ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ನ ಜನದಟ್ಟಣೆ ಪ್ರದೇಶದಲ್ಲಿ ಶನಿವಾರ ಸೇನಾಪಡೆ ಸಿಬ್ಬಂದಿ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಘಟನೆಯಲ್ಲಿ ಇನ್ನಿಬ್ಬರು ಯೋಧರು ಗಾಯಗೊಂಡಿದ್ದು, ಉಗ್ರರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಸೇನಾಪಡೆ ಅಧಿಕಾರಿ ತಿಳಿಸಿದ್ದಾರೆ.
ಪಾಂಪೋರ್ನ ಕದ್ಲಬಾಲ್ನಲ್ಲಿ ಮಧ್ಯಾಹ್ನ 3.15ರ ವೇಳೆಗೆ ಘಟನೆ ನಡೆದಿದೆ. ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಉಗ್ರರು, ಸೇನಾಪಡೆ ಸಿಬ್ಬಂದಿ ಇದ್ದ ವಾಹನದ ಮೇಲೆ ಸತತವಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ನಾಗರಿಕರಿಗೆ ಪ್ರಾಣಹಾನಿಯಾಗುವುದನ್ನು ತಪ್ಪಿಸಲು ಪ್ರತಿದಾಳಿ ನಡೆಸಲಿಲ್ಲ. ಜನದಟ್ಟಣೆಯ ಲಾಭ ಪಡೆದ ಉಗ್ರರು ಪರಾರಿಯಾದರು’ ಎಂದು ಸಿಆರ್ಪಿಎಫ್ ಐಜಿ (ಕಾರ್ಯಾಚರಣೆ) ಹೇಳಿದ್ದಾರೆ.
ಭದ್ರತಾ ಸಿಬ್ಬಂದಿ ಸಂಜೆಯವರೆಗೂ ಮನೆಮನೆಗೆ ತೆರಳಿ ಶೋಧ ಕಾರ್ಯ ನಡೆಸಿದರು ಎಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ. ಸೇನಾಪಡೆ ಸಿಬ್ಬಂದಿ ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ.
ಮುಫ್ತಿ ಖಂಡನೆ: ಸೇನಾಪಡೆ ಸಿಬ್ಬಂದಿ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ. ಗಲಭೆಯಿಂದ ಎಂದಿಗೂ ವಿಷಯಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಜನರ ಸಂಕಷ್ಟ ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳಿದ್ದಾರೆ.