ಚಿಕ್ಕಬಳ್ಳಾಪುರ: ‘ರಾಜ್ಯದಲ್ಲಿರುವ ಪ್ರತಿಯೊಬ್ಬರೂ ಕನ್ನಡ ಭಾಷೆ, ಸಂಸ್ಕೃತಿ ಪೋಷಿಸಲು ಶ್ರಮಿಸಬೇಕು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪ ತಿಳಿಸಿದರು.
ಸ್ವಾಮಿ ವಿವೇಕಾನಂದ ಕಲಾ ಬಳಗ ಮತ್ತು ಕಲಾ ಕೇಂದ್ರ, ಸಿರಿಗನ್ನಡ ವೇದಿಕೆ ಸಹಯೋಗದಲ್ಲಿ ಬುಧವಾರ ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ‘ಕನ್ನಡ ಹಬ್ಬ’ದ ಅಂಗವಾಗಿ ಏರ್ಪಡಿಸಿದ್ದ ಕವಿಗೋಷ್ಠಿ, ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನ್ನಡ ನಾಡಿ ಸಕಲ ಸೌಕರ್ಯಗಳನ್ನು ಅನುಭವಿಸುವವರು ಕನ್ನಡಕ್ಕೆ ಗೌರವ ಸಲ್ಲಿಸಬೇಕಾದ್ದದ್ದು ಕಡ್ಡಾಯ. ರಾಜ್ಯದಲ್ಲಿ ವಾಸಿಸುವ ಅನ್ಯಭಾಷಿಕರು ಸಹ ಹಮ್ಮು ಬಿಟ್ಟು ಕನ್ನಡ ಕಲಿತು ವ್ಯವಹರಿಸುವುದನ್ನು ಕಲಿಯಬೇಕು. ಹೊರ ರಾಜ್ಯದವರೊಂದಿಗೆ ಕನ್ನಡಿಗರು ಕನ್ನಡದಲ್ಲೇ ವ್ಯವಹರಿಸಿ ಕನ್ನಡದ ಅನಿವಾರ್ಯತೆ ಸೃಷ್ಟಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.
ಕೆ.ವಿ ಮತ್ತು ಪಂಚಗಿರಿ ವಿದ್ಯಾ ದತ್ತಿ ಸದಸ್ಯ ಬಿ. ಮುನಿಯಪ್ಪ, ‘ಹಿಂದಿನ ಕಾಲಕ್ಕಿಂತ ಈಗಿನ ಕಾಲ ನಾಜೂಕಾಗಿದೆ. ನಾವು ಎಷ್ಟೇ ಬದಲಾದರೂ ನಾಡು ನುಡಿಯ ಸೇವೆಯಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಆಗ ಮಾತ್ರ ನಮ್ಮ ನಾಡಿನ ಮಹತ್ವವನ್ನು ಉಳಿಸಲು ಸಾಧ್ಯ. ಇಂತಹ ಕಾರ್ಯದಲ್ಲಿ ತೊಡಗುವುದರಿಂದ ನಮ್ಮ ಜನ್ಮ ಸಾರ್ಥಕವಾಗುತ್ತದೆ’ ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಸಾಹಿತಿಗಳಾದ ಬಿ.ಪಾಳ್ಯ.ಹನುಮಂತರಾಜು, ಪ್ರೆಸ್ ಸುಬ್ಬರಾಯಪ್ಪ, ನಾಗಭೂಷಣರೆಡ್ಡಿ, ಗೋವಿಂದರಾಜು, ವೆಂಕಟೇಶ್, ಮುಖ್ಯ ಶಿಕ್ಷಕ ಗುಂಪು ಮರದ ಆನಂದ್, ಶಿಕ್ಷಕಿ ವಿಜಯಮ್ಮ, ತಿಮ್ಮಣ್ಣ ಭಟ್ ಹಾಗೂ ವಿದ್ಯಾರ್ಥಿಗಳಾದ ಮೋನಿಕಾ, ಶ್ವೇತಾ, ನವ್ಯಾ ಕವನಗಳನ್ನು ವಾಚಿಸಿದರು.
ಮುನಿರಾಜು ಮತ್ತು ಜ್ಞಾನಕುಮಾರ್ ಅವರು ಕನ್ನಡ ಗೀತೆಗಳ ಗಾಯನ ನಡೆಸಿಕೊಟ್ಟರು. ಕೆ.ವಿ ಮತ್ತು ಪಂಚಗಿರಿ ವಿದ್ಯಾದತ್ತಿ ವ್ಯವಸ್ಥಾಪಕ ಲಕ್ಷ್ಮಣಸ್ವಾಮಿ, ಕಾರ್ಯಕ್ರಮ ವ್ಯವ ಸ್ಥಾಪಕ ಸೋ.ಸು.ನಾಗೇಂದ್ರನಾಥ ಉಪಸ್ಥಿತರಿದ್ದರು.