ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿ ಹುಳಿ ಖಾರದ ಖಾದ್ಯಗಳು

Last Updated 24 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಈರುಳ್ಳಿಹೂವು ತೊಕ್ಕು
ಬೇಕಾಗುವ ಸಾಮಗ್ರಿಗಳು: ಸಣ್ಣಗೆ ಹೆಚ್ಚಿರುವ ಈರುಳ್ಳಿ ಒಂದು ಕಪ್‌, ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಮೆಂತ್ಯದಕಾಳು ಸ್ವಲ್ಪ, ಹುಣಸೆಹಣ್ಣು ಎರಡು ಇಂಚು, ಬೆಲ್ಲದ ಪುಡಿ ಒಂದು ಚಮಚ, ಸಾಸಿವೆ ಕಾಲು ಚಮಚ, ಕೆಂಪು ಮೆಣಸು ಎಂಟು, ಎಣ್ಣೆ ನಾಲ್ಕು ಚಮಚ.

ತಯಾರಿಸುವ ವಿಧಾನ: ಕೆಂಪು ಮೆಣಸು, ಉಪ್ಪು, ಮೆಂತ್ಯ, ಹುಣಸೆಹಣ್ಣು ಸೇರಿಸಿ ನುಣ್ಣಗೆ ರುಬ್ಬಿ. ದಪ್ಪ ತಳದ ಬಾಂಡ್ಲಿಗೆ ಎಣ್ಣೆ ಹಾಕಿ ಕಾಯಿಸಿ, ಸಾಸಿವೆಯನ್ನು ಹಾಕಿ ಸಿಡಿಸಿ ಹೆಚ್ಚಿರುವ ಈರುಳ್ಳಿಹೂವು ಸಣ್ಣ ಉರಿಯಲ್ಲೆ ಮೆತ್ತಗಾಗುವ ತನಕ ಹುರಿದು ನಂತರ ರುಬ್ಬಿರುವ ಮಿಶ್ರಣ ಮತ್ತು ಬೆಲ್ಲವನ್ನು ಸೇರಿಸಿ ಸ್ವಲ್ಪ ಹೊತ್ತು ಕೆದಕಿದರೆ ಈರುಳ್ಳಿಹೂವು ತೊಕ್ಕು ರೆಡಿ. ಇದು ಚಪಾತಿ, ರೊಟ್ಟಿ ಹಾಗೂ ಅನ್ನಕ್ಕೆ ಹೊಂದುತ್ತದೆ.

ಮಾವಿನಕಾಯಿ ಚಟ್ನಿ
ಬೇಕಾಗುವ ಸಾಮಗ್ರಿಗಳು: ಮಧ್ಯಮ ಗಾತ್ರದ ಗಿಣಿಮೂತಿಯ ಕಾಯಿ ಒಂದು, ಹಸಿ ಮೆಣಸು ಐದು, ಕಾಯಿತುರಿ 1ಕಪ್‌,  ಅರಶಿನಪುಡಿ ಸ್ವಲ್ಪ. ಇಂಗು ಮೂರು ಚಿಟಿಕೆ, ಹುರಿದ ಸಾಸಿವೆ ಕಾಲು ಚಮಚ, ರುಚಿಗೆ ಉಪ್ಪು.

ತಯಾರಿಸುವ ವಿಧಾನ: ಮಾವಿನಕಾಯಿಯನ್ನು ಸಿಪ್ಪೆ ಸಮೇತ ಹೋಳುಗಳನ್ನು ಮಾಡಿ ಉಳಿದ ಸಾಮಗ್ರಿಗಳನ್ನು ಸೇರಿಸಿ ರುಬ್ಬಿ ಸ್ವಲ್ಪ ಎಣ್ಣೆಯಲ್ಲಿ ಸಾಸಿವೆಯನ್ನು ಸಿಡಿಸಿ ಸೇರಿಸಿದರೆ ರೆಡಿ. ಇದು ಅನ್ನ, ಚಪಾತಿ, ದೋಸೆಗೆ ಹೊಂದುತ್ತದೆ.

ಹೆಸರುಬೇಳೆ ಹಲ್ವಾ
ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ ಅರ್ಧ ಕಪ್‌, ಬೆಲ್ಲ ಮುಕ್ಕಾಲು ಕಪ್‌, ಹಾಲು ಒಂದೂವರೆ ಕಪ್‌, ಏಲಕ್ಕಿಪುಡಿ, ಗೋಡಂಬಿ ತಲಾ ಸ್ವಲ್ಪ ಹಾಗೂ ತುಪ್ಪ ನಾಲ್ಕು ಚಮಚ.

ತಯಾರಿಸುವ ವಿಧಾನ: ಹೆಸರುಬೇಳೆಯನ್ನು ಐದು ಗಂಟೆ ನೆನೆಸಬೇಕು. ನೀರಿನಂಶ ತೆಗೆದು ನುಣ್ಣಗೆ ರುಬ್ಬಿ, ಹಾಲು, ಬೆಲ್ಲ ಮತ್ತು ರುಬ್ಬಿದ ಮಿಶ್ರಣವನ್ನು ಸೇರಿಸಿ ದಪ್ಪ ತಳದ ಬಾಣಲಿಯಲ್ಲಿ ಹಾಕಿ ಸಣ್ಣ ಉರಿಯಲ್ಲೆ ಕೈಬಿಡದೆ ಕೆದಕುತ್ತಿರಬೇಕು. ಸ್ವಲ್ಪ ಗಟ್ಟಿಯಾದ ನಂತರ ತುಪ್ಪ ಹಾಗೂ ಏಲಕ್ಕಿಪುಡಿಯನ್ನು ಸೇರಿಸಿ ಕೆದಕಬೇಕು. ಈ ಮಿಶ್ರಣ ಸ್ವಲ್ಪ ತುಪ್ಪ ತಳಭಾಗ ಬಿಟ್ಟಾಗ ಒಲೆ ಆರಿಸಿ ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಅಲಂಕರಿಸಿದರೆ ಹೆಸರುಬೇಳೆ ಹಲ್ವಾ ಸವಿಯಲು ಸಿದ್ಧ.

ಅವರೆಕಾಳಿನ ಸಾಂಬಾರ್‌
ಬೇಕಾಗುವ ಸಾಮಗ್ರಿಗಳು: ಅವರೆಕಾಳು ಎರಡು ಕಪ್‌, ಸಾಕಷ್ಟು ನೀರು, ಕೆಂಪು ಮೆಣಸು ಹತ್ತು, ಧನಿಯಾ ಒಂದು ಚಮಚ, ಕರಿಮೆಣಸು ಎಂಟು ಕಾಳು, ಜೀರಿಗೆ, ಮೆಂತ್ಯ, ಸಾಸಿವೆ ಸೇರಿ ಕಾಲು ಚಮಚ, ಕರಿಬೇವು ಎರಡು ಎಲೆ, ತೆಂಗಿನ ತುರಿ ಅರ್ಧ ಕಪ್‌, ಈರುಳ್ಳಿ ಎರಡು ಚೂರು, ಸುಟ್ಟ ಈರುಳ್ಳಿ ಚಿಕ್ಕದು ಒಂದು, ಒಣಕೊಬ್ಬರಿ ಚೂರು ಒಂದೂವರೆ ಇಂಚು, ಅರಶಿನಪುಡಿ ಎರಡು ಚಿಟಿಕೆ, ಹುಣಸೆ ನೀರು ಒಂದು ಚಮಚ, ಬೆಲ್ಲ ಒಂದು ಚೂರು, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವು ಒಂದು ಕಡ್ಡಿ, ಸಾಸಿವೆ ಕಾಲು ಚಮಚ, ಶುಂಠಿ ಒಂದು ಚೂರು.

ತಯಾರಿಸುವ ವಿಧಾನ: ಅವರೆಕಾಳನ್ನು ಸಾಕಷ್ಟು ನೀರಿನಲ್ಲಿ ಬೇಯಿಸಿ, ಧನಿಯಾ, ಕರಿಮೆಣಸು, ಮೆಂತ್ಯ, ಸಾಸಿವೆ, ಕರಿಬೇವು, ಜೀರಿಗೆಯನ್ನು ಎಣ್ಣೆ ಹಾಕದೇ ಹುರಿದುಕೊಳ್ಳಬೇಕು. ಕೆಂಪು ಮೆಣಸಿಗೆ ಸ್ವಲ್ಪ ಎಣ್ಣೆಯಲ್ಲಿ ಹುರಿದು, ಒಣ ಕೊಬ್ಬರಿಯನ್ನು ಸುಟ್ಟು, ಕಾಯಿ ತುರಿಯನ್ನು ಸೇರಿಸಿ ಸ್ವಲ್ಪ ರುಬ್ಬಿ, ಹಸಿ ಈರುಳ್ಳಿ ಮತ್ತು ಸುಟ್ಟ ಈರುಳ್ಳಿ, ಅರಶಿನಪುಡಿ ಶುಂಠಿಚೂರನ್ನು ಸೇರಿಸಿ ರುಬ್ಬಿ ಕೊನೆಗೆ ಬೆಂದಕಾಳನ್ನು 3 ಚಮಚ ಸೇರಿಸಿ ರುಬ್ಬಿ ಮಿಶ್ರಣವನ್ನು ಬೆಂದಕಾಳಿಗೆ ಸೇರಿಸಿ ಕುದಿಸಿ ನಂತರ ಹುಣಸೆನೀರು, ಉಪ್ಪು, ಬೆಲ್ಲ, ಕರಿಬೇವು ಹಾಕಿ ಕುದಿಸಿ ಸಾಸಿವೆಯನ್ನು ಒಗ್ಗರಿಸಿ ಸೇರಿಸಿದರೆ ಸವಿಯಲು ಅವರೆಕಾಳಿನ ಸಾಂಬಾರ್‌ ಸಿದ್ಧ.

ಅನಾನಸು ಬಾಸುಂದಿ
ಬೇಕಾಗುವ ಸಾಮಗ್ರಿಗಳು: ಹಾಲು ಅರ್ಧ ಲೀಟರ್‌, ಅನಾನಸು ಹೋಳುಗಳು ಸಾಕಷ್ಟು, ಸಕ್ಕರೆ ಮೂರು ಚಮಚ.

ತಯಾರಿಸುವ ವಿಧಾನ: ಹಾಲನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಸಣ್ಣ ಉರಿಯಲ್ಲೇ ಕಾಯಿಸಬೇಕು. ಕೆನೆ ಕಟ್ಟಿದಾಗ ಅದನ್ನು ತೆಗೆದು ಬೇರೆ ಬಟ್ಟಲಿಗೆ ಹಾಕುತ್ತಿರಬೇಕು. ಕೊನೆಗೆ ತೆಗೆದಿರುವ ಕೆನೆಯನ್ನು ಸೇರಿಸಿ ಸಕ್ಕರೆಯನ್ನು ಹಾಕಿ ಕೆದಕಿ ತಣ್ಣಗಾದ ನಂತರ ಅನಾನಸು ಹೋಳುಗಳನ್ನು ಸೇರಿಸಿದರೆ ರುಚಿಯಾದ ಬಾಸುಂದಿ ಸವಿಯಲು ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT