ಗೋರೆಗಾಂವ್ನ ನನ್ನಣ್ಣನ ಮನೆಗೆ ಮುಂಜಾನೆಯ ಒಂಬತ್ತಕ್ಕೆಲ್ಲ ಠಾಕೋಠೀಕ್ ಬಂದು ಬೆಲ್ ಒತ್ತುತ್ತಿದ್ದ ಮನೆಗೆಲಸದ ಜಾನಕಿಬಾಯಿ ಇನ್ನೂ ಪತ್ತೆ ಇರಲಿಲ್ಲ. ಹೇಗೆ ಬಂದಾಳು? ಹಿಂದಿನ ಸಂಜೆಯಿಂದಲೇ ಭೋರಿಡಿದು ಮಳೆ ಬಾರಿಸುತ್ತಿತ್ತು ಮುಗಿಲು. ಆದರೂ ಹತ್ತು ಹೊಡೆಯುವ ಹೊತ್ತಿಗೆ ಬಂದವಳು ‘ಹೇ ಬಗಾ ತಾಯೀ ...’ ಅನ್ನುತ್ತ ‘ಮುಂಬಯಿ ಮಳೆ ಅಂದರೆ ಸದಾ ಹೀಗೆ ಹುಚ್ಚು ಹಿಡಿದಂತೆ ಆಡುತ್ತೆ, ಲೋಕಲ್ ಟ್ರೇನು ಸಮಯಕ್ಕೆ ಬರೋದಿಲ್ಲ... ಅದಕ್ಕೆ ತಡವಾಯ್ತು’ ಅನ್ನುವುದನ್ನು ತನ್ನದೇ ಶಬ್ದಗಳಲ್ಲಿ ಹೇಳಿದಳು.
ನಾನು ಹದಿನೆಂಟನೆಯ ಫ್ಲೋರಿನ ಆ ಮನೆಯ ಕಿಟಕಿಯೊಳಗಿಂದ ಮೋಡಗಳೆಲ್ಲ ಒಡೆದು ಚೂರಾಗಿ ಚಿಮ್ಮಿದಂತೆ ದಬಾಯಿಸಿ ಸುರಿಯುತ್ತಿದ್ದ ಲಕ್ಷಗಟ್ಲೆ ಕೊಡ ನೀರನ್ನೇ ನೋಡುತ್ತ ಕೂತಿದ್ದೆ.
ನಿಜವಲ್ಲದೆ ಇನ್ನೇನು? ಅನಿಸಿತು ಅವಳ ಮಾತು. ಈ ಮುಂಬಯಿಕರ್ಗಳು ಮಾತ್ರ ಇಂಥ ಯಾವುದೇ ಪಾವೂಸ್ (ಮಳೆ)ಗೆ ಕಿಂಚಿತ್ತೂ ಬೆಚ್ಚದ, ಸೊಪ್ಪು ಹಾಕಲಾರದ ಗಟ್ಟಿಗರು.
ಹೌದು, ಜುಲೈ ಸಮಯಕ್ಕೆ ಮುಂಬಯಿಯಲ್ಲಿ ಆಕಾಶ ಒಡೆದು ಬಿದ್ದಂತೆ ಮಳೆ ಆಗುತ್ತದೆ. ಒಂದೊಂದು ವರ್ಷ ಸ್ವಲ್ಪ ರಿಯಾಯಿತಿ ತೋರಿದರೂ ವರುಣನ ಆರ್ಭಟಗಳಿಗೆ ಸಂಪೂರ್ಣವಾಗಿ ಒಗ್ಗಿ ಹೋಗಿದ್ದಾರೆ ಅಲ್ಲಿನ ಜನ.
ಇಡೀ ವರ್ಷದ ಅಗಾಧ ಸೆಕೆ, ಧಗೆ, ಕೊಳೆ ಎಲ್ಲವನ್ನೂ ವಾರಗಳ ಕಾಲ ಮುಳುಗಿಸಿಟ್ಟು ಕ್ಲೀನ್ ಮಾಡುವ ಹುಮ್ಮಸ್ಸು ಈ ಮಾನ್ಸೂನಿನ ಹುಚ್ಚು ಮಳೆಗೆ. ರಸ್ತೆಗಳ ಗುಂಡಿಗಳೊಳಗೆ ತುಂಬಿ ನಿಂತು, ತಗ್ಗುಮನೆಗಳ ಬಿಡಿ, ಎತ್ತರದ ಮಹಡಿಗಳನ್ನೂ ಹೊಕ್ಕು ಜನರ ತಕರಾರು ಲೆಕ್ಕಿಸದೆ ಒಳಗಿನ ಪೀಠೋಪಕರಣ, ಮಂಚ, ಹಾಸಿಗೆ, ಪಾತ್ರೆ ಪುಸ್ತಕಗಳಿಗೆ ಬಲವಂತದ ಸ್ನಾನ ಮಾಡಿಸುವ ಮಳೆಯ ನೀರಿಗೆ ಅಲ್ಲಿನ ಜೋಪಡಪಟ್ಟಿಗಳೆಂಬ ಕೊಳೆಗೇರಿ ಮನೆಗಳ ಮೇಲೆ ವಿಶೇಷ ಅನುಗ್ರಹ ಸುರಿಯುವುದೇನಚ್ಚರಿ? ಅವರೆಲ್ಲ ಕಷ್ಟಗಳಿಗಂಜದ ಗುಂಡಿಗೆಯವರು.. ''ಕ್ಯಾ ಸಾಲಾ ಬಾರಿಶ್ ಇಸ್ ಬಾರ್ ತೋ ಕಮಾಲ ಹೀ ಕರ್ದಿಯಾ.. ದಿಮಾಗ್ ಫಿರ್ಗಯಾ ಇಸ್ಕಾ'' ಅಂತ ಬೈದು, ಬೈದರೂ ಅದೇ ಮಳೆಯಲ್ಲಿ ನೆಂದು, ಅ ನೆನೆಯುವಿಕೆಯಲ್ಲೂ ದೈನಂದಿನ ತಮ್ಮ ಯಾವುದೇ ಕಾಯಕಕ್ಕೆ ವಿರಾಮ ಇಲ್ಲವೇ ಇಲ್ಲ...ನಿಂತೂ ನಿಲ್ಲದೆ ನಡೆಯುವುದಕ್ಕೇ ಮುಂಬಯಿ ಅಂತಾರೆ!!
ಒಂದಿನ, ಎರಡು ದಿನ ಹೆಚ್ಚೆಂದರೆ ನಾಲ್ಕು ದಿನ ಮನೆಯಲ್ಲಿ ಕೂತು ಶಾಲೆ ಕೊಟ್ಟ ರಜಾದ ಮಜೆ ತೊಗೊಂಡ ಮಕ್ಕಳಿನ್ನು ಎದ್ದು ಹೊರಡಲೇಬೇಕಿರುವ ದಿನಗಳು ಬಾರದೆ ಇಲ್ಲವಲ್ಲ. ಅಂಥ ಅವರಿಗಾಗಿ ಯಾವ ಸವಲತ್ತೂ ಇಲ್ಲವೆನ್ನುತ್ತ ಧಪಾರೆಂದು ಬಾರಿಸುವ ಮಳೆಯಲ್ಲೇ ರೇನ್ಕೋಟ್ ಏರಿಸಿ, ಶಾಲಾಬ್ಯಾಗು ಬೆನ್ನಿಗೆ ಹೊರಿಸಿ, ಊಟದ ಡಬ್ಬಿ ಹಿಡಿದು ಸ್ಕೂಲ್ ಬಸ್ಸೇರುವ ಮಕ್ಕಳು ಬಲು ಬೇಗ ಮಳೆಯನ್ನು ಒಪ್ಪಿಕೊಂಡುಬಿಡ್ತಾರೆ. ಗಾಲಿಯನ್ನೇ ಮುಳುಗಿಸುವಷ್ಟು ಏರಿದ ರಸ್ತೆಯ ನೀರಿನಲ್ಲಿ ಡುಬುಕ್ ಡುಬಕ್ ಅನ್ನುತ್ತ ಹೊಯ್ದಾಡಿ ಕಡೆಗೂ ಒಮ್ಮೆ ಅವರವರ ಸ್ಟಾಪಿಗೆ ತಂದಿಳಿಸುವ ಸ್ಕೂಲ್ ಬಸ್ಸಿಗೆ ಒಳಗಿದ್ದ ಕೊನೆಯ ಮಗುವೂ ಇಳಿದು ಹೋದಾಗ ಮಹಾ ಯಜ್ಞವನ್ನು ಪೂರೈಸಿದ ಸುಖ.
ರಸ್ತೆ ನಡುವೆ, ಸಮುದ್ರದಂಚಿನಲ್ಲಿ, ಕೆರೆಯಾಗಿರುವ ಆಟದ ಮೈದಾನಗಳಲ್ಲಿ ಛತ್ರಿ ಹಿಡಿದು ನಿಂತ ಟಿ.ವಿ ಮಾಧ್ಯಮದವರು, ಆಕಾಶವಾಣಿಯವರು, ಪತ್ರಿಕೆಗಳವರು ಮಳೆಯ ಸ್ವರೂಪ ವರ್ಣನೆಗೆ, ಅದು ನಡೆಸಿರುವ ದಾಂದಲೆಗೆ, ರೇನ್ಕೋಟಿನಲ್ಲಿ ಮುಖ ಅಷ್ಟೇ ಕಂಡ ಬೈಕು, ಸ್ಕೂಟರ್ ಸವಾರರನ್ನು ಮಳೆಯ ಆರ್ಭಟಕ್ಕೆ, ಅವರಿಗಾದ ತೊಂದರೆಗಳ ಬಗ್ಗೆ ಸತತ ಪ್ರಶ್ನೆಗಳನ್ನಿಡುತ್ತ 'ಆಕಾಶ ಕಳಚಿ ಬಿದ್ದ ಮಳೆ, ಮೋಡ ಒಡೆದ ಮಳೆ...ಟೊರೆನ್ಶಿಯಲ್ ರೇನ್ ಫಾಲ್, ಕ್ಲೌಡ್ ಬರ್ಸ್ಟ್, ರೇನಿಂಗ್ ಕ್ಯಾಟ್ಸ್ ಅಂಡ್ ಡಾಗ್ಸ್' ಅನ್ನುವ ಶಬ್ದ ವಿಶೇಷಣಗಳನ್ನು ಬಳಸುತ್ತ ನಗರಪಾಲಿಕೆ, ಪಿ.ಡಬ್ಲೂ.ಡಿ, ನಗರಾಡಳಿತ ಇಲಾಖೆಯ ಅಧಿಕಾರಿಗಳು ಮತ್ತು ಮಂತ್ರಿಗಳ ಜನ್ಮ ಜಾಲಾಡುತ್ತಾರೆ...ಇದಾವುದೂ ಏನೂ ಪರಿಣಾಮ ಬೀರದು ಎಂದು ತಿಳಿದಿದ್ದರೂ ಆ ಕಾರ್ಯಕ್ರಮ ಅತೋನಾತವಾಗಿ ನಡೆದುಬಿಟ್ಟಿರುತ್ತೆ... ನೀರು ತುಂಬಿದ ಗುಂಡಿಗಳಲ್ಲೇ ಅವರಿವರನ್ನು ನಿಲ್ಲಿಸಿ ಅವರ ಅನುಭವ ಕೇಳಿ ಅದಕ್ಕಿನ್ನಷ್ಟು ಬಣ್ಣ ಬಳಿದು ಫೋಟೋ– ವೀಡಿಯೋ ಸಮೇತ ಜಗತ್ತಿಗೆ ತಲುಪಿಸಿದರೆ ಅವರ ಜವಾಬ್ದಾರಿ ಮುಗೀತು...ಇಂಥ ಅವ್ಯವಸ್ಥೆ ಕರಾವಳಿಯ ಮಳೆಗಾಲದ, ವಿಶೇಷವಾಗಿ ಸಮುದ್ರದಂಚಿನ ಸಮಸ್ತ ಊರುಗಳಿಗೆ ಇತ್ತೀಚಿನ ವರ್ಷಗಳಲ್ಲಿ ಸಹಜ ಅನ್ನುವಂತಾಗಿದೆ.
/ಮನೆಗಳ ಟಿ.ವಿಗಳಲ್ಲಿ ಇದನ್ನು ಕಾಣುತ್ತ ಅವರೊಡನೆ ತಮ್ಮದೂ ಹಿಡಿಶಾಪಗಳನ್ನು ಬೆರೆಸುತ್ತ ಈ ಹಿಂದೆ ತಾವನುಭವಿಸಿದ ಇಂಥದೇ ಪೀಡೆಯ ನೆನಪನ್ನು ಇವತ್ತಿನದರೊಂದಿಗೆ ಹೋಲಿಸುತ್ತ ಕೆಟ್ಟು ಹೋದ ಕಾಲದ ಬಗ್ಗೆ ಇನ್ನಷ್ಟು ವಿಶ್ಲೇಷಣೆ ಮಾಡುತ್ತ ಇಂಥ ಪರಿಸ್ಥಿತಿಗೆ ಕಾರಣಗಳನ್ನು ಹುಡುಕಹೋಗುತ್ತಾರೆ. ಕೊನೆಗೆ ಸೋತು ಕೈ ಚೆಲ್ಲಿ 'ಪಾವೂಸ ಥಾಂಬಲ್ಯಾವರಚ ಬಘೂಯಾ..' (ಮಳೆ ನಿಂತ ಮೇಲೆಯೇ ನೋಡಿದ್ರಾಯ್ತು) ಅನ್ನುತ್ತ ತಮ್ಮ ಹಲವೆಂಟು ಕಾರ್ಯಕ್ರಮಗಳನ್ನು ಅನಿರ್ದಿಷ್ಟ ಕಾಲಕ್ಕೆ ಮುಂದೂಡುತ್ತಾರೆ... ಇನ್ನು ಹಲವರು ‘ತ್ಯಾಚಾತ್ ಕಾಯ್? ಆಪಲ ಆಪಣ ಕರೂಯಾ?’ (ಮಳೆ ಇದ್ರೇನಾಯ್ತು ನಮ್ಮ ಕೆಲಸ ಮುಗ್ಸೋಣ) ಅನ್ನುವವರು./
ಮುಂಬಯಿಯ ನರನಾಡಿ, ರಕ್ತ ನಾಳಗಳಾಗಿ ಹರಿದಾಡುವ ರೈಲು, ಲೋಕಲ್, ಮೆಟ್ರೋಗಳಿಗೆಲ್ಲ ಕೊಂಚ ಅಲ್ಲಲ್ಲೇ ನಿಂತು ಸುಧಾರಿಸಿಕೊಳ್ಳುವ ಸಮಯ. ಉಸಿರು ಹೊರಹಾಕುತ್ತ ಠಸ್ಸೆಂದು ಎಂಜಿನ್ ಭುಸುಗುಟ್ಟಿ ಕಣ್ಣು ಮಿಟುಕಿಸುತ್ತವೆ.. ' /‘ಚ್ಯಾಯಲಾ...(ಒಂದು ಮರಾಠೀ ಬೈಗಳು) ಸಗಳೇ ಲೋಕಲ್ ಠಪ್ಪ...’ (ಎಲ್ಲಾ ಲೋಕಲ್ ರೈಲು ನಿಂತ್ಹೋತು) ಅನ್ನುತ್ತ ತಮ್ಮ ಬದುಕಿನ, ಅಂದಂದಿನ ಗಳಿಕೆಯ ಮೂಲವಾದ ತರಕಾರಿ, ಮೀನು, ಮೊಟ್ಟೆ, ಹಣ್ಣು, ಇನ್ನೇನೇನೋ ದಿನಬಳಕೆ ಸಾಮಾನಿನ ರಾಶಿ ಮನೆಯ ಮೂಲೆ ಹಿಡಿದು ಕೂತಿದ್ದನ್ನು ಕಾಣುತ್ತ ಕೊರಗುವ ರಸ್ತೆಬದಿ ಮಾರಾಟಗಾರರ ಪಡಿಪಾಟಲು... ಮುಂಬಯಿಯ ಮುಕ್ಕಾಲುಪಾಲು ಜನರ ಹೊಟ್ಟೆಗೆ ಆಹಾರ ಒದಗಿಸುವವರೇ ಇವರು. /
‘ಅರೇ..ಶೂಟಿಂಗ್ ಕ್ಯಾನ್ಸಲ್...ಚಲೋ ಕಂಹೀ ಮಿಲ್ಕೇ ಟೈಮ್ ಪಾಸ್ ಕರೇಂಗೇ...’ ಅಂತ ಒಬ್ಬರನ್ನೊಬ್ಬರು ನಿರಂತರ ಮೊಬೈಲ್ ಮೂಲಕ ಎಳೆದುಕೊಳ್ಳುವ ಟಿ.ವಿ, ಸಿನಿಮಾ ತಾರೆಗಳ ಮುಖದೊಳಗೆ ಒಂದಿಷ್ಟು ವಿಶ್ರಾಂತಿ ಕಂಡ ಖುಷಿ...
ಗುಡುಗು, ಸಿಡಿಲುಗಳ ಲೆಕ್ಕಾಚಾರದೊಂದಿಗೆ ಸಮುದ್ರಕ್ಕೆ ಇನ್ನಷ್ಟು ನೀರು ತುಂಬಿಸುವ ಮಳೆಯೇ ಹದಿನೈದಿಪ್ಪತ್ತು ಅಡಿಗಳೆತ್ತರಕ್ಕೆ ಎತ್ತಿ ಎತ್ತಿ ಬೀಚುಗಳಂಚಿನ ಬೆಂಚು, ಕಟ್ಟೆ, ಫುಟ್ಪಾತುಗಳಿಗೆ ಬೀಸಿ ಬಡಿದರೆ ಸಮುದ್ರದ ಆ ಉಬ್ಬರದ ಅಬ್ಬರವನ್ನು ಕಂಡು ಸುಖಿಸುವ ಕೆಲವು ಜನ- ಹೆಚ್ಚಾಗಿ ಪ್ರವಾಸಿಗರು- ಅದಕ್ಕೆಂದೇ ಮರಿನ್ ಡ್ರೈವಿನಂಥ ಜಾಗಗಳಿಗೆ ಓಡುವುದಿದೆ. ಇದೇ ಕಾರಣಕ್ಕೆ ಮಳೆಗಾಲದಲ್ಲಿನ ಮುಂಬಯಿ ಅಂದರೆ ನನಗೊಂದು ವಿಶೇಷ ಮೆಚ್ಚು...ಆ ಸಮಯದಲ್ಲಿ ಅಲ್ಲಿದ್ದರೆ ಇಂಥ ಸಾಗರಮೊರೆತದಾಟ ನೋಡಲು ಹೋಗದಿರಲಾರೆ... ಒಮ್ಮೆ ಹೀಗಾಯ್ತು. ಮಧ್ಯಾಹ್ನದವರೆಗೂ ಸುಮ್ಮನಿದ್ದ ಆಕಾಶ ಮೂರು ಗಂಟೆಯಷ್ಟೊತ್ತಿಗೆ ಅದರ ನೀರ ಹೊಟ್ಟೆಯ ಕೊಡ ಒಡೆದು ಬೋರಲಾಗಿಸಿ ಒದ್ದೊದ್ದು ಬಾರಿಸಿತು. ಆಕಾಶದ ಮೋಡಗಳ ಅಪ್ಪಿಕೊಳ್ಳುವ ಹುಮ್ಮಸ್ಸು ಹೊಕ್ಕು ಕೆಳಗಿನ ಸಮುದ್ರ ಎದ್ದು ನೆಗೆಯಿತು... ನೋಡ ನೋಡುವಷ್ಟರಲ್ಲಿ ಹದಿನೆಂಟಡಿ ಎತ್ತರದ ಬ್ರಹ್ಮಾಂಡದಂಥ ರಕ್ಕಸ ತೆರೆಗಳ ಉಕ್ಕಿ ಕಿವಿ ಗಡಚಿಕ್ಕಿಸುವ ಸದ್ದಿನೊಂದಿಗೆ ಮರಿನ್ ಡ್ರೈವ್ನ ಮೈಲಿಗಟ್ಲೆ ಉದ್ದದ ತಡೆಗೋಡೆಯನ್ನು ಹಾರಿ ಬಂದು ನನಗೆ ನಿಂತಲ್ಲೇ ಸಂಪೂರ್ಣ ಜಲಾಭಿಷೇಕ! ಒಂದು ಕ್ಷಣ ಸಾಗರವೇ ನನ್ನನ್ನು ಒಳಗೆಳೆದುಕೊಳ್ಳಲು ಬಂತೋ ಅನ್ನುವ ದಿಗಿಲು ಮೂಡಿಸಿ ಕೈ ಕಾಲುಗಳೆಲ್ಲ ತತ್ತರಬಿತ್ತರ ಆಗುತ್ತ ಕಣ್ಣು ಮೂಗಲ್ಲೆಲ್ಲ ಹೊಕ್ಕ ಉಪ್ಪು ನೀರು ಉಸಿರುಗಟ್ಟಿಸುತ್ತದೇನೋ ಅನಿಸುವಾಗಲೇ ಬಂದಷ್ಟೇ ರುದ್ರ ರಭಸ ಜೋರಿನಲ್ಲಿ ಅಲ್ಲೇ ಕುಸಿದು ಕಳಕಳ ನೀರಿನ ಧಾರೆ ರಸ್ತೆ, ಫುಟ್ಪಾತು, ಅಲ್ಲಿದ್ದ ಗಿಡಮರದಂಥ ಸಮಗ್ರವನ್ನೂ ಹೊಚ್ಚಿ ಮುಚ್ಚಿತು.
ಟ್ಯಾಕ್ಸಿ ಹಿಡಿದು ಮನೆಗೆ ಮರಳಿ ಬಂದು ಕಾಫಿ ಕುಡಿದು ಮಲಗಿದ ಮೇಲೆಯೂ ಅರಬ್ಬೀ ಸಮುದ್ರ ನನಗೆ ಎರಚಿದ ಜಲಾಭಿಷೇಕದ ಅನಿರ್ವವಚನೀಯತೆ ಕಡಿಮೆಯಾಗಲೇ ಇಲ್ಲ! ಅದೊಂದು ಕಣ್ಮುಚ್ಚಿ ಒಳಗೊಳ್ಳಬೇಕಾದ ಸುಖವಾಗಿ ನನ್ನ ನೆನಪಿನಲ್ಲಿಳಿದಿದೆ. ಇನ್ನೊಮ್ಮೆ, ಮತ್ತೊಮ್ಮೆ ಮಗುದೊಮ್ಮೆಗೂ ಮಳೆಗಾಲ...ಮುಂಬಯಿ ಮರಿನ್ ಡ್ರೈವಿನ ಆ ಜಲಾಭಿಷೇಕ ಬೇಕೆನಿಸಿ ಮನಸ್ಸು ಕಾಯತ್ತಿರುತ್ತೆ!
–ಜಯಶ್ರೀ ದೇಶಪಾಂಡೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.