ಕೊಲಂಬೊ(ಪಿಟಿಐ): ‘ಎಲ್ಟಿಟಿಇ ಮಾಜಿ ಕಾರ್ಯಕರ್ತರಿಗೆ ಪುನರ್ವಸತಿ ಕಲ್ಪಿಸುವಾಗ ಲಂಕಾ ಸರ್ಕಾರ ಅವರಿಗೆ ವಿಷಯುಕ್ತ ಚುಚ್ಚುಮದ್ದು ನೀಡಿದೆ’ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಲ್ಲಿನ ಉತ್ತರ ಪ್ರಾಂತೀಯ ಮುಖ್ಯಮಂತ್ರಿ ಸಿ.ವಿ. ವಿಘ್ನೇಶ್ವರನ್ ಹೇಳಿದ್ದಾರೆ.
‘ಈ ಬಗ್ಗೆ ನಮಗೆ ದೂರುಗಳು ಬಂದಿವೆ. ಅದನ್ನು ಪರಿಶೀಲಿಸಬೇಕಾಗಿದೆ. ದೂರಿನ ಬಗ್ಗೆ ವರದಿ ನೀಡುವಂತೆ ಕೇಳಿದ್ದೇವೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.
ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ವೇಳೆ ಸುಮಾರು 40 ಮಾಜಿ ಎಲ್ಟಿಟಿಇ ಕಾರ್ಯಕರ್ತರಿಗೆ ವಿಷಕಾರಿ ಚುಚ್ಚುಮದ್ದು ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ಸರ್ಕಾರ ಈ ಆರೋಪ ಅಸಂಬದ್ಧ ಎಂದು ತಳ್ಳಿಹಾಕಿತ್ತು.
ವಿಷಕಾರಿ ಚುಚ್ಚು ಮದ್ದು ಪಡೆದ ಕೆಲವರು ದೈಹಿಕವಾಗಿ ಅಂಗವಿಕಲರಾಗಿದ್ದು, ಕನಿಷ್ಠ 6 ಮಂದಿ ಕ್ಯಾನ್ಸರ್ಗೆ ತುತ್ತಾಗಿ ಮೃತ ಪಟ್ಟಿದ್ದಾರೆ ಎಂದು ಅಲ್ಲಿನ ತಮಿಳು ಸಂಘಟನೆಗಳು ಆರೋಪಿಸಿವೆ.
2009ರಲ್ಲಿ ಎಲ್ಟಿಟಿಇ ಉಗ್ರಗಾಮಿಗಳು ಶ್ರೀಲಂಕಾ ಸೇನೆಗೆ ಶರಣರಾಗಿದ್ದರು. ಈ ವೇಳೆ ಶರಣಾಗಿದ್ದ ಸುಮಾರು 800 ಎಲ್ಟಿಟಿಇ ಕಾರ್ಯಕರ್ತರಿಗೆ ಪುನರ್ವಸತಿಯನ್ನು ಕಲ್ಪಿಸಿ, ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶ ಮಾಡಿ ಕೊಡಲಾಗಿತ್ತು. ಅವರಿಗೆ ಜೀವನಾಧಾರ ಕೌಶಲ್ಯಗಳು ಮತ್ತು ಭಾಷಾ ತರಬೇತಿಯನ್ನು ನೀಡಲಾಗಿತ್ತು ಎಂದು ಲಂಕಾ ಸರ್ಕಾರ ಈ ಹಿಂದೆ ಹೇಳಿಕೊಂಡಿತ್ತು.