‘ಕಾಡಿನ ಮರಗಳ ಕಡಿಯುತ್ತಾರೆ / ಕುರ್ಚಿ ಟೇಬಲ್ ಮಾಡುತ್ತಾರೆ / ಕುರ್ಚಿ ಇಲ್ಲದೇ ಇರಬಹುದು / ಮಳೆ ಇಲ್ಲದೆ ಇರಬಹುದೇ? / ತಿಳಿದೂ ಹೀಗೆ ಮಾಡಬಹುದೇ?’
– ಇದು ಧಾರವಾಡದ ಪುಟಾಣಿ ಕವಯಿತ್ರಿ ನಭಾ ಒಕ್ಕುಂದ ಅವರ ಪ್ರಶ್ನೆ. ಮಗುವೊಂದು ಈ ಹೊತ್ತಿನ ಸಂಕಟಗಳ ಬಗ್ಗೆ ಯೋಚಿಸುತ್ತಿದೆ ಎಂದು ಬೆರಗುಪಡಬೇಕೊ ಅಥವಾ ಮಕ್ಕಳ ಬಾಲ್ಯವನ್ನು ದುಗುಡಕ್ಕೆ ಒಡ್ಡುವ ಸಂದರ್ಭ ಸೃಷ್ಟಿಯಾಗಿರುವ ಬಗ್ಗೆ ವಿಷಾದ ಪಡಬೇಕೊ ಎನ್ನುವ ಗೊಂದಲವನ್ನು ನಭಾ ಅವರ ರಚನೆಗಳು ಹುಟ್ಟಿಸುತ್ತವೆ.
ಇಲ್ಲಿನ ಬಹುತೇಕ ರಚನೆಗಳು ಎಳೆಯ ಕವಿಯ ಅಂತರಂಗದ ಪಿಸುನುಡಿಗಳಂತೆ ಕೇಳಿಸುತ್ತವೆ. ಸರಳವಾಗಿ, ಆದರೆ ಸೂಕ್ಷ್ಮ ಸಂಗತಿಗಳನ್ನು ಒಳಗೊಳ್ಳುವ ಮೂಲಕ ಈ ರಚನೆಗಳು ಗಮನಸೆಳೆಯುತ್ತವೆ. ಮಕ್ಕಳ ಬಾಲ್ಯದ ಮುಗ್ಧಲೋಕ ಕಾಣೆಯಾಗುತ್ತಿರುವ ಸುಳಿವಿನ ರೂಪದಲ್ಲೂ ‘ಚಿಟ್ಟೆ’ಯನ್ನು ನೋಡಬಹುದು. ಎಷ್ಟು ಕಡಿದರೂ ಮತ್ತೆ ಮತ್ತೆ ಚಿಗುರುವ ಪಾರಿಜಾತ ಗಿಡದ ಕುರಿತ ಅಚ್ಚರಿಯೂ ಇಲ್ಲಿದೆ; ಅದು ಸಮಾಧಾನ ಹುಟ್ಟಿಸುವಂತಿದೆ.