ನವದೆಹಲಿ: ‘ತುರ್ತು ಪರಿಸ್ಥಿತಿಯು ಪ್ರಜಾಪ್ರಭುತ್ವದ ಮೇಲೆ ಆವರಿಸಿದ್ದ ಕರಿ ನೆರಳು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗಲು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಳ್ಳುತ್ತಿರಬೇಕಾಗುತ್ತದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
‘ಮನದ ಮಾತು’ ಕಾರ್ಯಕ್ರಮದ 33ನೇ ಆವೃತ್ತಿಯಲ್ಲಿ ಮಾತನಾಡಿದ ಮೋದಿ, ‘ಪ್ರಜಾಪ್ರಭುತ್ವ ಕೇವಲ ಒಂದು ವ್ಯವಸ್ಥೆಯಲ್ಲ. ಅದು ಇಲ್ಲಿನ ಜನರ ಸಂಸ್ಕಾರ’ ಎಂದರು.
‘1975ರ ಜೂನ್ 25ರಂದು ತುರ್ತು ಪರಿಸ್ಥಿತಿ ಹೇರಲಾಯಿತು. ತುರ್ತು ಪರಿಸ್ಥಿತಿಯ ಆ ದಿನಗಳನ್ನು ದೇಶದ ಜನರು ಮರೆಯಲು ಸಾಧ್ಯವಿಲ್ಲ. ತುರ್ತು ಪರಿಸ್ಥಿತಿ ಹೇರಿದ್ದ ದಿನಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಲವು ಮುಖಂಡರು ಜೈಲು ಸೇರಬೇಕಾಯಿತು’ ಎಂದರು.
ತುರ್ತು ಪರಿಸ್ಥಿತಿಯ ಒಂದು ವರ್ಷದ ಬಳಿಕ ವಾಜಪೇಯಿ ಅವರು ರಚಿಸಿದ್ದ ‘ಏಕ್ ಬರಸ್ ಬೀತ್ ಗಯಾ’ ಎಂಬ ಕವಿತೆಯನ್ನು ಮೋದಿ ವಾಚಿಸಿದರು.
ಯೋಗದಿನಕ್ಕೆ ದೇಶ ಹಾಗೂ ವಿದೇಶಗಳಲ್ಲಿ ಸಿಕ್ಕ ಸ್ಪಂದನೆ, ಇಸ್ರೊದ ಕಾರ್ಟೊಸ್ಯಾಟ್–2 ಸಾಧನೆ, ಸ್ವಚ್ಛ ಭಾರತ ಅಭಿಯಾನದ ಬೆಳವಣಿಗೆಗಳನ್ನು ಮೋದಿ ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದರು.
ಮಾತಿನ ಆರಂಭದಲ್ಲೇ ಮೋದಿ, ದೇಶದ ಜನತೆಗೆ ಜಗನ್ನಾಥ ರಥಯಾತ್ರೆ ಹಾಗೂ ರಂಜಾನ್ ಶುಭಾಶಯ ಕೋರಿದರು.