ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಏಣಗಿ ಗ್ರಾಮದಲ್ಲಿ ನಿನ್ನೆ ಕೊನೆಯುಸಿರೆಳೆದ ಹಿರಿಯ ರಂಗನಟ, ನಾಡೋಜ ಡಾ.ಏಣಗಿ ಬಾಳಪ್ಪ ಅವರ ಪಾರ್ಥಿವ ಶರೀರಕ್ಕೆ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅಂತಿಮ ನಮನ ಸಲ್ಲಿಸಿದರು.
ಬಾಳಪ್ಪ ಅವರ ನಿವಾಸದ ಆವರಣದಲ್ಲಿ ಗಾಳಿಯಲ್ಲಿ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಸಲ್ಲಿಸಲಾಯಿತು.
ಶಾಸಕ ಆನಂದ ಮಾಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಜಿಲ್ಲಾಧಿಕಾರಿ ಜಿಯಾವುಲ್ಲಾ, ಎಸ್.ಪಿ.ರವಿಕಾಂತೇಗೌಡ ಮತ್ತಿತರ ಗಣ್ಯರು ಇದ್ದರು.
ಧಾರವಾಡ ರಂಗಾಯಣ ನಿರ್ದೇಶಕ ಡಾ.ಪ್ರಕಾಶ ಗರುಡ, ಆಡಳಿತಾಧಿಕಾರಿ ಬಸವರಾಜ ಹೂಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿನಿರ್ದೇಶಕ ಕೆ.ಎಚ್.ಚನ್ನೂರ ಮತ್ತಿತರರು ಅಂತಿಮ ದರ್ಶನ ಪಡೆದರು.
ಬಾಳಪ್ಪನವರ ಹೆಸರಿನಲ್ಲಿ ಸ್ಮಾರಕ: ಚರ್ಚಿಸಿ ಸರ್ಕಾರ ನಿರ್ಧಾರ
ಏಣಗಿ ಬಾಳಪ್ಪನವರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವೆ ಉಮಾಶ್ರೀ, ಬಾಳಪ್ಪನವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವ ಕುರಿತು ಅವರ ಕುಟುಂಬದವರು, ಹಿತೈಷಿಗಳು, ಅಭಿಮಾನಿಗಳು ಹಾಗೂ ಕಲಾವಿದರ ಬಳಗದೊಂದಿಗೆ ಚರ್ಚಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.
ಬಾಳಪ್ಪನವರ ನಿಧನದಿಂದ ನಾಡಿನ ಸಾಂಸ್ಕೃತಿಕ ಕೊಂಡಿ ಕಳಚಿದಂತಾಗಿದೆ. ರಂಗಭೂಮಿಯ ಬಹುದೊಡ್ಡ ಕಲಾವಿದರಾದ ಅವರು ಶತಾಯುಷಿಯಾಗಿ ನಮ್ಮೊಂದಿಗೆ ಇದ್ದಿದ್ದು ನಮ್ಮೆಲ್ಲರ ಭಾಗ್ಯ ಎಂದು ಸಚಿವೆ ಉಮಾಶ್ರೀ ಹೇಳಿದರು.