ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರ ದೇಹ ಕತ್ತರಿಸಿದ ಪಾಕ್‌ನ ಕ್ರಮ ಅಮಾನುಷ

Last Updated 2 ಮೇ 2017, 19:30 IST
ಅಕ್ಷರ ಗಾತ್ರ
ಪಾಕಿಸ್ತಾನ ಸೇನಾ ಪಡೆ ಮತ್ತೆ ತನ್ನ ಅನಾಗರಿಕ ನಿಜರೂಪ ತೋರಿಸಿದೆ. ಜಮ್ಮು ಕಾಶ್ಮೀರದ ಪೂಂಛ್‌ ಜಿಲ್ಲೆಯ ಕೃಷ್ಣಾ ಘಾಟಿ ಬಳಿ ನಮ್ಮ ಗಡಿಯ ಒಳಗೆ ನುಗ್ಗಿ ಇಬ್ಬರು ಸೈನಿಕರ ಅಂಗಾಂಗಗಳನ್ನು ಕತ್ತರಿಸಿ ಅಮಾನುಷವಾಗಿ ಕೊಂದಿದೆ. ಇದನ್ನು ಯಾವ ರೀತಿಯಲ್ಲಿ ಖಂಡಿಸಿದರೂ ಕಡಿಮೆಯೇ.

ಹೋದ ವರ್ಷದ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿಯೂ ಅದು ಇಂತಹುದೇ ದುಷ್ಕೃತ್ಯ ನಡೆಸಿತ್ತು. ಭಾರತ– ಪಾಕ್‌ ಗಡಿಯಲ್ಲಿ ಗುಂಡಿನ ಚಕಮಕಿ, ದಾಳಿ– ಪ್ರತಿದಾಳಿ ಸ್ವಾಭಾವಿಕ ಎನ್ನುವ ಪರಿಸ್ಥಿತಿಯಿದೆ. ಆಗ ಸಾವು ನೋವುಗಳೂ ಸಂಭವಿಸುತ್ತವೆ. ಆದರೆ ಎದುರಾಳಿ ಯೋಧರ ದೇಹವನ್ನು ಕತ್ತರಿಸಿ ಸಾಯಿಸುವುದು ಮಾತ್ರ ಎಲ್ಲಕ್ಕಿಂತ ಹೀನಾಯ.  
 
ಯುದ್ಧಕೈದಿಗಳನ್ನೂ ಗೌರವದಿಂದ ನಡೆಸಿಕೊಳ್ಳಬೇಕು ಎನ್ನುತ್ತದೆ ಜಿನೀವಾ ಒಪ್ಪಂದ. ಆದರೆ ಈಗ ಯುದ್ಧ ನಡೆಯುತ್ತಿಲ್ಲ.  ಗಡಿಯಲ್ಲಿ ಬರೀ ಕಾವಲು ಇದೆ, ಗಸ್ತು ನಡೆಯುತ್ತಿದೆ. ಹೀಗಿದ್ದರೂ ನಮ್ಮ ಗಡಿಯ ಒಳಗೆ ಸುಮಾರು 250 ಮೀಟರ್‌ನಷ್ಟು ಅತಿಕ್ರಮ ಪ್ರವೇಶ ಮಾಡಿ ಯೋಧರ ಮೇಲೆ ಎರಗಿ ಪೈಶಾಚಿಕ ರೀತಿಯಲ್ಲಿ ಕೊಂದು ಹಾಕಿರುವುದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ.
 
ಭಾರತ ವಿರೋಧಿ ಧೋರಣೆಗೆ ಹೆಸರಾದ ಪಾಕ್‌ ಸೇನಾ ಮುಖ್ಯಸ್ಥ ಜಾವೇದ್‌ ಬಾಜ್ವಾ ಅವರು  ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿದ ಮರು ದಿನವೇ ಈ ದುಷ್ಕೃತ್ಯ ನಡೆದಿರುವುದು ಕಾಕತಾಳಿಯವಂತೂ ಇರಲಾರದು. ಇದನ್ನೆಲ್ಲ ನೋಡಿದರೆ ಕಳೆದ ವರ್ಷ ಭಾರತೀಯ ಸೇನೆ ನಡೆಸಿದ ‘ನಿರ್ದಿಷ್ಟ ದಾಳಿಯಲ್ಲಿ’ ಹಾನಿ ಅನುಭವಿಸಿದರೂ ಪಾಕ್‌ ಯೋಧರು ಪಾಠ ಕಲಿತಂತೆ ಕಾಣುತ್ತಿಲ್ಲ.  
 
ಅದಕ್ಕಾಗಿ ಈಗ ಸೂಕ್ತ ಪ್ರತ್ಯುತ್ತರ ನೀಡಲು ನಮ್ಮ ಸೇನೆಗೆ ಸರ್ಕಾರ ಪೂರ್ಣ ಸ್ವಾತಂತ್ರ್ಯ ನೀಡಿದೆ. ‘ನಮ್ಮ ಇಬ್ಬರೂ ಯೋಧರ ಬಲಿದಾನ ವ್ಯರ್ಥವಾಗುವುದಕ್ಕೆ ಬಿಡುವುದಿಲ್ಲ’ ಎಂದು ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಅಪ್ರಚೋದಿತ ದಾಳಿಗೆ ಇದಕ್ಕಿಂತ ಸೌಮ್ಯವಾಗಿ ಉತ್ತರಿಸುವುದು ಸಾಧ್ಯವೇ ಇಲ್ಲ.
 
