ಬಯಲಾಟದ ಕಲಾವಿದರ ಬಹುತೇಕ ರಂಗಪರಿಕರಗಳನ್ನು ಕಟ್ಟಿಗೆಯಲ್ಲಿ ಸಿದ್ಧಪಡಿಸುವುದರಿಂದ ಅವುಗಳು 7–8 ಕೆ.ಜಿಯಷ್ಟು ಭಾರ. ಅಷ್ಟೊಂದು ಭಾರವಾದ ಪರಿಕರ ಕಟ್ಟಿಕೊಂಡು ಕುಣಿಯುವುದು ಮಕ್ಕಳಿಗೆ ಆಗದ ಕೆಲಸ. ಆದ್ದರಿಂದಲೇ ಥರ್ಮಾಪೋಮ್ನಲ್ಲಿ ಪರಿಕರಗಳನ್ನು ಸಿದ್ಧಪಡಿಸಲಾಗಿತ್ತು. ಗುಜರಿಗೆ ಎಸೆಯಲಾಗಿದ್ದ ಸಾಮಾನು ಸರಂಜಾಮು ತಂದ ಮಹಮ್ಮದ್, ಅದರಲ್ಲೇ ಚೆಂದದ ಪರಿಕರವನ್ನು ತಯಾರಿ ಮಾಡಿಬಿಡುತ್ತಿದ್ದರು.
ಟೈರ್ ಮತ್ತು ಟ್ಯೂಬ್ ನಡುವೆ ಹಾಕುವಂತಹ ಸೆಟೆದುನಿಲ್ಲುವ ರಬ್ಬರ್ ಹಾಳೆ, ರಟ್ಟಿನ ಡಬ್ಬಿ, ಲಾಳಿಕೆ, ಸಿ.ಡಿ, ಊಟದ ಪ್ಲೇಟ್ಗಳು, ಎಲೆಕ್ಟ್ರಿಕ್ ಪೈಪ್ಗಳು... ಹೀಗೆ ಅವರು ಹುಡುಕಿ ತರುತ್ತಿದ್ದ ಸಾಮಾನುಗಳಿಗೆ ಲೆಕ್ಕವಿಲ್ಲ. ಊಟಕ್ಕೆ ಬರುವುದನ್ನೂ ಮರೆತು ಪಾತ್ರಧಾರಿಗಳೆಲ್ಲ ಪರಿಕರಗಳ ತಯಾರಿಕಾ ಕಾರ್ಯಾಗಾರದ ಮುಂದೆಯೇ ಠಿಕಾಣಿ ಹೂಡಿಬಿಡುತ್ತಿದ್ದರು.
*****
ಬಯಲಾಟದ ಪ್ರದರ್ಶನಕ್ಕೆ ರಂಗಮಂಚ ಕೂಡ ಸಿದ್ಧವಾಯಿತು. ಕೊನೆಗೆ ಪ್ರದರ್ಶನದ ಆ ದಿನ ಬಂದೇ ಬಿಟ್ಟಿತು. ನಮಗೋ ಪರೀಕ್ಷೆ ಬರೆದ ವಿದ್ಯಾರ್ಥಿ ಫಲಿತಾಂಶಕ್ಕೆ ಕಾಯುತ್ತಿರುವಂಥ ತವಕ. ಇಷ್ಟೆಲ್ಲ ಶ್ರಮ ಹಾಕಿದ್ದಾಗಿದೆ, ಮಕ್ಕಳು ಈ ಕೈಂಕರ್ಯವನ್ನು ಯಶಸ್ವಿಗೊಳಿಸುವರೇ ಎಂಬ ಪ್ರಶ್ನೆ ತಲೆಯಲ್ಲಿ ಬಿಟ್ಟೂಬಿಡದಂತೆ ಗಿರಿಕಿ ಹೊಡೆಯುತ್ತಿತ್ತು. ತಿಪ್ಪೇಸ್ವಾಮಿ ಅವರೇನೋ ‘ಶ್ರೀ ವಿಘ್ನೇಶ ದಯಾಪಯೋನಿಧಿ...’ ಎಂದು ನಾಂದಿ ಗೀತೆಯನ್ನು ಆರಂಭಿಸಿಯೇಬಿಟ್ಟರು.
ನಮಗೆ ಎದೆಯಲ್ಲಿ ಢವ ಢವ. ಬಯಲು ತುಂಬಾ ಜನ ಸೇರಿದ್ದಾರೆ, ಏನಾದರೂ ಎಡವಟ್ಟಾದರೆ ಹೇಗೆ ಎಂಬ ಆತಂಕ. ಆದರೆ, ದೇವರ ದಯೆಯಿಂದ ಹಾಗೇನೂ ಆಗಲಿಲ್ಲ. ಪಾತ್ರಧಾರಿಗಳು ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದಂತೆ ಸಂಭಾಷಣೆ ಹೇಳಿದರು. ಸಿಳ್ಳು–ಚಪ್ಪಾಳೆ ಸದ್ದೇ ಸದ್ದು. ಅಭಿಮನ್ಯುವಿನಿಂದ ಕಾವ್ಯಧಾರೆ ಹರಿದಾಗ ನಮ್ಮ ಕಣ್ಣಲ್ಲಿ ಹರ್ಷಧಾರೆ!
*****
ಬಳ್ಳಾರಿ ಜಿಲ್ಲೆಯ ಯಾವ ಹಳ್ಳಿಗೆ ಹೋದರೂ ಬಯಲಾಟದ ಸೊಗಡು ಸಿಕ್ಕೇ ಸಿಗುತ್ತದೆ. ಬಯಲಾಟದ ತವರೂರು ಈ ಜಿಲ್ಲೆ. ಅಕ್ಷರ ಕಲಿಯದವರೇ ಸಂರಕ್ಷಿಸಿ, ಬೆಳೆಸಿ, ಪೊರೆದ ಕಲೆಯಿದು. ಬಾಲ್ಯದಿಂದಲೇ ಬಯಲಾಟದ ತಾಲೀಮುಗಳನ್ನು ನೋಡುತ್ತಾ ಸಾವಿರಾರು ಪದಗಳನ್ನು ಕರಗತ ಮಾಡಿಕೊಳ್ಳುತ್ತಾ ಬರುವ ಸಂಪ್ರದಾಯ ಇಲ್ಲಿದೆ. ಎಷ್ಟೋ ಪ್ರಸಂಗಗಳ ಹಸ್ತಪ್ರತಿಗಳು ಇಲ್ಲದಿದ್ದರೂ ಪೀಳಿಗೆಯಿಂದ ಪೀಳಿಗೆಗೆ ಅವುಗಳು ದಾಟಿಕೊಂಡು ಬಂದಿರುವ ಪರಿ ಅನನ್ಯ.
ಯಕ್ಷಗಾನವನ್ನು ಅಗಾಧವಾಗಿ ಬೆಳೆಸಲು ಸಾಹಿತ್ಯದಿಗ್ಗಜ ಶಿವರಾಮ ಕಾರಂತರು ಟೊಂಕಕಟ್ಟಿ ನಿಂತಂತೆ ಬಯಲಾಟದ ಸಹಾಯಕ್ಕೆ ಯಾರೂ ಬರಲಿಲ್ಲ. ಪ್ರೋತ್ಸಾಹವಿಲ್ಲದೆ, ಪೋಷಣೆಯಿಲ್ಲದೆ ಈ ಕಲೆ ಎಲ್ಲಿ ನಶಿಸಿಹೋಗುವುದೋ ಎನ್ನುವ ಆತಂಕ ಕಾಡುತ್ತಿರುವುದು ಸುಳ್ಳಲ್ಲ. ಉತ್ತರ ಕರ್ನಾಟಕದ ಹಳ್ಳಿ–ಹಳ್ಳಿಗಳ ಜಾತ್ರೆಗಳಲ್ಲಿ ಈ ಹಿಂದೆ ಬಯಲಾಟವನ್ನು ತಪ್ಪದೇ ಆಡಿಸಲಾಗುತ್ತಿತ್ತು. ಆದರೆ, ಈಗ ಆ ಪರಂಪರೆ ಬಹುತೇಕ ನಿಂತುಹೋಗಿದೆ. ಇಂತಹ ಪಾರಂಪರಿಕ ಕಲೆಗೆ ಮತ್ತೆ ಶಕ್ತಿ ತುಂಬಬೇಕು ಎನ್ನುವುದು ನಮ್ಮ ಆಸೆ.