ನವದೆಹಲಿ(ಐಎಎನ್ಎಸ್): ದೇಶದಲ್ಲಿ ‘ಆಟಿಸಂ’ ಕಾಯಿಲೆಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ರೋಗಕ್ಕೆ ಚಿಕಿತ್ಸೆ ನೀಡಲು ಪರಿಣತ ವೈದ್ಯರ ಕೊರತೆ ಇದೆ. ಜತೆಗೆ ಈ ಕಾಯಿಲೆಯನ್ನು ಹಲವರು ‘ಬುದ್ದಿಮಾಂದ್ಯ’ ಎಂದು ತಪ್ಪಾಗಿ ಪರಿಗಣಿಸುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ 40 ಲಕ್ಷಕ್ಕಿಂತಲೂ ಅಧಿಕ ‘ಆಟಿಸಂ’ ರೋಗಿಗಳಿದ್ದಾರೆ. ಹಾಗಿದ್ದೂ ಈ ಕಾಯಿಲೆಯ ಬಗೆಗಿನ ಅರಿವು ಮಾತ್ರ ತುಂಬ ಕಡಿಮೆ ಇದೆ’ ಎಂದು ಅವರು ಹೇಳಿದ್ದಾರೆ.
‘ಆಟಿಸಂ ಕಾಯಿಲೆಗೆ ಸರಿಯಾದ ಚಿಕಿತ್ಸೆಯನ್ನು ನೀಡುವ ವೈದ್ಯರು ಕೇವಲ ಬೆರಳೆಣಿಕೆಯಷ್ಟಿದ್ದಾರೆ. ಈಗ ಆಟಿಸಂ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ತಜ್ಞ ವೈದ್ಯರ ಅವಶ್ಯಕತೆ ಇದೆ’ ಎಂದು ಅಂಗವಿಕಲರ ಕೇಂದ್ರ ‘ಉಡಾನ್’ನ ನಿರ್ದೇಶಕ ಅರುಣ ಮುಖರ್ಜಿ ಹೇಳುತ್ತಾರೆ.
2001ರಲ್ಲಿ ಕೇಂದ್ರ ಸರ್ಕಾರ ಆಟಿಸಂ ಕಾಯಿಲೆಯನ್ನು ಗುರ್ತಿಸಿದೆ.
‘ಬಹುತೇಕರು ಆಟಿಸಂ ಅನ್ನು ಮಾನಸಿಕ ಕಾಯಿಲೆ ಎಂದೇ ಪರಿಗಣಿಸುತ್ತಾರೆ. ಈ ದೃಷ್ಟಿಕೋನ ಬದಲಾಗಬೇಕಿದೆ. ಈ ಅಜ್ಞಾನದಿಂದ ಪಾಲಕರು ಈ ಕಾಯಿಲೆಯ ಚಿಕಿತ್ಸೆಗೆ ಬೇಕಾಗಿರುವಷ್ಟು ಮಹತ್ವವನ್ನು ನೀಡುವುದೇ ಇಲ್ಲ’ ಎಂದು ‘ತಮನ’ ಆಟಿಸಂ ಕೇಂದ್ರ ಮತ್ತು ಸ್ಕೂಲ್ ಆಫ್ ಹೋಪ್ನ ಪ್ರಾಂಶುಪಾಲರಾದ ಉಷಾ ವರ್ಮಾ ಅಭಿಪ್ರಾಯಪಡುತ್ತಾರೆ.
‘ಆಟಿಸಂಗೆ ಬಹುಶಿಸ್ತೀಯ ವಿಧಾನದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ಕಾಯಿಲೆಗಳಲ್ಲಿ ಹಲವು ಹಂತಗಳಿವೆ. ಆದ್ದರಿಂದ ರೋಗ ಯಾವ ಹಂತದಲ್ಲಿದೆ ಎಂಬುದನ್ನು ಆಧರಿಸಿ ಅದಕ್ಕೆ ಚಿಕಿತ್ಸೆಯನ್ನು ನೀಡಲಾಗುತ್ತದೆ’ ಎಂದು ಫೊರ್ಟಿಸ್ ಆಸ್ಪತ್ರೆಯ ಮಾನಸಿಕ ಆರೋಗ್ಯ ಮತ್ತು ವರ್ತನಾ ವಿಜ್ಞಾನ ವಿಭಾಗದ ನಿರ್ದೇಶಕ ಸಮೀರ್ ಪಾರಿಖ್ ವಿವರಿಸುತ್ತಾರೆ.
‘ಆಟಿಸಂಗೆ ತುತ್ತಾದವರು ಇತರ ಜನರೊಡನೆ ಸಂವಹಿಸುವುದು ಮತ್ತು ಸಂವಾದಿಸುವುದು ಕಷ್ಟವಾಗುತ್ತದೆ. ಆಟಿಸಂಗೆ ತುತ್ತಾದವರು ಇತರ ಜನರೊಡನೆ ಸಂವಹಿಸುವುದು ಮತ್ತು ಸಂವಾದಿಸುವುದು ಕಷ್ಟವಾಗುತ್ತದೆ’ ಎಂದು ಪಾರಿಖ್ ಹೇಳುತ್ತಾರೆ.
ಏನಿದು ಆಟಿಸಂ..?
ಆಟಿಸಂ ಮಿದುಳಿನ ಕಾರ್ಯದ ಮೇಲೆ ಪರಿಣಾಮ ಬೀರುವ ಕಾಯಿಲೆ. ಇದರಿಂದ ದೇಹದ ವಿವಿಧ ಜ್ಞಾನಗ್ರಂಥಿಗಳು ನೀಡುವ ಮಾಹಿತಿಯನ್ನು ಸಂಸ್ಕರಿಸುವ ಮಿದುಳಿನ ಕ್ರಿಯೆಗೆ ಅಡ್ಡಿಯುಂಟಾಗುತ್ತದೆ. ಗಿರಕಿ ಹೊಡೆಯುವುದು, ಕೈಗಳನ್ನು ಜೋರಾಗಿ ತಿರುಗಿಸುವುದು, ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವುದು, ನಿರಂತರವಾಗಿ ಜಿಗಿಯುವುದು, ಅತಿಯಾದ ಕ್ರಿಯಾಶೀಲತೆ ಮತ್ತು ಚಂಚಲತೆ ಈ ರೋಗದ ಲಕ್ಷಣಗಳು. ಇದು ಅವರ ಮಾತು, ಭಾಷೆ, ಸಾಮಾಜಿಕ ಸಂವಹನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.