‘ನಾವಾಗಿಯೇ ಯಾರ ಮೇಲೂ ಎರಗುವುದಿಲ್ಲ; ಆದರೆ ವಿನಾಕಾರಣ ನಮ್ಮ ತಂಟೆಗೆ ಬಂದರೆ ಸೇಡು ತೀರಿಸಿಕೊಳ್ಳದೇ ಬಿಡುವುದಿಲ್ಲ’ ಎಂಬುದು ನಮ್ಮ ನೀತಿ. ಅದು ಪಾಕ್‌ಗೆ ಗೊತ್ತಿಲ್ಲ ಎಂದೇನಲ್ಲ.  ಆದರೂ ಕಾಲುಕೆರೆದು ಜಗಳಕ್ಕೆ ಬರುವುದನ್ನು ಅದು ನಿಲ್ಲಿಸುತ್ತಿಲ್ಲ.  
 
ಪಾಕಿಸ್ತಾನದ ಸಮಸ್ಯೆಯೇ ವಿಚಿತ್ರ. ಅಲ್ಲಿ ಸೇನೆಯ ಮೇಲೆ ಸರ್ಕಾರಕ್ಕೆ ಹತೋಟಿ ಇಲ್ಲ. ಬದಲಾಗಿ ನಾಗರಿಕ ಸರ್ಕಾರವೇ ಸೇನೆಯ ಅಡಿಯಾಳಿನಂತೆ ವರ್ತಿಸುತ್ತದೆ. ಚುನಾಯಿತ ವ್ಯವಸ್ಥೆ ಏನಿದ್ದರೂ ಹೆಸರಿಗೆ ಮಾತ್ರ. ಆದರೆ ನಮ್ಮದು ಪ್ರಜಾಸತ್ತೆ.
 
ಇಲ್ಲಿ ಚುನಾಯಿತ ಸರ್ಕಾರವೇ ಶಕ್ತಿಯುತ. ಹೀಗಿರುವಾಗ ನಮ್ಮ ಸರ್ಕಾರ ಪಾಕಿಸ್ತಾನದ ಸೇನೆಯ ಜತೆ ನೇರವಾಗಿ ಮಾತುಕತೆ ನಡೆಸಲು ಸಾಧ್ಯವಿಲ್ಲ. ಅದು ಶಿಷ್ಟಾಚಾರವೂ ಅಲ್ಲ.   ಏನಿದ್ದರೂ ಅಲ್ಲಿನ ನಾಗರಿಕ ವ್ಯವಸ್ಥೆ ಜತೆಯೇ ಚರ್ಚೆ ಮಾಡಬೇಕಾಗುತ್ತದೆ. ಅದು ನಮ್ಮನ್ನು ಎಷ್ಟೇ ಪ್ರಚೋದಿಸಿದರೂ ಬೇರೆ ದಾರಿ ಇಲ್ಲ. ಏಕೆಂದರೆ ಇಂತಹ ವಿವಾದಗಳಿಗೆ, ಬಿಕ್ಕಟ್ಟುಗಳಿಗೆ ಯುದ್ಧ ಯಾವತ್ತೂ ಪರಿಹಾರ ಅಲ್ಲ. ಆದರೆ ಪಾಕ್‌ ಸೇನೆಗೆ ಇದು ರುಚಿಸುವುದಿಲ್ಲ.  
 
ಮಾತುಕತೆ ಮುರಿದು ಬೀಳುವಂತೆ ಮಾಡಲು, ಮಾತುಕತೆಗೆ ಮುಂದಾಗುವ ತನ್ನ ರಾಜಕೀಯ ಮುಖಂಡರಿಗೆ ಮುಖಭಂಗ  ಉಂಟು ಮಾಡಲು ಅದು ನಾನಾ ಬಗೆಯ ಕಿತಾಪತಿ ನಡೆಸಿದ ನಿದರ್ಶನಗಳು ನಮ್ಮ ಮುಂದಿವೆ. ಸೇನೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವುದು ಹೇಗೆ ಎಂಬುದು ಆ ದೇಶದ ಆಂತರಿಕ ಸಮಸ್ಯೆ.
 
ನಮಗೆ ಸಂಬಂಧಿಸಿದ್ದಲ್ಲ. ಆದರೆ ಗಡಿಯಲ್ಲಿ ಸಂಯಮದಿಂದ ವರ್ತಿಸುವಂತೆ ತನ್ನ ಸೇನೆಗೆ ಅಲ್ಲಿನ ಸರ್ಕಾರ ಕಿವಿಮಾತು ಹೇಳಬೇಕು. ಇಲ್ಲವಾದರೆ ದುಬಾರಿ ಬೆಲೆ ತೆರಲು ಸಿದ್ಧವಾಗಬೇಕು. ಏಕೆಂದರೆ ನಮ್ಮ ಮೇಲೆ ದಾಳಿ ನಡೆದರೂ ಶಾಂತಿಮಂತ್ರ ಜಪಿಸುವ ಕಾಲ ಈಗಿಲ್ಲ. ಅದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT