ರಾಮನಗರ: ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳೆರೆಡರಲ್ಲೂ ಜಯ ಗಳಿಸಿರುವುದಕ್ಕೆ ಜೆಡಿಎಸ್ನ ಸ್ಥಳೀಯ ಮುಖಂಡರು ಹರ್ಷ ವ್ಯಕ್ತಪಡಿಸಿದರು.
‘ಕುಮಾರಸ್ವಾಮಿ ಅವರು ಎರಡೂ ಕಡೆ ಸ್ಪರ್ಧೆ ಮಾಡಿ, ಹೆಚ್ಚಿನ ಪ್ರಚಾರ ಮಾಡದಿದ್ದರೂ ಜನತೆ ಅವರ ಕೈ ಹಿಡಿದಿದ್ದಾರೆ. ಇದು ಇಲ್ಲಿನ ಜನರಿಗೆ ಅವರ ಮೇಲಿರುವ ಅಭಿಮಾನವನ್ನು ತೋರಿಸುತ್ತದೆ. ಜಿಲ್ಲೆಯಲ್ಲಿ ಇಂದಿಗೂ ಜೆಡಿಎಸ್ ಬಲಿಷ್ಠವಾಗಿರುವುದಕ್ಕೆ ಈ ಬಾರಿಯ ಫಲಿತಾಂಶವು ನಿದರ್ಶನವಾಗಿದೆ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಎರಡೂ ಕ್ಷೇತ್ರಗಳಲ್ಲಿ ಅವಳಿ ನಗರಗಳನ್ನು ಅಭಿವೃದ್ಧಿ ಮಾಡುವ ಕನಸನ್ನು ಕುಮಾರಸ್ವಾಮಿ ಹೊಂದಿದ್ದಾರೆ. ಅವರು ಮುಖ್ಯಮಂತ್ರಿ ಆದಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಮಾದರಿಯಾಗಿ ಅಭಿವೃದ್ಧಿ ಕಾಣಲಿದೆ’ ಎಂದು ಆಶಯ ವ್ಯಕ್ತಪಡಿಸಿದರು.
ಎಚ್ಡಿಕೆ ಯಾವ ಕ್ಷೇತ್ರಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವ ಪ್ರಶ್ನೆಗೆ ‘ಇದನ್ನು ಕುಮಾರಸ್ವಾಮಿ ಅವರು ನಿರ್ಧರಿಸಲಿದ್ದಾರೆ’ ಎಂದಷ್ಟೇ ಹೇಳಿದರು.
ಪಕ್ಷದ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಕಾರ್ಯದರ್ಶಿ ರೈಡ್ ನಾಗರಾಜು, ನಗರಸಭೆ ಸದಸ್ಯರಾದ ರವಿ, ಮಂಜುನಾಥ್, ಡಿ.ಕೆ, ಶಿವಕುಮಾರ್, ಮುಖಂಡರಾದ ಅಜಯ್ ದೇವೇಗೌಡ, ಸೋಮಶೇಖರ್, ನರೇಂದ್ರ ಇದ್ದರು.