ಬೆಂಗಳೂರು:ಬಿಎಸ್ಎನ್ಎಲ್ ಸಂಸ್ಥೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪಿಸಿರುವ ‘ಮೋಬಿಕ್ಯಾಷ್’ ಸೇವೆಯನ್ನು ಸಂಸ್ಥೆಯ ರಾಜ್ಯದ ಪ್ರಧಾನ ಟೆಲಿಕಾಂ ವ್ಯವಸ್ಥಾಪಕ ಪಿ.ನಾಗರಾಜು ಅವರು ಗುರುವಾರ ಚಾಲನೆ ನೀಡಿದರು.
ಬಳಸುವುದು ಹೇಗೆ: ಮೊಬೈಲ್ ಬಳಸುವವವರು ತಮ್ಮ ಮೊಬೈಲ್ ಸಂಖ್ಯೆಯನ್ನು ಬಿಎಸ್ಎನ್ಎಲ್ ಪ್ರತಿನಿಧಿ ಬಳಿ ನೋಂದಾಯಿಸಬೇಕು. ಬಳಿಕ ಅವರ ಬಳಿ ಹಣವನ್ನು ಜಮಾ ಮಾಡಬೇಕು. ಅಗತ್ಯವಿದ್ದಾಗ ಅವರಿಂದ ಅಥವಾ ರಾಜ್ಯದ ಬೇರೆ ಭಾಗದಲ್ಲಿರುವ ಬಿಎಸ್್ಎನ್ಎಲ್ ಪ್ರತಿನಿಧಿಯಿಂದ ಹಣ ಹಿಂಪಡೆಯಬಹುದು. ಮೊಬೈಲ್ ಕರೆನ್ಸಿ ರಿಚಾರ್ಜ್, ನೀರಿನ ಮತ್ತು ವಿದ್ಯುತ್ ಶುಲ್ಕ ಪಾವತಿ, ಬ್ಯಾಂಕ್ ಖಾತೆಗೆ ಹಣ ಜಮೆ, ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡುವ ಅವಕಾಶ ಇದರಲ್ಲಿದೆ.
ಸಂಸ್ಥೆಯ ಹಣ ಜಮೆಯ ಮಿತಿಯನ್ನು ₹6ಲಕ್ಷಕ್ಕೆ ನಿಗದಿಪಡಿಸಿದೆ. ಸೇವೆ ಪಡೆಯುವ ಗ್ರಾಹಕರು ಸಂಸ್ಥೆಗೆ ನಿಗದಿತ ಮೊತ್ತದ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ.ಪಿ.ನಾಗರಾಜು ಮಾತನಾಡಿ, ‘ನೋಟು ರದ್ದತಿಯಿಂದ ದೇಶದಲ್ಲಿ ಹಣದ ಕೊರತೆಯಿದೆ. ಈ ಸೇವೆಯಿಂದ ಆ ಸಮಸ್ಯೆ ಪರಿಹರಿಸಬಹುದು. ಇದರಿಂದ ಗ್ರಾಮೀಣ ಭಾಗದ ಅನಕ್ಷರಸ್ತರಿಗೆ ಅನುಕೂಲವಾಗಲಿದೆ. ಬ್ಯಾಂಕ್ ಖಾತೆ ಇಲ್ಲದವರೂ ಸೇವೆ ಬಳಸಬಹುದು. ಇದರಿಂದ ದೇಶದಲ್ಲಿ ನಗದು ರಹಿತ ವ್ಯವಹಾರ ಹೆಚ್ಚಿಲಿದೆ’ ಎಂದರು. ಮಾಹಿತಿಗೆ www.karnataka.bsnl.co.in ಲಾಗಿನ್ ಆಗಬಹುದು.