ಕಮಲನಗರ: ‘ಸರ್ಕಾರಿ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳ ಸದುಪಯೋಗಕ್ಕಾಗಿ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲಿಸಿ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುಸಿಂಗ್ ಹಜಾರಿ ಹೇಳಿದರು.
ಸಮೀಪದ ರಾಂಪುರ ಗ್ರಾಮದಲ್ಲಿ ಮಂಗಳವಾರ 2017–18ನೇ ಸಾಲಿನ ಮಕ್ಕಳ ವಿಶೇಷ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ‘ಸರ್ಕಾರಿ ಶಾಲೆಗಳಲ್ಲಿ ಸರ್ಕಾರ 31 ಬಗೆಯ ವಿವಿಧ ಸೌಲಭ್ಯ ದೊರಕುತ್ತಿದೆ. ಎಲ್ಲ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಹೀಗಾಗಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು’ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ ಮಂಠಾಳೆ ಮಾತನಾಡಿ, 6 ರಿಂದ 14 ವರ್ಷದೊಳಗಿನ ಯಾವ ಮಗುವು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶ ಸರ್ಕಾರದ್ದಾಗಿದೆ. ಹೀಗಾಗಿ ಎಲ್ಲ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದರು.
ಮುಖ್ಯ ಶಿಕ್ಷಕ ಉಮಾಕಾಂತ ಬಿರಾದಾರ್ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಲಿಕಾ ವಾತಾವರಣವಿದೆ. ನುರಿತ ಶಿಕ್ಷಕರಿರುವುದರಿಂದ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲಿಸಬೇಕು’ ಎಂದರು. ಸುನೀಲ ಗವಳಿ, ಪರಮೇಶ್ವರ, ಲಕ್ಷ್ಮಿಬಾಯಿ, ಅನಸೂಯಾ, ಶಿಕ್ಷಕ ಮಡಿವಾಳಪ್ಪಾ ಇದ್ದರು.
ಹೊಳಸಮುದ್ರದಲ್ಲಿ ದಾಖಲಾತಿ ಆಂದೋಲನ: ಸಮೀಪದ ಹೊಳಸಮುದ್ರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಿಂದ ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮ ನಡೆಯಿತು.
ಸಮೂಹ ಸಂಪನ್ಮೂಲ ವ್ಯಕ್ತಿ ನಿರ್ಮಲಾ ಜಮಾದಾರ್ ನೇತೃತ್ವದಲ್ಲಿ ಪೋಷಕರ ಮನೆಗೆ ತೆರಳಿದ ಶಿಕ್ಷಕರು, ಸರ್ಕಾರಿ ಪ್ರಾಥಮಿಕ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾಬಾಯಿ ಶಿವಭಾರೆ, ಪಿಡಿಒ ಗೀತಾ ಜಗ್ಗಿನ್ನವರ್, ಜ್ಞಾನೇಶ್ವರ ಪಾಟೀಲ, ಭರತ್ ಕದಮ್, ಮುಖ್ಯ ಶಿಕ್ಷಕ ಮನೋಹರ ಜಾಧವ್, ವಿಜಯಕುಮಾರ ನುದನೂರೆ ಇದ್ದರು.