ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಶಾ ಹೊಸ ಹಾಡು

Last Updated 14 ನವೆಂಬರ್ 2013, 19:30 IST
ಅಕ್ಷರ ಗಾತ್ರ

‘ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸ ನಟ–ನಟಿಯರು ಇದ್ದಾರೆ, ಬರುತ್ತಲೇ ಇದ್ದಾರೆ. ಅವರೆಲ್ಲರೂ ಮೊದಲ ಚಿತ್ರದಲ್ಲಿಯೇ ಪರಿಪಕ್ವ ನಟನೆ ತೋರಿಸಿದ್ದಾರಾ? ಈಗ ದೊಡ್ಡ ನಟಿ ಆಗಿರುವವರನ್ನು ಅವರ ಮೊದಲ ಚಿತ್ರದ ಅನುಭವ ಕೇಳಿ. ಒಂದಂತೂ ನಿಜ, ಚೆನ್ನಾಗಿ ನಟನೆ ಕಲಿತವರು ಇಲ್ಲಿಯೇ ಉಳಿಯುತ್ತಾರೆ; ಇಲ್ಲದವರು ತೆರೆಮರೆಯಲ್ಲಿಯೇ ಇರುತ್ತಾರೆ. ಆರಂಭಕ್ಕಿಂತ ಮುನ್ನವೇ ಅಂತ್ಯ ಹಾಡಿದರೆ ಯಾರಿಗೆ ಇಷ್ಟವಾಗುತ್ತೆ ಹೇಳಿ... ಇಲ್ಲಿ ಹೊಸಬರನ್ನು ಬರಮಾಡಿಕೊಳ್ಳುವ ಮನಸ್ಸುಗಳ ಕೊರತೆ ಇದೆ...’

‘ನನ್ನ ಮೊದಲ ಚಿತ್ರ ಕನ್ನಡದ್ದೇ ಆಗಬೇಕಿತ್ತು. ಈಗ ನೋಡಿದರೆ ಅದು ಹಾಗೆ ಆಗುವ ಲಕ್ಷಣ ಕಾಣುತ್ತಿಲ್ಲ. ತೆಲುಗು ಹಾಗೂ ತಮಿಳಿನಲ್ಲಿ ಅವಕಾಶಗಳು ಬರುತ್ತಿವೆ. ಕನ್ನಡದಲ್ಲೂ ಮೂರು ಕಥೆ ಕೇಳಿದ್ದೇನೆ. ಯಾವ ಚಿತ್ರ ಮೊದಲು ಎನ್ನುವುದು ಇನ್ನೂ ನಿರ್ಧಾರ ಆಗಿಲ್ಲ’.

ಹೀಗೆ, ತುಣುಕು ತುಣುಕಾಗಿ ಮಾತನಾಡಿದ್ದು ನಿಶಾ ಯೋಗೇಶ್ವರ್‌. ಫ್ಯಾಷನ್‌ ಶೋ ಒಂದರ ಮಾರ್ಜಾಲ ನಡಿಗೆಗೆಂದು ಮೈಸೂರಿಗೆ ಬಂದಿದ್ದ ನಿಶಾ, ಬಿಡುವಿನ ಸಮಯದಲ್ಲಿ ತಮ್ಮ ಸಿನಿಮಾ ಅವಕಾಶಗಳ ಬಗ್ಗೆ ಮಾತನಾಡಿದರು. ಅವರ ಮಾತುಗಳಲ್ಲಿ ‘ಅಂಬರೀಷ’ ಚಿತ್ರದ ಅವಕಾಶ ಕೈತಪ್ಪಿದ ಬಗ್ಗೆ ನಿರಾಶೆಯೂ ವಿಷಾದವೂ ಇದ್ದಂತಿತ್ತು.

ಕಳೆದ ವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ, ‘ಗಾಯದ ಕಾರಣದಿಂದಾಗಿ ಅಂಬರೀಷ ಚಿತ್ರದಿಂದ ನಿಶಾ ಅವರು ಹೊರಗುಳಿಯುತ್ತಿದ್ದಾರೆ’ ಎಂದು ಹೇಳಿತ್ತು. ಆ ಮಾತುಗಳನ್ನು ನಿಶಾ ಮೈಸೂರಿನಲ್ಲೂ ಪುನರುಚ್ಚರಿಸಿದರು. ‘ಅದು ಮುಗಿದ ಕಥೆ, ಹೊಸ ಚಿತ್ರಗಳಲ್ಲಿ ಶೀಘ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದೇನೆ. ಮಾತುಕತೆ ನಡೆಯುತ್ತಿದೆ’ ಎನ್ನುವ ಮಾತನ್ನೂ ಹೇಳಿದರು. 

‘ನಾನು ಪರಿಪಕ್ವ ನಟಿಯಾಗುತ್ತೇನೆ ಎಂಬ ಭರವಸೆ ಇದ್ದೇ ಇದೆ. ಮೊದಲ ಚಿತ್ರದಲ್ಲಿಯೇ ಅದನ್ನು ಯಾರೂ ಬಯಸಬಾರದು. ಕೃಷ್ಣಮೂರ್ತಿ ಕವತ್ತಾರ್ ಹಾಗೂ ಗೌರಿ ದತ್ತು ಅವರ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಅಭಿನಯ ನನಗೂ ಗೊತ್ತು. ಕಾಲು ನೋವು ಇದ್ದಾಗಲೂ ಅಭಿನಯಿಸಿ ಎಂದರೆ ಹೇಗೆ?’ ಎಂದು ನಿಶಾ ಪ್ರಶ್ನಿಸಿದರು. ಅವರ ಪ್ರಶ್ನೆಯಲ್ಲಿ ‘ಅಂಬರೀಷ’ ಚಿತ್ರದ ಅವಕಾಶ ಕೈತಪ್ಪಿದ ಬಗ್ಗೆ ಹಾಗೂ ಆ ಘಟನೆಯನ್ನು ಕೆಲವರು ಕೆಟ್ಟದಾಗಿ ಬಿಂಬಿಸಿದ ಬಗ್ಗೆ ಬೇಸರವಿತ್ತು.

‘ದರ್ಶನ್‌ ನಾಯಕರಾಗಿರುವ ಇನ್ನೊಂದು ಚಿತ್ರದಲ್ಲಿ ಅಭಿನಯಿಸುವ ಸಂಬಂಧ ಮಾತುಕತೆ ಅಂತಿಮ ಹಂತದಲ್ಲಿದೆ. ನನ್ನ ಫೆವರೀಟ್‌ ಹೀರೋಗಳಾದ ಪುನೀತ್‌ರಾಜ್‌ಕುಮಾರ್‌, ಯಶ್ ಹಾಗೂ ಸುದೀಪ್‌ ಜತೆಗೆ ಕೆಲಸ ಮಾಡಬೇಕು ಎಂಬ ಮಹದಾಸೆ ಇದ್ದೇ ಇದೆ’ ಎಂದೂ ನಿಶಾ ಕಣ್ಣರಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT