ಶ್ರೀನಿವಾಸಪುರ: ಪಟ್ಟಣದ ಹೊರ ವಲಯದ ಗಟ್ಲಡವಿ ಕಾಡಿನ ನಡುವಿರುವ ಸುಬ್ಬಮ್ಮನ ಕುಂಟೆ ಗಣೇಶ ಮೂರ್ತಿಗಳ ವಿಸರ್ಜನೆಯಿಂದ ಕಲುಷಿತಗೊಂಡಿದೆ.
ಕುಂಟೆ ಪ್ರಾಣಿಗಳಿಗೆ ನೀರಿನ ಆಸರೆಯಾಗಿದೆ. ಕಾಡಿನಲ್ಲಿ ವಾಸಿಸುವ ಜಿಂಕೆ, ಕಾಡು ಹಂದಿ, ಮೊಲ ಮುಂತಾದ ಪ್ರಾಣಿಗಳು ರಾತ್ರಿ ಬಂದು ನೀರಡಿಕೆ ನೀಗಿಸಿಕೊಳ್ಳುತ್ತವೆ. ಕೆಲವು ವೇಳೆ ಹಗಲಿನಲ್ಲೂ ಜಿಂಕೆಗಳು ನೀರು ಕುಡಿಯುತ್ತವೆ. ಕೋತಿಗಳಿಗೆ ಇಲ್ಲಿನ ನೀರೇ ಆಧಾರ.
ಕಾಡಿಗೆ ಮೇಯಲು ಹೋಗುವ ಶ್ರೀನಿವಾಸಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ದನಕರುಗಳಿಗೆ ಕುಂಟೆ ನೀರು ಆಸರೆಯಾಗಿದೆ. ಇಷ್ಟು ಮಹತ್ವ ಪಡೆದಿದ್ದರೂ ಗಣೇಶ ವಿಗ್ರಹಗಳನ್ನು ಕುಂಟೆಯಲ್ಲಿ ವಿಸರ್ಜಿಸಲಾಗುತ್ತದೆ.
ಅಪಾಯಕಾರಿ ಬಣ್ಣಗಳು ನೀರಿನ ಜೊತೆ ಸೇರಿ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಹಳೆಪೇಟೆ ದನಗಾಹಿ ಸೊಣ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಜನರು ಈ ಬಗ್ಗೆ ಜಾಗೃತರಾಗಿ ವಿಗ್ರಹಗಳನ್ನು ಕುಂಟೆಯಲ್ಲಿ ವಿಸರ್ಜಿಸಬಾರದು ಎಂದು ಅವರು ಕೋರಿದ್ದಾರೆ.
ಸುಂಕರ ಸುಬ್ಬಮ್ಮ ಎಂಬ ಮಹಿಳೆ ಕಾಡಿಗೆ ಮೇಯಲು ಬರುವ ಜಾನುವಾರುಗಳು ಹಾಗೂ ಕಾಡು ಪ್ರಾಣಿ– ಪಕ್ಷಿಗಳ ದಾಹ ತಣಿಸುವ ಉದ್ದೇಶದಿಂದ ಈ ಕುಂಟೆ ನಿರ್ಮಿಸಿದ್ದಾಗಿ ಪ್ರತೀತಿ ಇದೆ.