ನವದೆಹಲಿ: ಕಾಂಗ್ರೆಸ್ನ ಭಿನ್ನಮತೀಯ ಮುಖಂಡ ಕಲಿಖೊ ಪುಲ್ ಅವರು ಅರುಣಾಚಲ ಪ್ರದೇಶದ ಹೊಸ ಮುಖ್ಯಮಂತ್ರಿಯಾಗಿ ಶುಕ್ರವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ರಾಜ್ಯದಲ್ಲಿ ಕೇವಲ 3 ಸಾವಿರ ಜನಸಂಖ್ಯೆ ಇರುವ ಕಮನ್ ಮಿಶ್ಮಿ ಬುಡಕಟ್ಟು ಸಮುದಾಯಕ್ಕೆ ಸೇರಿದವರು.
ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವುದಕ್ಕೆ ಕಾಂಗ್ರೆಸ್ಗೆ ಸುಪ್ರೀಂ ಕೋರ್ಟ್ ಅವಕಾಶ ನಿರಾಕರಿಸಿದ ಬೆನ್ನಲ್ಲೇ ಅರುಣಾಚಲ ಪ್ರದೇಶದ ರಾಷ್ಟ್ರಪತಿ ಆಳ್ವಿಕೆಯನ್ನು ಶುಕ್ರವಾರ ಸಂಜೆ ವಾಪಸ್ ಪಡೆಯಲಾಗಿತ್ತು.
ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ನಿಂದ ಆದೇಶ ಪಡೆದುಕೊಳ್ಳಲು ಮಾಜಿ ಮುಖ್ಯಮಂತ್ರಿ ನಬಂ ಟುಕಿ ಕೊನೆಯ ಕ್ಷಣದ ವರೆಗೆ ಶ್ರಮಿಸಿದರು. ಆದರೆ ಸುಪ್ರೀಂ ಕೋರ್ಟ್ ಅವರ ಪರವಾಗಿ ತೀರ್ಪು ನೀಡಲಿಲ್ಲ. ಬಹುಮತ ಸಾಬೀತಿಗೆ ಅವಕಾಶ ನಿರಾಕರಿಸಿದ ತಕ್ಷಣವೇ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದು ಮಾಡಲಾಗಿದೆ.
ಪುಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ನ ಬಂಡಾಯ ಶಾಸಕರೂ ಸೇರಿ 31 ಶಾಸಕರು ಮಂಗಳವಾರ ರಾಜ್ಯಪಾಲ ಜೆ.ಪಿ. ರಾಜ್ಖೋವಾ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ರಾಷ್ಟ್ರಪತಿ ಆಳ್ವಿಕೆ ರದ್ದು ಮಾಡುವಂತೆ ಬುಧವಾರ ಕೇಂದ್ರ ಸಂಪುಟ ಶಿಫಾರಸು ಮಾಡಿತ್ತು.
ಪುಲ್ ಅವರ ನೇತೃತ್ವದಲ್ಲಿ ನಡೆದ ಬಂಡಾಯದ ಕಾರಣಕ್ಕೆ ಅರುಣಾಚಲದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ಜನವರಿ 26ರಂದು ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.