ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇ ಮಾ! ಮಾಲಿನೀ

Last Updated 19 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ನಾನು ಪಿಯುಸಿ ಎರಡನೇ ವರ್ಷ ಓದುತ್ತಿದ್ದಾಗ ನಮಗೆ ರವೀಂದ್ರನಾಥ ಟ್ಯಾಗೋರರ ‘ನೌಕಾಘಾತ’ ಕಾದಂಬರಿಯ ಇಂಗ್ಲಿಷ್ ಭಾಷಾಂತರವನ್ನು ಪಠ್ಯವಾಗಿ ಓದುವ ಅವಕಾಶ ಒದಗಿತ್ತು. ಅದೊಂದು ರೊಮ್ಯಾಂಟಿಕ್ ಕಥೆ. ಇಂದಿನ ಸೀರಿಯಲ್ ನಿರ್ಮಾಪಕರ ಕಣ್ಣಿಗೆ ಯಾಕೋ ಈ ಕಥೆ ಬಿದ್ದಿಲ್ಲ.

ಈ ಕಾದಂಬರಿಯಲ್ಲಿ ಬರುವ ಒಂದು ಪಾತ್ರದ ಹೆಸರು ಹೇಮನಳಿನಿ. ಅದನ್ನು ಇಂಗ್ಲಿಷ್‌ನಲ್ಲಿ ಬರೆದಾಗ, ಗಮನವಿಟ್ಟು ಓದದೇ ಹೋದರೆ ಯಾರಾದರೂ ‘ಹೇಮಮಾಲಿನಿ’ ಎಂದು ಓದುವುದು ಸ್ವಾಭಾವಿಕ. ಅದರಲ್ಲೂ ಆಗ ಹೇಮಮಾಲಿನಿ ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನದ ಶಿಖರದಲ್ಲಿದ್ದರು.

ಬೇರೊಂದು ಸೆಕ್ಷನ್‌ನಲ್ಲಿ ಇಂಗ್ಲಿಷ್ ಪಾಠ ಮಾಡುತ್ತಿದ್ದ ನಮ್ಮ ಅಧ್ಯಾಪಕರೊಬ್ಬರು ಸುಮಾರು ಅರ್ಧ ವರ್ಷ ‘ಹೇಮಮಾಲಿನಿ’ ಎಂದು ಓದುತ್ತಲೇ ಪಾಠ ಮಾಡಿದರು. ಒಂದು ದಿನ ಒಬ್ಬ ವಿದ್ಯಾರ್ಥಿ ಅವರಿಗೆ ತಪ್ಪನ್ನು ತೋರಿಸಿಕೊಟ್ಟಾಗ ಐವತ್ತರ ಹರೆಯದ ಅಧ್ಯಾಪಕರು ಕೂಡಾ ನಾಚಿದರು!

ಹೇಮಮಾಲಿನಿ ಅವರ ಹೆಸರನ್ನು ಉತ್ತರ ಭಾರತೀಯರು ‘ಹೇಮಾ ಮಾಲಿನಿ’ ಎಂದು ಸ್ವಲ್ಪ ತಿರುಚಿದ್ದಾರೆ. ಅದನ್ನು ಕೇಳಿದಾಗ ‘ಹೇ ಮಾ! ಮಾಲಿನಿ!’ ಅಥವಾ ‘ತಾಯೇ ಮಾಲಿನೀ’ ಎಂದಂತೆ ಭಾಸವಾಗುತ್ತದೆ. ತಾಯಿಯ ಪಾತ್ರಗಳಿಗೆ ಸಾಗಿರುವ ಅಭಿನೇತ್ರಿಗೆ ಈಗ ಯಾರಾದರೂ ತಮ್ಮನ್ನು ‘ಹೇ ಮಾ!’ ಎಂದು ಕರೆದರೆ ಬೇಸರವಾಗುವುದಿಲ್ಲ ಎಂದು ನನ್ನ ಭಾವನೆ. ಇಷ್ಟೆಲ್ಲಾ ಪೀಠಿಕೆಯನ್ನು ನಾನು ಯಾಕೆ ಹಾಕಿದೆ ಗೊತ್ತೇ? ಸರಿ, ಕೇಳಿ.

ಇತ್ತೀಚೆಗೆ ನಾನು ನನ್ನ ಕುಟುಂಬದವರೊಂದಿಗೆ ಒಂದು ಮಾಲ್‌ಗೆ ಹೋಗಬೇಕಾದ ಪ್ರಸಂಗ ಒದಗಿತು. ಮಾಲ್ ಎಂದರೆ ನನಗೆ ಅಷ್ಟಕ್ಕಷ್ಟೆ. ಸ್ವಲ್ಪ ಹಳೆಯ ಹಿಂದಿ ಚಿತ್ರಗಳಲ್ಲಿ ಸ್ಮಗ್ಲರ್ ದೊರೆ ‘ಮಾಲ್ ಆಪ್ ಕೇ ಪಾಸ್ ಪಹುಂಚ್ ಜಾಯೇಗಾ’ ಎಂದು ಗಂಭೀರವಾಗಿ ಡೈಲಾಗ್ ಹೇಳುತ್ತಿದ್ದದ್ದು ನಿಮಗೆ ನೆನಪಿದೆಯೇ? ‘ಮಾಲು ನಿನ್ನನ್ನು ಬಂದು ಸೇರುತ್ತದೆ’ ಎಂಬುದು ಈ ಡೈಲಾಗ್‌ನ ಅರ್ಥ.

ಈ ವಾಕ್ಯವು ಕೆಲವೇ ದಶಕಗಳಲ್ಲಿ ನಿಜವಾಗಿ ಪರಿಣಮಿಸುವ ಭವಿಷ್ಯವಾಣಿಯಾಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ! ಮಾಲ್ ಈಗ ನಮ್ಮ ಮನೆಗಳ ಹತ್ತಿರವೇ ಬಂದುಮುಟ್ಟಿದೆ. ಜೆೋಬಿನಲ್ಲಿ ಮಾಲ್ ಇದ್ದರೆ ಸಾಕು. ಹತ್ತಾರು ಮಾಲ್ ನಿಮ್ಮನ್ನು ಕೈ ಬೀಸಿ ಕರೆಯುತ್ತವೆ. ಮಾಲ್‌ನಲ್ಲಿ ನಾನು ಒಂದು ಸಂಭಾಷಣೆ ಕೇಳಿದೆ. ಒಬ್ಬ ತರುಣ ತನ್ನ ಸ್ನೇಹಿತೆಯ ಜೊತೆ ಹರಟುತ್ತಿದ್ದ.

‘ನಾಳೆ ಫೋರಮ್ ಮಾಲ್‌ಗೆ ಹೋಗೋಣವಾ?‘
‘ಇಲ್ಲ. ನಾಳೆ ಮೀನಾಕ್ಷಿ ದೇವಸ್ಥಾನಕ್ಕೆ ಹೋಗಬೇಕು’.
‘ಸರಿ, ಮೀನಾಕ್ಷಿ ದೇವಸ್ಥಾನಕ್ಕೆ ಹೋಗಲಿ, ನೀನು ಮಾಲ್‌ಗೆ ಬಾ’.
‘ಏ! ದೇವರ ಜೊತೆ ಹಾಗೆಲ್ಲ ಹುಡುಗಾಟ ಮಾಡಬಾರದು!’

‘ಸರಿ, ಎಲ್ಲಿದೆ ಮೀನಾಕ್ಷಿ ದೇವಸ್ಥಾನ?’
‘ಬನ್ನೇರುಘಟ್ಟ ರಸ್ತೆ ಮೇಲೆ ಅರಕೆರೆ ದಾಟಿ ಹೋಗಬೇಕು. ಅಪೋಲೋ ಆಸ್ಪತ್ರೆ ಗೊತ್ತಾ?’
‘ಅದೇ ಮೀನಾಕ್ಷಿ ಮಾಲ್ ಇದೆಯಲ್ಲ?’
‘ಹೌದು ಹೌದು! ಮೀನಾಕ್ಷಿ ಮಾಲ್ ನೋಡಿದೀಯಾ, ಅದರ ಎದುರಿಗೇ ಇರೋದು ಮೀನಾಕ್ಷಿ ದೇವಸ್ಥಾನ!’

‘ಪರವಾಗಿಲ್ಲ, ಒಳ್ಳೇ ಜಾಗದಲ್ಲೇ ದೇವಸ್ಥಾನ ಕಟ್ಟಿಸಿದ್ದಾರೆ. ಮಾಲ್‌ಗೆ ಬರೋರೆಲ್ಲಾ ದೇವಸ್ಥಾನಕ್ಕೂ ಬರ್ತಾರೆ. ಹೇಗಿದ್ದರೂ ನೀನು ಅಷ್ಟು ಹತ್ತಿರ ಹೋಗ್ತಿದೀಯ. ನಾವು ಯಾಕೆ ಮೀನಾಕ್ಷಿ ಮಾಲ್‌ಗೇ  ಹೋಗಬಾರದು?"

ಹೀಗೆ ನಮ್ಮ ಬೆಂಗಳೂರು ಬದಲಾಗುತ್ತಿದೆ. ಸೆಂಟ್ರಲ್ ಮಾಲ್ ಹತ್ತಿರವೇ ರಾಗಿಗುಡ್ಡದ ಆಂಜನೇಯ ಸ್ವಾಮಿಗೆ ದೇವಸ್ಥಾನ ಕಟ್ಟಿಸಿದ್ದಾರೆ. ಗೋಪಾಲನ್ ಮಾಲ್ ಹತ್ತಿರ ರಾಜರಾಜೇಶ್ವರಿ ದೇವಸ್ಥಾನ ಕಟ್ಟಿಸಿದ್ದಾರೆ. ಮಂತ್ರಿ ಸ್ಕ್ವೇರ್ ಹತ್ತಿರ ಕಾಡು ಮಲ್ಲೇಶ್ವರನ ಗುಡಿ ಕಟ್ಟಿಸಿದ್ದಾರೆ. ಮಂತ್ರಿ ಸ್ಕ್ವೇರ್ ಜೊತೆಗೆ ಸ್ಪರ್ಧಿಸಲು ಈಗ ಒರಾಯನ್ ಮಾಲ್ ಕೂಡಾ ಬಂದಿರುವುದರಿಂದ ಈ ಪ್ರದೇಶಕ್ಕೆ ‘ಮಾಲೇಶ್ವರಂ’ ಎಂಬ ಹೆಸರು ಕೂಡಾ ಬಂದಿದೆ.

ಈ ಸಂಭಾಷಣೆ ಕೇಳುತ್ತಾ ನನಗೊಂದು ಐಡಿಯಾ ಹೊಳೆಯಿತು. ದೇವಸ್ಥಾನಗಳು ಮಾಲ್‌ಗಳ ಹತ್ತಿರ ಬರುತ್ತಿವೆಯಾದರೆ ನಾವೇಕೆ ಮಾಲ್ ಒಳಗೇ ದೇವಸ್ಥಾನ ಕಟ್ಟಿಸಿಬಿಡಬಾರದು! ಹಾಗೇ ಕಣ್ಮುಚ್ಚಿ ಕಲ್ಪಿಸಿಕೊಳ್ಳಿ. ನೀವು ಮಾಲ್‌ನಲ್ಲಿರುವ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಲೆಂದು ಆನ್‌ಲೈನ್‌ನಲ್ಲಿ ನಿಮ್ಮ  ಟಿಕೆಟ್ ಕಾದಿರಿಸಲು ವೆಬ್ ತಾಣಕ್ಕೆ ಹೋಗಿದ್ದೀರಿ.

ಅಲ್ಲೇ ನಿಮಗೆ ಒಂದು ಮೆನು ಎದುರಾಗುತ್ತದೆ. ‘ಮಾಲ್ ದಿವ್ಯ ದರ್ಶನಮ್’. ಅಲ್ಲಿ ನಾನಾ ಬಗೆಯ ಆಫರ್‌ಗಳಿವೆ. ಅರ್ಚನೆ, ಅಲಂಕಾರ, ಪಂಚಾಮೃತ, ತೋ-ಮಾಲ್ ಸೇವೆ, ಇತ್ಯಾದಿ. ತೋಮಾಲ್ ಸೇವೆ ಸೆಲೆಕ್ಟ್ ಮಾಡಿದರೆ ಅರ್ಚನೆ ಫ್ರೀ.  ನೀವು ನಿಮಗೆ ಬೇಕಾದ ಸೇವೆಯನ್ನು ಸೆಲೆಕ್ಟ್ ಮಾಡಿ ಹಣ ಸಂದಾಯ ಮಾಡಿದರೆ ಸಿನಿಮಾ ಟಿಕೆಟ್ ಜೊತೆಗೇ ಸೇವಾವಿವರಗಳುಳ್ಳ ಚೀಟಿಯೂ ನಿಮಗೆ ಲಬ್ಧ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT