ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವ ಬಹಳಷ್ಟು ದುರಂತಗಳು ವರದಿಯಾಗುತ್ತಿವೆ. ಇವುಗಳಲ್ಲಿ ದಂಪತಿಯೊಂದಿಗೆ ಎಳೆಯ ಮಕ್ಕಳೂ ತಮ್ಮದಲ್ಲದ ತಪ್ಪಿಗೆ ಬಲಿಯಾಗುತ್ತಿರುವುದು ದುಃಖದ ಸಂಗತಿ. ತಂದೆ ಅಥವಾ ತಾಯಿ ಮಾಡಿರಬಹುದಾದ ತಪ್ಪಿಗೆ, ಅವರ ಸಂಕಟಗಳಿಗೆ ಪರಿಹಾರ ಮಕ್ಕಳ ಬಲಿಯೇ? ಏನೂ ಅರಿಯದ ಮುಗ್ಧ ಮಕ್ಕಳನ್ನು ಬಾವಿಗೆ ತಳ್ಳುವುದು, ಕತ್ತು ಹಿಚುಕುವುದು, ನೇಣು ಹಾಕುವುದು ಇಲ್ಲವೇ ವಿಷವುಣಿಸುವ ಮೂಲಕ ಕೊಂದು ತಾವೂ ಆತ್ಮಹತ್ಯೆ ಮಾಡಿಕೊಳ್ಳುವುದು ಅತ್ಯಂತ ಕ್ರೂರ ಸಂಗತಿ. ತಮ್ಮ ಸಾವಿನ ಬಳಿಕ ಮಕ್ಕಳು ಅನಾಥರಾದಾರು ಎಂಬ ಭಯ ಇದಕ್ಕೆ ಕಾರಣವಿರಬಹುದು. ಆದರೆ ಇದು ನೈತಿಕವಾಗಿ ಸರಿಯಲ್ಲ. ಈ ಪಿಡುಗು ನಿವಾರಣೆಗೆ ಸರ್ಕಾರ ಹಾಗೂ ಸೇವಾ ಸಂಸ್ಥೆಗಳು ಪ್ರಯತ್ನಿಸಬೇಕು. ಜನಜಾಗೃತಿ ಉಂಟು ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.