ಭೋಪಾಲ್: ಚಹಾ ಮಾರಿದ ವ್ಯಕ್ತಿ ಪ್ರಧಾನಿಯಾಗಿರುವಾಗ ನಾನೇಕೆ ರಾಷ್ಟ್ರಪತಿ ಆಗಬಾರದು ಎನ್ನುವ ಇಲ್ಲಿನ ಸ್ಥಳೀಯ ಚಹಾ ಮಾರಾಟಗಾರ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಗ್ವಾಲಿಯರ್ನ ಲಶ್ಕರ್ ನಿವಾಸಿ ಆನಂದ್ ಸಿಂಗ್ ಕುಶ್ವಾ ಅವರು ತಾರಗಂಜ್ ಪ್ರದೇಶದಲ್ಲಿ ಪುಟ್ಟ ಅಂಗಡಿಯಲ್ಲಿ ಚಹಾ ಮಾರಾಟ ನಡೆಸುತ್ತಿದ್ದಾರೆ. ಇವರು ಈ ಹಿಂದೆ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ.
‘ಚಹಾ ಮಾರಾಟಗಾರರೊಬ್ಬರು ದೇಶದ ಪ್ರಧಾನಿಯಾಗಲು ಸಾಧ್ಯವಾದರೆ ಏಕೆ ಮತ್ತೊಬ್ಬರು ರಾಷ್ಟ್ರಪತಿಯಾಗಬಾರದು’ ಎಂದು ಕುಶ್ವಾ ಅವರು ಹೇಳಿದ್ದಾರೆ. ಅವರು ಈಗಾಗಲೇ ಉಪ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದರು.
ಕಳೆದ ಚುನಾವಣೆಯಲ್ಲಿ ನಾನು ಸಾಕಷ್ಟು ಬೆಂಬಲವನ್ನು ಪಡೆದುಕೊಂಡಿದ್ದೆ. ಈ ಬಾರಿ ನಾನು ಉತ್ತರ ಪ್ರದೇಶದ ಸಂಸದರು ಮತ್ತು ಶಾಸಕರ ಜತೆ ಸಂಪರ್ಕದಲ್ಲಿದ್ದೇನೆ ಎಂದು ಕುಶ್ವಾ ಹೇಳಿದ್ದಾರೆ.
ಮಾಹಿತಿಯ ಪ್ರಕಾರ, ಕುಶ್ವಾ ಅವರು ದೆಹಲಿಗೆ ತೆರಳಿ ಸಂಸತ್ನಲ್ಲಿ ಮುಖ್ಯ ಚುನಾವಣಾ ಅಧಿಕಾರಿಯನ್ನು ಭೇಟಿ ಮಾಡಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಕುಶ್ವಾ ಅವರು ಸಲ್ಲಿಸಿರುವ ಆಸ್ತಿ ವಿವರದ ಪ್ರಮಾಣಪತ್ರದ ಪ್ರಕಾರ, ಐದು ಸಾವಿರ ನಗದು, ಬೈಸಿಕಲ್, ಮನೆ, ಚಹಾ ಅಂಗಡಿ ಮತ್ತು ಪತ್ನಿಯ ಮಾಂಗಲ್ಯ ಸರವನ್ನು ಹೊಂದಿದ್ದಾಗಿ ಹೇಳಿದ್ದಾರೆ. ಅವರು ₹12 ಸಾವಿರ ಬ್ಯಾಂಕ್ ಮತ್ತು ಇತರ ₹60 ಸಾವಿರ ಸಾಲವನ್ನು ತೋರಿಸಿದ್ದಾರೆ.
ವಿಚಿತ್ರ ಎನ್ನಬಹುದಾದ ಆಕಾಂಕ್ಷೆಗಳನ್ನು ಹೊಂದಿರುವ ಕುಶ್ವಾ ಅವರು ತಮ್ಮ ಪುಟ್ಟ ಅಂಗಡಿಯಲ್ಲಿ ಚಹಾ ಮಾರಾಟ ಮಾಡುವಲ್ಲಿ ನಿರತರಾಗಿದ್ದಾರೆ. ಈ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.