆಲ್ಲುವವರೆಗೆ ‘ಇಂಡಿಯಾ’ ಕೂಟದ ಸದಸ್ಯರು ಸೇರಿ ನಾವ್ಯಾರೂ ವಿರಮಿಸುವುದಿಲ್ಲ. ನಮ್ಮ ಒಕ್ಕೂಟವನ್ನು ಬಲಪಡಿಸಲು ನಾವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮಣಿಪುರದಿಂದ ಮುಂಬೈವರೆಗೆ ಪ್ರತಿಯೊಬ್ಬ ಪ್ರಜೆಯನ್ನೂ ಒಟ್ಟುಗೂಡಿಸುತ್ತೇವೆ’ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ತಿರುವನಂತಪುರ: ತರೂರ್ ನಾಮಪತ್ರ ಸಲ್ಲಿಕೆ
ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಗೆಲುವಿನ ನಗೆ ಬೀರಿರುವ ಕಾಂಗ್ರೆಸ್ನ ಹಿರಿಯ ಮುಖಂಡ ಶಶಿ ತರೂರ್ ಅವರು ಈ ಬಾರಿಯೂ ಕಣಕ್ಕಿಳಿಯುತ್ತಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಹೈಕಮಾಂಡ್ನ ನೆಚ್ಚಿನ ಅಭ್ಯರ್ಥಿಯಾಗಿರುವ ತರೂರ್ ಅವರು ಕೇರಳದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಾಗ್ಮಿ ಮತ್ತು ಲೇಖಕರಾಗಿರುವ ಇವರು ವಿಶ್ವಸಂಸ್ಥೆಯ ಶಾಂತಿಪಾಲಕರಾಗಿಯೂ ಕೆಲಸ ಮಾಡಿದ್ದರು. 68 ವರ್ಷದ ಅವರು ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಮೊದಲ ಬಾರಿಗೆ ಶಶಿ ತರೂರ್ ವಿರುದ್ಧ ಅಖಾಡಕ್ಕಿಳಿಯುತ್ತಿದ್ದಾರೆ. ಮೂಲತಃ ಕೇರಳದವರಾದರೂ ರಾಜೀವ್ ಅವರು ಕರ್ನಾಟಕ ಮತ್ತು ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಛಾಪು ಮೂಡಿಸಿದವರು. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅವರು ಈ ಹಿಂದೆ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
#WATCH | Kerala: Congress party's sitting MP and candidate Shashi Tharoor files nomination from Thiruvananthapuram constituency in Kerala
— ANI (@ANI) April 3, 2024
BJP has fielded Union Minister Rajeev Chandrasekhar from Thiruvananthapuram. #LokSabhaElections2024 pic.twitter.com/r3ehLs9KoC
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.