ರಾಮನಗರ/ಹಾರೋಹಳ್ಳಿ: ‘ಮುಸ್ಲಿಮರ ಮತ ನನಗೆ ಬೇಕಿಲ್ಲ ಎನ್ನುವ ಎಚ್.ಡಿ. ಕುಮಾರಸ್ವಾಮಿ ಅವರು, ತಾಕತ್ತಿದ್ದರೆ ಚನ್ನಪಟ್ಟಣದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಚುನಾವಣೆ ಎದುರಿಸಲಿ. ಆಗ ಮುಸ್ಲಿಮರ ಶಕ್ತಿ ಏನೆಂದು ಗೊತ್ತಾಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.
ನಗರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಮಂಗಳವಾರ ತಮ್ಮ ಸಹೋದರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಜಾತ್ಯತೀತ ತತ್ವದ ಆಧಾರದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಸ್ಲಿಮರು ಕುಮಾರಸ್ವಾಮಿಗೆ ಮತ ಹಾಕಿ ಗೆಲ್ಲಿಸಿದರು. ಆದರೆ, ಅವರ ಮತವೇ ನನಗೆ ಬೇಡ ಎನ್ನುವ ಕುಮಾರಸ್ವಾಮಿ ಮತ್ತೆ ಸ್ಪರ್ಧಿಸಿ ನೋಡಲಿ’ ಎಂದರು.
‘ಕೇವಲ ಮೂರು ಸೀಟಿಗಾಗಿ ತಮ್ಮನ್ನು ಮತ್ತು ಕಷ್ಟಪಟ್ಟು ಕಟ್ಟಿ ಬೆಳೆಸಿದ ಪಕ್ಷವನ್ನು ತಂದೆ–ಮಕ್ಕಳು ಬಿಜೆಪಿಗೆ ಅಡವಿಟ್ಟಿದ್ದಾರೆ. ಈಗ ಕಣ್ಣೀರು ಹಾಕಿಕೊಂಡು ಹೊಸ ನಾಟಕವಾಡುತ್ತಾ ಜನರ ಮುಂದೆ ಬರುತ್ತಿದ್ದಾರೆ. ಅಲ್ಲದೆ ಮೂರೂ ಕಡೆ ದೇವೇಗೌಡರ ಮಗ, ಮೊಮ್ಮಗ ಹಾಗೂ ಅಳಿಯ ಕಣಕ್ಕಿಳಿದಿದ್ದಾರೆ. ಕುಟುಂಬದವರನ್ನು ಬಿಟ್ಟರೆ ಇವರಿಗೆ ಬೇರೆ ಯಾರೂ ಕಾಣುವುದಿಲ್ಲವೆ’ ಎಂದು ವ್ಯಂಗ್ಯವಾಡಿದರು.
ಹಾರೋಹಳ್ಳಿ ವರದಿ
‘ಸೋಲಿನ ಭೀತಿಯಿಂದ ಸುರೇಶ್ ಆಪ್ತರ ಮನೆಗಳ ಮೇಲೆ ಐ.ಟಿ ದಾಳಿ ಮಾಡಿಸಿದರು. ನನ್ನನ್ನು ಜೈಲಿಗೆ ಹಾಕಿದರು. ಆದರೂ ಯಾರಿಗಾದರೂ ನಾನು ತೊಂದರೆ ಮಾಡಿದ್ದೀನಾ? ಮೋಸ ಮಾಡಿದ್ದೀನಾ? ಮಾತೆತ್ತಿದರೆ ನಾನು ಕಲ್ಲು ಒಡೆದೆ ಎಂದು ಕುಮಾರಸ್ವಾಮಿ ಹೇಳುತ್ತಾನೆ. ನನ್ನ ಜಮೀನಿನಲ್ಲಿ ನಾನು ಕಲ್ಲು ಒ ಡೆದರೆ ನಿನಗೇನಯ್ಯಾ ತೊಂದರೆ? ಯಾರ ಬಳಿಯಾದರೂ ಲಂಚ ಪಡೆದಿದ್ದೀನಾ? ಸೊಸೈಟಿ ನಿರ್ದೇಶಕ ಸ್ಥಾನದಿಂದ ಆರಂಭಿಸಿ, ಇದುವರೆಗೆ 8 ಬಾರಿ ಶಾಸಕನಾಗಿ ಆಕೆಯಾಗಿದ್ದೇನೆ. ಎಂದಾದರೂ ನನ್ನ ಮೇಲೆ ಆಪಾದನೆ ಬಂದಿದೆಯಾ?’ ಎಂದು ಪ್ರಶ್ನಿಸಿದರು.
‘ಅನಿತಾಕ್ಕ ಶಾಸಕಿಯಾಗಬೇಕು ಎಂದು ಬಿಜೆಪಿ ಅಭ್ಯರ್ಥಿ ನಾಮಪತ್ರವನ್ನೇ ಹಿಂಪಡೆಯುವಂತೆ ಮಾಡಿದೆ. ಕುಮಾರಸ್ವಾಮಿಯನ್ನು ಸಿ.ಎಂ ಮಾಡಿದೆ. ಅವನ ಬೆನ್ನಿಗೆ ನಿಂತು ಸರ್ಕಾರದಲ್ಲಿ ಕೆಲಸ ಮಾಡಿ. ಆದರೂ ನಿಮಗೆ ವಿಷ ಹಾಕಿದೆ ಎಂದು ಹೇಳುತ್ತೀಯಲ್ಲಾ? ನಿನ್ನನ್ನು ದೇವರು ಹಾಗೂ ಈ ಮತದಾರರು ಕ್ಷಮಿಸುವುದಿಲ್ಲ. ಇದಕ್ಕೆಲ್ಲಾ ಮತದಾರರು ಚುನಾವಣೆಯಲ್ಲಿ ಉತ್ತರ ನೀಡಬೇಕು’ ಎಂದು ಮನವಿ ಮಾಡಿದರು.