ನವದೆಹಲಿ: ಕಾಂಗ್ರೆಸ್ ಪ್ರಾರಂಭಿಸಿರುವ ‘ಸಂವಿಧಾನ ರಕ್ಷಿಸಿ’ ಅಭಿಯಾನವನ್ನು ಪ್ರಹಸನ ಎಂದು ಕರೆದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕುಟುಂಬ ರಾಜಕಾರಣದ ಉಳಿವಿಗಾಗಿ ಈ ಪ್ರಯತ್ನ ಎಂದು ಅಣಕಿಸಿದ್ದಾರೆ.
‘ಭಾರತೀಯ ಸೇನೆ, ನ್ಯಾಯಾಂಗ, ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ಇವಿಎಂ ಹಾಗೂ ಆರ್ಬಿಐ ಮೇಲೆ ನಂಬಿಕೆ ಇಲ್ಲದವರು ಈಗ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ ಕೆಲವೇ ಸಮಯದಲ್ಲಿ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ್ದು, ಮೋದಿ ವಿರೋಧಿಸುವವರು ಭಾರತದ ವಿರೋಧಿಗಳಾಗಿ ಬದಲಾಗುತ್ತಿದ್ದಾರೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ವಾಗ್ದಂಡನೆ ವಿಧಿಸಲು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸಲ್ಲಿಸಿರುವ ನಿಲುವಳಿ ಸೂಚನೆಯನ್ನು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ತಿರಸ್ಕರಿಸಿರುವ ಬೆನ್ನಲೇ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ. ‘ಕುಟುಂಬ ರಾಜಕಾರಣ’ಕ್ಕೆ ತಲೆಬಾಗದೆ ತನ್ನ ಅಸ್ಥಿತ್ವ ಉಳಿಸಿಕೊಂಡಿರುವ ಸಂಸ್ಥೆಗಳನ್ನು ದುರ್ಬಲಗೊಳಿಸಲು ವಿರೋಧ ಪಕ್ಷಗಳು ಅಭಿಯಾನ ಪ್ರಾರಂಭಿಸಿವೆ’ ಎಂದು ಟೀಕಿಸಿದ್ದಾರೆ.