ಹುಕ್ಕೇರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಾಯ್ಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ ಸೋನಿಯಾ ಗಾಂಧಿ ಅವರ ಯೋಜನೆ ಯಶ ಕಾಣುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಮೇಠಿಯಿಂದ ಪಲಾಯನಗೈದು ರಾಯ್ಬರೇಲಿಯಲ್ಲಿ ಸ್ಪರ್ಧಿಸಲಿರುವ ರಾಹುಲ್ ಗಾಂಧಿ ಅವರಿಗೆ ಬೃಹತ್ ಅಂತರದ ಸೋಲು ಎದುರಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಬೆಳಗಾವಿಯಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ನಡೆಸಿದ ಮೊದಲ ಯತ್ನದಲ್ಲೇ 'ಚಂದ್ರಯಾನ ಮಿಷನ್' ಯಶಸ್ವಿಗೊಂಡಿತು. ಮತ್ತೊಂದೆಡೆ ಸೋನಿಯಾ ಗಾಂಧಿ ಅವರು ರಾಹುಲ್ ಬಾಬಾ (ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ) ಎಂಬ ಯಾನವನ್ನು 20 ಬಾರಿ ಯತ್ನಿಸಿದ್ದಾರೆ. ಆದರೆ ಉಡ್ಡಯನ ಯಶಸ್ವಿಯಾಗಲಿಲ್ಲ. ಈಗ ಅಮೇಠಿಯಿಂದ ಪಲಾಯನಗೈದು 21ನೇ ಬಾರಿಗೆ ರಾಯ್ಬರೇಲಿಯಿಂದ ನಾಮಪತ್ರ ಸಲ್ಲಿಸಿದ್ದಾರೆ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
'ರಾಹುಲ್ ಬಾಬಾ ಅವರೇ, ನಾನು ಇಲ್ಲಿಂದಲೇ ಫಲಿತಾಂಶ ನುಡಿಯುತ್ತೇನೆ. ರಾಯ್ಬರೇಲಿಯಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ವಿರುದ್ಧ ರಾಹುಲ್ ಗಾಂಧಿ ಬೃಹತ್ ಅಂತರದಿಂದ ಸೋಲಲಿದ್ದಾರೆ' ಎಂದು ಅವರು ಹೇಳಿದರು.