ಈ ತಿಂಗಳ 11ರಂದು ಕರ್ನಾಟಕ ವೈದ್ಯಸಾಹಿತ್ಯ ಪರಿಷತ್ತು ಒಂದು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವೈದ್ಯ ಸಾಹಿತಿ ಡಾ. ಸಿ.ಆರ್. ಚಂದ್ರಶೇಖರ್ ಅವರಿಗೆ ‘ಜೀವಮಾನ ಪ್ರಶಸ್ತಿ’ ಪ್ರದಾನ ಮಾಡಲಾಯಿತು ಹಾಗೂ ಹತ್ತು ವರ್ಷಗಳಿಂದ ನೀಡದೆ ಉಳಿದಿದ್ದ ‘ಕುವೆಂಪು ವೈದ್ಯ ಸಾಹಿತ್ಯ ಪ್ರಶಸ್ತಿ’ಗಳನ್ನೂ ಕೊಡಮಾಡಲಾಗಿತ್ತು.
ಈ ಅರ್ಥಪೂರಿತ ಕಾರ್ಯಕ್ರಮದಲ್ಲಿ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು. ಛಾಯಾಗ್ರಾಹಕರು ಬಹಳಷ್ಟು ಫೋಟೊಗಳನ್ನು ಕ್ಲಿಕ್ಕಿಸಿ, ವೈದ್ಯ ಸಾಹಿತ್ಯ ಪ್ರಚಾರವಾಗುತ್ತದೆ ಎನ್ನುವ ಭರವಸೆ ಮೂಡಿಸಿದ್ದರು. ಆದರೆ, ಆ ಕಾರ್ಯಕ್ರಮದ ಬಗ್ಗೆ ಯಾವ ಪತ್ರಿಕೆಯಲ್ಲೂ ಒಂದು ಸಾಲನ್ನೂ ನಾವು ಕಾಣಲಿಲ್ಲ.
ಹೀಗೆಯೇ, ಎರಡು ವರ್ಷಗಳ ಹಿಂದೆ, ಕರ್ನಾಟಕ ವೈದ್ಯ ಸಾಹಿತ್ಯದ ವಾರ್ಷಿಕೋತ್ಸವವನ್ನು ಎರಡು ದಿನಗಳ ಕಾಲ ‘ಕಿಮ್ಸ್’ ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಜರುಗಿಸಲಾಯಿತು. ಹೆಸರಾಂತ ಸಾಹಿತಿಗಳೂ ಪ್ರಸಿದ್ಧ ವಾಗ್ಮಿಗಳೂ ಮಾತನಾಡಿದರು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಆದರೇನು, ಅಲ್ಲಿಗೂ ಪತ್ರಕರ್ತರು ಬಂದಿದ್ದರು. ಹತ್ತಾರು ಫೋಟೊಗಳನ್ನು ಕ್ಲಿಕ್ಕಿಸಿದರು. ಆದರೂ, ಅದರ ವಿಷಯವಾಗಿ ಎಲ್ಲಾ ಪತ್ರಿಕೆಗಳೂ ಮೌನ ವಹಿಸಿದವು!
ಇದೇನು, ವೈದ್ಯ ಸಾಹಿತ್ಯದ ಬಗ್ಗೆ ಅವಗಣನೆ ಎಂದು ಭಾವಿಸೋಣವೇ? ಇಲ್ಲವೆ, ಈ ನಿರ್ಲಕ್ಷ್ಯಕ್ಕೆ ಬೇರೆ ಏನಾದರೂ ಕಾರಣಗಳಿವೆ ಎಂದು ತಿಳಿಯೋಣವೇ?
ಡಾ. ಲೀಲಾವತಿ ದೇವದಾಸ್, ಬೆಂಗಳೂರು