ಅಜ್ಜಂಪುರ: ಪಟ್ಟಣದ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಜಿ.ಸತ್ಯವತಿ, ರಾಸುಗಳಿಗೆ ಅಸಮರ್ಪಕ ಮೇವು ಪೂರೈಕೆ ಕಾರಣ ಕೇಳಿ ಅಧಿಕಾ ರಿಗಳನ್ನು ಹಾಗೂ ಅಪೂರ್ಣ ಕಾಮಗಾರಿ ನಡೆಸಿರುವ ಕೆಆರ್ಐಡಿಎಲ್ ಸಂಸ್ಥೆಯ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಒಂದು ವರ್ಷದಲ್ಲಿ ಎಷ್ಟು ರಾಸುಗಳು ಮೃತಪಟ್ಟಿವೆ? ಬೇಸಿಗೆಯ ಇಂದಿನ ದಿನಗಳಲ್ಲಿ ಜಾನುವಾರು ಮೇವಿಗೆ ಏಕೆ ಮುಂಜಾಗೃತಿ ವಹಿಸಿಲ್ಲ? ಮೇವು ಸಂಗ್ರಹಣೆ ಏಕೆ ಮಾಡಿಲ್ಲ? ಇಡೀ ಕಾವಲಿನ ನೂರಾರು ಎಕರೆಯಲ್ಲಿ ಬೆಳೆದಿರುವ ಅನುಪಯುಕ್ತ ಜಾಲಿಗಿಡ ತೆರವಿಗೆ ಏಕೆ ಕ್ರಮ ಕೈಗೊಂಡಿಲ್ಲ? ಎಂಬ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಕೇಂದ್ರದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಹರಿಹಾಯ್ದರು.
ಮೇವು ಬೆಳೆಯುವ ಭೂಮಿಗೆ ತಂತಿ ಬೇಲಿ ಅಳವಡಿಕೆ, ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ಮುಖ್ಯ ಕಾಮಗಾರಿಗಳನ್ನು ಒಂದು ವರ್ಷದಿಂದಲೂ ಪೂರ್ಣಗೊಳಿ ಸದಿ ರುವ ಬಗ್ಗೆ ಗುತ್ತಿಗೆ ಸಂಸ್ಥೆಯ ಅಧಿಕಾರಿ ಡೆಲ್ವಿ ನೀಡಿದ ಅಸಮರ್ಪಕ ಉತ್ತರದಿಂದ ಆಸಮಧಾನಗೊಂಡ ಜಿಲ್ಲಾಧಿಕಾರಿ, ಹಣ ಪಡೆದು 10 ತಿಂಗಳಾಗಿವೆ. ಕೆಲಸ ಯಾಕೆ ಮಾಡಿಲ್ಲ? ಕೆಲಸ ಮಾಡಿಕೊಡಿ ಎಂದು ನಿಮ್ಮಲ್ಲಿ ಭಿಕ್ಷೆ ಬೇಡಬೇಕಾ? ಜಾನುವಾರು ಮೇವು ಬೆಳೆಯಲು ಅಗತ್ಯವಾದ ಕಾಮಗಾರಿ ವಿಳಂಬ ಮಾಡಿರುವ ನಿಮಗೆ ನಾಚಿಗೆ ಆಗೋಲ್ವೇ ನಿಮ್ಮ ಕಾರ್ಯವೈಖರಿ ಬಗ್ಗೆ ದೂರು ಬಂದಿದ್ದು, ನಿಮ್ಮಿಂದ ಕಾಮಗಾರಿ ಗುತ್ತಿಗೆಯನ್ನು ಏಕೆ ಹಿಂಪಡೆಯಬಾರದು ? ನಿಮ್ಮನ್ನು ಕಪ್ಪು ಪಟ್ಟಿಗೆ ಸೇರಿಸಲು ಸೂಚಿಸಲಾಗುವುದು. ಜಿಲ್ಲೆಯಿಂದ ಹೊರ ಹೋಗಿ ಎಂದು ಆಕ್ರೋಶ ಹೊರಹಾಕಿದರು.
ಅಮೃತ್ ಮಹಲ್ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್. ಶಿವಾನಂದ್, ಕೇಂದ್ರದ ಜಂಟಿ ನಿರ್ದೇಶಕ ಹಲಗಪ್ಪ, ಸಹಾಯಕ ನಿರ್ದೇ ಶಕ ವೀರಭದ್ರಯ್ಯ, ಅಧೀಕ್ಷಕ ಶೌಕತ್ ಆಲಿ, ಉಪವಿಭಾಧಿಕಾರಿ ಸರೋಜ, ತಹಶೀಲ್ದಾರ್ ಮಂಜೇಗೌಡ, ರಂಗಸ್ವಾಮಿ ಮತ್ತಿತರರಿದ್ದರು.