ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಕಲಿಸಿದ `ಹಳ್ಳಿ ಮೇಷ್ಟ್ರು'

Last Updated 23 ಮಾರ್ಚ್ 2013, 19:58 IST
ಅಕ್ಷರ ಗಾತ್ರ

ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ): ಚಳ್ಳಕೆರೆ ತಾಲ್ಲೂಕು ಕೇಂದ್ರದಿಂದ 27 ಕಿ.ಮೀ ದೂರದಲ್ಲಿರುವ ಬೆಳಗೆರೆಯಲ್ಲಿ 1916ರ ಮೇ 22ರಂದು ಜನಿಸಿ ಶಿಕ್ಷಕ ವೃತ್ತಿಯನ್ನೇ ಪರಮ ಸೇವೆ ಎಂದುಕೊಂಡು, ಅಕ್ಷರದ ಅರಿವೇ ಇಲ್ಲದ ಹಳ್ಳಿ ಮಕ್ಕಳಿಗೆ ಅಕ್ಷರ ಕಲಿಸಿದ ಶಿಕ್ಷಕ ಬೆಳಗೆರೆ ಕೃಷ್ಣಶಾಸ್ತ್ರಿಗಳು. ಹೀಗಾಗಿ ಬೆಳಗೆರೆ ಆಸುಪಾಸಿನ ಹತ್ತಾರು ಗ್ರಾಮಗಳಲ್ಲಿ ಅಬರನ್ನು ಜನ ಗುರುತಿಸಿ ಗೌರವಿಸುತ್ತಿದ್ದದ್ದು `ಹಳ್ಳಿ ಮೇಷ್ಟ್ರು' ಎಂದೇ.

ಮೂಲತಃ ಶಿಕ್ಷಕರಾಗಿದ್ದ ಅವರು ತಾಲ್ಲೂಕಿನ ಅನೇಕ ಕಡೆಗಳಲ್ಲಿ ತಮ್ಮ ವೃತ್ತಿಯನ್ನು ಸಾರ್ಥಕಗೊಳಿಸುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು.

ಹುಟ್ಟೂರಿನಲ್ಲಿ ಶಿಕ್ಷಣ ಇಲ್ಲದೇ ಸೊರಗುತ್ತಿದ್ದ ಬಡಮಕ್ಕಳಿಗೆ ಅಕ್ಷರ ಕಲಿಸುವ ಮಹತ್ವಾಕಾಂಕ್ಷೆಯಿಂದ ಶಾಲೆ ತೆರೆದು, ಆ ಮೂಲಕ ಸಾವಿರಾರು ಮಕ್ಕಳಿಗೆ ಅಕ್ಷರ ಕಲಿಸುವ ಕೆಲಸ ಮಾಡಿರುವುದು ಇಂದಿಗೂ ನಡೆಯುತ್ತಲೇ ಇದೆ. 

ಮೂಲತಃ ಸಾಹಿತ್ಯದ ವಾತಾವರಣ ಇರುವ ಕುಟುಂಬದಲ್ಲಿ ಜನಿಸಿದ ಕೃಷ್ಣಶಾಸ್ತ್ರಿ ಅವರು, ತಮ್ಮ ತಂದೆ ಬೆಳಗೆರೆ ಚಂದ್ರಶೇಖರ ಶಾಸ್ತ್ರೀ ಅವರಿಂದ ಕಲಿತಿದ್ದು ಆದರ್ಶ ಗುಣಗಳನ್ನು ಮಾತ್ರ. ಇವತ್ತಿಗೂ ದಿ. ಬೆಳಗೆರೆ ಚಂದ್ರಶೇಖರ ಶಾಸ್ತ್ರಿ ಅವರನ್ನು ಸುತ್ತಲ ಹಳ್ಳಿಯವರು `ಕಡ್ಲೇಕಾಯಿ ಶಾಸ್ತ್ರಿ' ಎಂದೇ ನೆನಪಿಸಿಕೊಳ್ಳುತ್ತಾರೆ. ನಿಂತಲ್ಲಿ, ಕುಂತಲ್ಲಿಯೇ ಸಂದರ್ಭಕ್ಕೆ ಅನುಸಾರ ಕವಿತೆ ಕಟ್ಟುವುದು ಚಂದ್ರಶೇಖರ ಶಾಸ್ತ್ರಿ ಅವರಿಗೆ ಒಲಿದಿತ್ತು. ಆದ್ದರಿಂದಲೇ ಅವರನ್ನು `ಆಶು ಕವಿ' ಎಂದು ಕರೆಯುತ್ತಿದ್ದರು. ಅವರಿಗೆ ದ.ರಾ. ಬೇಂದ್ರೆ ಅವರ ಜತೆ ಉತ್ತಮ ಒಡನಾಟ ಇತ್ತು ಎನ್ನುತ್ತಾರೆ ಬಲ್ಲವರು.

ಗಾಂಧಿ, ವಿನೋಬಾ, ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಅವರ ಆದರ್ಶಗಳಿಂದ ಪ್ರಭಾವಿತರಾಗಿದ್ದ ಕೃಷ್ಣಶಾಸ್ತ್ರಿಗಳು, ತಮ್ಮ ಜೀವಿತಾವಧಿಯುದ್ದಕ್ಕೂ ಈ ಆದರ್ಶಗಳನ್ನು ಪಾಲಿಸಿದ್ದರು. ಸದಾ ಬಿಳಿ ವಸ್ತ್ರಧಾರಿಯಾಗಿದ್ದ ಅವರು ಗಾಂಧಿಯ ತತ್ವ, ಆದರ್ಶಗಳಂತೆ ಬದುಕಿ ತೋರಿಸಿದವರು. ಜೋಳಿಗೆ ಹಿಡಿದು ಹಾಸ್ಟೆಲ್‌ನಲ್ಲಿನ ಮಕ್ಕಳಿಗೆ ದವಸ-ಧಾನ್ಯಗಳನ್ನು ತಂದು ಹಾಕುತ್ತಿದ್ದರು. ಇದುವರೆಗೂ ಸರ್ಕಾರದಿಂದ ನಯಾಪೈಸೆಯ ಅನುದಾನ ಪಡೆಯದೇ ಉತ್ತಮ ಶಿಕ್ಷಣ ಸಂಸ್ಥೆ ಕಟ್ಟಿದ ಹೆಗ್ಗಳಿಕೆ ಅವರದು.

ಶಿಕ್ಷಕ ಸೇವೆಯನ್ನು ಗುರುತಿಸಿದ ಸರ್ಕಾರ ಅವರಿಗೆ ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಿತ್ತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರವೂ ಸಂದಿದೆ. ಲಕ್ಷ್ಮೀಶ ಕವಿಯ `ಜೈಮಿನಿ ಭಾರತ' ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಮುಕುಂದೂರು ಸ್ವಾಮಿ ಕುರಿತು ಶಾಸ್ತ್ರೀ ಅವರು ಬರೆದಿರುವ `ಯೋಗ್ದಾಗೆಲ್ಲಾ ಐತೆ' ಸಾಹಿತ್ಯ ವಲಯದಲ್ಲಿ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ ಕೃತಿ.

`ಹಳ್ಳಿ ಚಿತ್ರ', `ಹಳ್ಳಿ ಮೇಷ್ಟ್ರು' ನಾಟಕಗಳನ್ನೂ ಬರೆದಿರುವ ಕೃಷ್ಣಶಾಸ್ತ್ರಿ ಅವರು ಗ್ರಾಮೀಣ ಜನರ ಜೀವನ ಕಥನವನ್ನು ಅತ್ಯಂತ ಮನೋಜ್ಞವಾಗಿ ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದಾರೆ. `ತುಂಬಿ' (ಕವನ ಸಂಕಲನ), ನವೋದಯ ಸಾಹಿತಿಗಳೊಂದಿಗೆ ಕಳೆದ ದಿನಗಳ ನೆನಪಿನ ಬುತ್ತಿಯನ್ನು ಅನಾವರಣಗೊಳಿಸುವ ಮಹತ್ವದ  `ಸಾಹಿತಿಗಳ ಸ್ಮೃತಿ' ಶಾಸ್ತ್ರೀ ಅವರ ಕೃತಿಗಳು. ಕೃಷ್ಣಶಾಸ್ತ್ರಿ ಅವರನ್ನು ಕುರಿತು `ಮರೆಯಲಾದೀತೇ?', `ಇದು ಜೀವ,ಇದುವೇ ಜೀವನ' ಪುಸ್ತಕಗಳು ಹೊರಬಂದಿವೆ.

ಕೃಷ್ಣಶಾಸ್ತ್ರಿ ಅವರ ಸಹೋದರ ಸೀತಾರಾಮ ಶಾಸ್ತ್ರಿ ಅವರ ಹೆಸರಿನಲ್ಲಿ ಬೆಳಗೆರೆಯಲ್ಲಿ ಪದವಿಪೂರ್ವ ಕಾಲೇಜು ಆರಂಭಿಸಲಾಗಿದೆ. ಹಿರಿಯ ಕವಯತ್ರಿ ದಿ. ಬೆಳಗೆರೆ ಜಾನಕಮ್ಮ ಮತ್ತು ಬೆಳಗೆರೆ ಪಾರ್ವತಮ್ಮನವರು ಕೃಷ್ಣಶಾಸ್ತ್ರಿ ಅವರ ಸಹೋದರಿಯರು. ಕೃಷ್ಣಶಾಸ್ತ್ರಿಗಳ ನಿಧನದಿಂದಾಗಿ ಬೆಳಗೆರೆ ಕುಟುಂಬದ ಮೊದಲ ತಲೆಮಾರಿನ ಕೊನೆಯ ಕೊಂಡಿ ಇಲ್ಲವಾಗಿದೆ. ಬೆಳಗೆರೆ ಶಾರದಾ ವಿದ್ಯಾಮಂದಿರದ ಆವರಣದಲ್ಲಿ ಮೌನ ಮಡುಗಟ್ಟಿದೆ.

ಅಂತಿಮ ನಮನ: ಶನಿವಾರ ಸಂಜೆ ಚಳ್ಳಕೆರೆಯ ಪುರಸಭೆ ಮುಂಭಾಗದಲ್ಲಿ ಕೃಷ್ಣಶಾಸ್ತ್ರಿ ಅವರ ಪಾರ್ಥಿವ ಶರೀರಕ್ಕೆ ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಸಾಹಿತಿ ಬಿ.ಎಲ್. ವೇಣು, ಪ್ರೊ.ಬಿ.ಪಿ. ವೀರೇಂದ್ರಕುಮಾರ್, ಸಂಶೋಧಕ ಡಾ.ಬಿ. ರಾಜಶೇಖರಪ್ಪ, ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಡಾ.ಅಶೋಕಕುಮಾರ್ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT