ಬಾಗಲಕೋಟೆ: ‘ಬಿಜೆಪಿಯವರೇ ನಾಲ್ಕು ಜನರನ್ನು ಕಳುಹಿಸಿ ಪಾಕಿಸ್ತಾನ ಜೈ ಕೂಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರಿಗೆ ಅನುಮತಿ ನೀಡಿದರೆ ಅಲ್ಲೇ ಅವರಿಗೆ ಡಿಶುಂ... ಡಿಶುಂ.. ಎಂದು ಗುಂಡು ಹೊಡೆದು ಬಿಡುತ್ತಾರೆ’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಬಾಗಲಕೋಟೆಯಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ರಾಯಚೂರಿನಲ್ಲಿ ರವಿ ಬೋಸರಾಜ ಅವರಿಗೆ ರವಿಸಾಬ್ ಜೈ ಎಂದರೆ ಪಾಕಿಸ್ತಾನ ಜೈ ಎಂದು ಆರೋಪಿಸುತ್ತಿದ್ದಾರೆ. ವಿಧಾನಸೌಧದಲ್ಲಿ ಕೂಗಿದವರಿಗೆ ಜೈಲಿಗೆ ಕಳುಹಿಸಿದ್ದೇವೆ. ನ್ಯಾಯಾಧೀಶರು ಶಿಕ್ಷೆ ಕೊಡಬೇಕು. ನಾವು ಕೊಡಲಿಕ್ಕೆ ಆಗಲ್ಲ’ ಎಂದರು.
‘ಪಾಕಿಸ್ತಾನ್ ಜೈ ಎಂದು ಕೂಗಿದವರನ್ನು ಗುಂಡಿಟ್ಟು ಕೊಲ್ಲಲು ಕೋರ್ಟ್ನಿಂದ ಅನುಮತಿ ಪಡೆಯಬೇಕು. ನಾವು ಯಾರೂ ದೇಶದ್ರೋಹಿಗಳಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಹಲವಾರು ಹಿರಿಯರು ಪೊಲೀಸರು ಎದೆಯ ಮೇಲೆ ಗುಂಡು ಹೊಡಿಸಿಕೊಂಡು ಹುತಾತ್ಮರಾಗಿದ್ದಾರೆ’ ಎಂದು ಹೇಳಿದರು.
‘ಬಿಜೆಪಿಯವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಚಾರ್ ಸೌ ಪಾರ್ ಎನ್ನುತ್ತಿದ್ದಾರೆ. ಇನ್ನು ಇಪ್ಪತ್ತು ಸೇರಿಸದರೆ ಚಾರ್ ಸೌ ಬಿಸ್ ಆಗುತ್ತಾರೆ’ ಎಂದು ಟೀಕಿಸಿದರು.