ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದಲ್ಲಿ ಕಾಂಗ್ರೆಸ್ ಸರ್ಕಾರ ನೇಮಿಸಿದ ರಾಜ್ಯಪಾಲರು ಹೊಸ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವ ವರದಿಗಳು ದಟ್ಟವಾಗಿರುವುದರಿಂದ ಈ ಸಂಬಂಧ ಕರ್ನಾಟಕದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಸೇರಿದಂತೆ ಹಲವು ರಾಜ್ಯಗಳ ರಾಜ್ಯಪಾಲರುಗಳು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಶೀಘ್ರ ಭೇಟಿಯಾಗಿ ಸಲಹೆ ಪಡೆಯಲಿದ್ದಾರೆ ಎನ್ನಲಾಗಿದೆ.
ಭಾರದ್ವಾಜ್ ಅವರ ಐದು ವರ್ಷಗಳ ಅಧಿಕಾರಾವಧಿ 2014ರ ಜೂನ್ 23ಕ್ಕೆ ಕೊನೆಗೊಳ್ಳಲಿದೆ. ಅಧಿಕಾರದಲ್ಲಿ ಮುಂದುವರೆಯುವ ವಿಚಾರವಾಗಿ ಇತರ ರಾಜ್ಯಗಳ ರಾಜ್ಯಪಾಲರ ಸಮಾಲೋಚನೆ ನಡೆಸಿದ್ದಾಗಿ ತಿಳಿದುಬಂದಿದೆ.ಇವರಲ್ಲಿ ನೆರೆಯ ರಾಜ್ಯದ ರಾಜ್ಯಪಾಲರೊಬ್ಬರು ಚುನಾವಣೆಯ ನಂತರ ರಾಷ್ಟ್ರಪತಿ ಅವರ ಸಲಹೆ ಪಡೆಯುವಂತೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹಾಗಾಗಿ ಚುನಾವಣೆಯ ನಂತರ ರಾಷ್ಟ್ರಪತಿಗಳನ್ನು ಭೇಟಿಮಾಡುವ ರಾಜ್ಯಪಾಲರುಗಳಲ್ಲಿ ಭಾರದ್ವಾಜ್ ಮೊದಲಿಗರಾಗಲಿದ್ದಾರೆ ಎನ್ನಲಾಗಿದೆ. ಈ ವಿಷಯದಲ್ಲಿ ಪ್ರಣವ್ ಮುಖರ್ಜಿ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದು, ಹೊಸ ಸರ್ಕಾರದ ಪ್ರಧಾನಿಯ ಸಲಹೆ ಪಡೆಯುವತನಕ ಆತುರ ಬೇಡ ಎಂದು ತಿಳಿಸಿದ್ದಾಗಿ ರಾಷ್ಟ್ರಪತಿ ಭವನದ ಮೂಲಗಳು ಖಚಿತಪಡಿಸಿವೆ. ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರ ಬಂದಲ್ಲಿ ಆರು ರಾಜ್ಯಗಳ ರಾಜ್ಯಪಾಲರ ಸ್ಥಾನಕ್ಕೆ ಕುತ್ತು ಬರಲಿದೆ ಎನ್ನುವ ಕೆಲ ಪತ್ರಿಕಾವರದಿಗಳ ಹಿನ್ನೆಲೆಯಲ್ಲಿ ರಾಜ್ಯಪಾಲರುಗಳು ಪರಸ್ಪರ ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಸರ್ಕಾರ ನೇಮಿಸಿದ್ದ ಹಲವು ರಾಜ್ಯಪಾಲರನ್ನು 2004ರಲ್ಲಿ ಕಿತ್ತೆಸೆದ ಮಾಜಿ ಕೇಂದ್ರ ಗೃಹ ಸಚಿವ , ಸದ್ಯ ಪಂಜಾಬ್ ರಾಜ್ಯಪಾಲರಾಗಿರುವ ಶಿವರಾಜ್ ಪಾಟೀಲ, ಉತ್ತರಾಖಂಡ್ ರಾಜ್ಯಪಾಲ ಅಜೀಜ್ ಖುರೇಷಿ,ರಾಜಸ್ತಾನದ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಹಾಗೂ ತಮಿಳುನಾಡು ರಾಜ್ಯಪಾಲ ಕೆ. ರೋಸಯ್ಯ ಅವರುಗಳು ಸಹ ಹೊಸ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವವರ ಪಟ್ಟಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ–1 ಅಧಿಕಾರಕ್ಕೆ ಬಂದ ಸಂದರ್ಭ ಆರ್ಎಸ್ಎಸ್ ಹಿನ್ನೆಲೆಯುಳ್ಳ ಕೆಲವು ರಾಜ್ಯಪಾಲರುಗಳನ್ನು ತೆಗೆದುಹಾಕಲಾಗಿತ್ತು. ಆದಾಗ್ಯೂ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಮಾಜಿ ಕೇಂದ್ರ ಕಾನೂನು ಸಚಿವ ಹಾಗೂ ಬಿಜೆಪಿ ಮುಖಂಡರೊಬ್ಬರು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ರಾಜ್ಯಪಾಲರನ್ನು ಕಿತ್ತೆಸೆಯುವುದಿಲ್ಲ ಎಂದರು.
ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ಮೇಲೆ ರಾಜ್ಯಪಾಲರನ್ನು ಬದಲಾಯಿ ಸುವ ಪ್ರವೃತ್ತಿ ವಿರೋಧಿಸಿ 2010ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಅವರು ಉಲ್ಲೇಖಿಸಿದರು. ಈಗಿರುವ ರಾಜ್ಯಪಾಲರುಗಳು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲು ತಮ್ಮ ಸರ್ಕಾರ ಅಡ್ಡಿಯಾಗುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಕೆಂಗಣ್ಣಿನ ಪಟ್ಟಿಯಲ್ಲಿ ರಾಜ್ಯಪಾಲರು..
ಹೊಸ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವವರ ಪಟ್ಟಿಯಲ್ಲಿ ಭಾರದ್ವಾಜ್ ಅವರೊಂದಿಗೆ ಮಹಾರಾಷ್ಟ್ರದ ಕೆ. ಶಂಕರ ನಾರಾಯಣ (ಕೇರಳ ಮಾಜಿ ಸಚಿವ), ಗುಜರಾತ್ನ ಕಮಲಾ ಬೆನಿವಾಲ್ (ರಾಜಸ್ತಾನದ ಮಾಜಿ ಸಚಿವೆ), ಜಾರ್ಖಂಡ್ನ ಸೈಯದ್ ಅಹ್ಮದ್ (ಮಹಾರಾಷ್ಟ್ರದ ಮಾಜಿ ಸಚಿವ) ಹಾಗೂ ಕೇರಳದ ಶೀಲಾ ದೀಕ್ಷಿತ್ (ದೆಹಲಿಯ ಮಾಜಿ ಮುಖ್ಯಮಂತ್ರಿ) ಅವರು ಸೇರಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.