ದಲಿತರು, ಅದರಲ್ಲೂ ಮಹಿಳೆಯರು ಎಂದ ಮೇಲೆ ಕೇಳಬೇಕೇ? ಸಮಾನತೆ ಎಂಬುದು ಅವರಿಗೆ ಮರೀಚಿಕೆಯೇ ಸೈ ಎಂಬಂಥ ಪರಿಸ್ಥಿತಿ ಸಮಾಜದಲ್ಲಿದೆ. ಆಧುನಿಕ ಯುಗದಲ್ಲೂ ತಾಂಡವವಾಡುತ್ತಿರುವ ಇಂತಹ ಸ್ಥಿತಿಯಲ್ಲಿ, ದಲಿತ ಮಹಿಳೆಯರಿಬ್ಬರನ್ನು ಗರ್ಭಗುಡಿಗೆ ಕರೆತಂದು ಅವರಿಂದಲೇ ಪೂಜೆ ಮಾಡಿಸಿರುವ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯ ನಿಜಕ್ಕೂ ಇತಿಹಾಸ ಬರೆದಿದೆ.
ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ನಡೆದಿರುವ ಈ ಕಾರ್ಯ, ಧಾರ್ಮಿಕ ಕೇಂದ್ರಗಳಲ್ಲಿ ಪಂಕ್ತಿಭೇದದಿಂದ ಹಿಡಿದು ಅರ್ಚನೆಯವರೆಗೂ ಢಾಳಾಗಿ ಕಾಣುವ ಜಾತೀಯತೆಗೆ ಸವಾಲೆಸೆಯುವಂತಿದೆ. ಇದೊಂದು ಸಾಂಕೇತಿಕ ಕಾರ್ಯಕ್ರಮವಾದರೂ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೇ ಸರಿ. ಇದೇ ಸಂದರ್ಭದಲ್ಲಿ, ಅತ್ತ ಬಿಹಾರದ ದೇವಸ್ಥಾನವೊಂದು ದಲಿತ ವರ್ಗಕ್ಕೆ ಸೇರಿದ ಮುಖ್ಯಮಂತ್ರಿ ಭೇಟಿ ನೀಡಿದ್ದಕ್ಕೆ ಶುದ್ಧೀಕರಣ ಕಾರ್ಯ ನಡೆಸಿರುವುದು ಬೆಳಕಿಗೆ ಬಂದಿದೆ.
ದಲಿತ ಸಚಿವರು, ಖ್ಯಾತ ಸಂಗೀತಗಾರರು ಜಾತಿ ಕಾರಣಕ್ಕೆ ಇಂತಹ ಅವಮಾನಕ್ಕೆ ಒಳಗಾಗುವುದು ಆಗಿಂದಾಗ್ಗೆ ವರದಿಯಾಗುತ್ತಲೇ ಇದೆ. ಖ್ಯಾತನಾಮರು, ಅಧಿಕಾರಸ್ಥರಿಗೇ ಇಂತಹ ಸ್ಥಿತಿಯಾದರೆ ಇನ್ನು ಸಾಮಾನ್ಯ ಜನರ ಪಾಡನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಜಾತೀಯತೆಯು ಕೀಳರಿಮೆ ಹುಟ್ಟಿಸಿ ಮಾನಸಿಕವಾಗಿ ಕೊಲ್ಲುವ ಅನಿಷ್ಟ ಪದ್ಧತಿ. ಅನಕ್ಷರಸ್ಥರಷ್ಟೇ ತೀವ್ರವಾಗಿ ಸುಶಿಕ್ಷಿತರೂ ಇದನ್ನು ಪಾಲಿಸುತ್ತಿದ್ದಾರೆ. ದಿನದಿನಕ್ಕೆ ಕಡಿಮೆಯಾಗುವ ಬದಲು ತನ್ನ ಬೇರನ್ನು ಗಟ್ಟಿಗೊಳಿಸಿಕೊಳ್ಳುತ್ತಲೇ ಹೋಗುತ್ತಿರುವ ಈ ಅಂಟುಜಾಡ್ಯಕ್ಕೆ ಧಾರ್ಮಿಕ ಕೇಂದ್ರಗಳು ವೇದಿಕೆಯಾಗುತ್ತಿರುವುದು ಜಗಜ್ಜಾಹೀರು.
ಬದುಕಿನ ಜಂಜಾಟದಿಂದ ತಾತ್ಕಾಲಿಕ ನೆಮ್ಮದಿಗಾಗಿ ಜನ ಅರಸಿ ಹೋಗುವುದು ಶ್ರದ್ಧಾ ಕೇಂದ್ರಗಳನ್ನು. ಅವು ಧಾರ್ಮಿಕ ಅಂಧಶ್ರದ್ಧೆಯನ್ನು ತೊಡೆಯುವುದಿರಲಿ ಸ್ವತಃ ಅಸ್ಪೃಶ್ಯತೆ, ಕಂದಾಚಾರದ ಗೂಡುಗಳಾಗಿ ಯಾವುದೇ ಧರ್ಮ ಅಥವಾ ಸಂವಿಧಾನದ ಮೂಲ ಆಶಯಕ್ಕೇ ಕೊಡಲಿಪೆಟ್ಟು ನೀಡುವಂತಾದರೆ, ಅದನ್ನು ‘ಧಾರ್ಮಿಕ ದಿವಾಳಿತನ’ ಎನ್ನದೇ ವಿಧಿಯಿಲ್ಲ. ದುರದೃಷ್ಟವಶಾತ್ ಇಂಥದ್ದೇ ಪರಿಸ್ಥಿತಿ ಇರುವ ರಾಜ್ಯದ ಬಹುತೇಕ ಧಾರ್ಮಿಕ ಕೇಂದ್ರಗಳ ನಡುವೆ ಗೋಕರ್ಣನಾಥೇಶ್ವರ ಕ್ಷೇತ್ರ ಭಿನ್ನವಾಗಿ ನಿಲ್ಲುತ್ತದೆ. ಪತಿಯನ್ನು ಕಳೆದುಕೊಂಡ ಮಹಿಳೆಯರಿಗೆ ಮಂಗಳದ್ರವ್ಯ ವಿತರಿಸಿ
ದ್ದಲ್ಲದೆ, ಚಂಡಿಕಾ ಹೋಮ ಮಾಡುವ, ಬೆಳ್ಳಿರಥ ಎಳೆಯುವ ಅವಕಾಶ
ಒದಗಿಸಿದ್ದು, ಕಳೆದ ನವರಾತ್ರಿಯಲ್ಲಿ ದಲಿತ ಮಹಿಳೆಯೊಬ್ಬರ ಪಾದಪೂಜೆ ಮಾಡುವಂತಹ ಪುರೋಗಾಮಿ ಬೆಳವಣಿಗೆಗಳೂ ಇಲ್ಲಿ ನಡೆದಿವೆ.
‘ಈ ಮಹಿಳೆಯರಿಗೆ ಮಂತ್ರ ಉಚ್ಚಾರಣೆಯ ತರಬೇತಿಯೇ ಆಗಿಲ್ಲ’ ಎಂಬಂತಹ ಕೊಂಕು ಮಾತುಗಳಿಗೆ ‘ದೇವರ ಪೂಜೆಗೆ ಭಕ್ತಿಗಿಂತ ಮಿಗಿಲಾದ ಮಂತ್ರ ಬೇಕಿಲ್ಲ’ ಎಂಬ ಈ ದೇವಸ್ಥಾನದ ಸ್ಥಾಪಕರಾದ ಸಮಾಜ ಸುಧಾರಕ ನಾರಾಯಣ ಗುರುಗಳ ಉಕ್ತಿಯ ಮೂಲಕವೇ ತಿರುಗೇಟು ಕೊಟ್ಟಿರುವುದು ಸರಿಯಾಗಿಯೇ ಇದೆ. ದೇವಸ್ಥಾನದ ಇಂತಹ ಕ್ರಾಂತಿಕಾರಿ ಹೆಜ್ಜೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ವ್ಯಕ್ತಿಯನ್ನು ತ್ವರಿತವಾಗಿ ಹುಡುಕಿ ಬಂಧಿಸಿರುವ ಪೊಲೀಸರ ಕ್ರಮವೂ ಶ್ಲಾಘನೀಯ. ತೀವ್ರವಾಗುತ್ತಿರುವ ಜಾತೀಯತೆಯನ್ನು ಎದುರಿಸಲು ಇಂತಹ ದಿಟ್ಟ ಕಾರ್ಯಗಳು ಅಸ್ತ್ರವಾಗಬಲ್ಲವೇ ಹೊರತು ವೇದಿಕೆಗಳಿಗಷ್ಟೇ ಸೀಮಿತವಾಗುವ ಬರೀ ಒಣ ಭಾಷಣಗಳಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.