ನವದೆಹಲಿ: ಬ್ಯಾಂಕ್ಗಳಲ್ಲಿ ಬಾಕಿ ಇರುವ ಸಾಲ ವಸೂಲಿ ಮಾಡುವುದೇ ಮೊದಲ ಆದ್ಯತೆ ಎಂದು ಆರ್ಬಿಐ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ತಿಳಿಸಿದ್ದಾರೆ.
‘ಎನ್ಪಿಎ ಗರಿಷ್ಠ ಪ್ರಮಾಣದಲ್ಲಿ ಇರುವುದು ಬ್ಯಾಂಕ್ಗಳ ಪ್ರಗತಿಗೆ ಹಿನ್ನಡೆ ಉಂಟುಮಾಡಿದೆ. ಹೀಗಾಗಿ ತುರ್ತು ಕ್ರಮ ಕೈಗೊಳ್ಳುವ ಮೂಲಕ ಸಾಲ ವಸೂಲು ಮಾಡುವ ಅಗತ್ಯ ಇದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬ್ಯಾಂಕ್ಗಳ ಒಟ್ಟು ಎನ್ಪಿಎ ₹ 7 ಲಕ್ಷ ಕೋಟಿಗಳ ಗರಿಷ್ಠ ಮಟ್ಟವನ್ನು ತಲುಪಿದೆ.
ನವದಹೆಲಿಯಲ್ಲಿ ನಡೆದ ಆರ್ಥಿಕ ಸಭೆಯಲ್ಲಿ ಮಾತನಾಡಿದ ಅವರು, ‘ನೋಟು ರದ್ದತಿಯಿಂದಾಗಿ ಕಪ್ಪುಹಣದ ಚಲಾವಣೆ ತಗ್ಗಿದೆ. ಆಸ್ತಿಗಳ ಮೇಲೆ ಅಕ್ರಮ ಹಣ ಹೂಡಿಕೆ ಆಗುತ್ತಿಲ್ಲ. ಉಳಿತಾಯವನ್ನು ಮ್ಯೂಚುವಲ್ ಫಂಡ್, ವಿಮೆಯಲ್ಲಿ ಹೂಡಿಕೆಯಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಶೇ 80 ಕ್ಕೂ ಹೆಚ್ಚು ಭಾರತೀಯರು ಆರ್ಥಿಕ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡದೇ ಆಸ್ತಿಗಳ ರೂಪದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಹಣ ಉಳಿತಾಯ ಮಾಡುತ್ತಿದ್ದಾರೆ. ತಿಂಗಳ ವೇತನ ಬರುತ್ತಿದ್ದಂತೆಯೇ ಕಪ್ಪುಹಣ ಕೂಡಿಡಲು ಆರಂಭಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.