ದಾವಣಗೆರೆ: ಅದು ರಾಜ್ಯ ಕಾರ್ಮಿಕರ ವಿಮಾ ಚಿಕಿತ್ಸಾಲಯ. ಆದರೆ, ಅಲ್ಲಿ ಇರುವುದು ಹಸು, ಎಮ್ಮೆ, ಹಂದಿಗಳು. ಎಲ್ಲಿ ನೋಡಿದರೂ ಕಸದ ರಾಶಿ, ಬಟ್ಟೆ, ಕಾಗದ ಸುಟ್ಟಿರುವ ದೃಶ್ಯ. ಮೂಗು ಮುಚ್ಚಿಕೊಂಡೇ ಒಳ ಹೋಗಬೇಕಾದಂತಹ ಪರಿಸ್ಥಿತಿ. ಸರ್ ಮಿರ್ಜಾ ಇಸ್ಮಾಯಿಲ್ ನಗರದ ನರಸರಾಜಪೇಟೆಯಲ್ಲಿರುವ ಇಎಸ್ಐ ಆಸ್ಪತ್ರೆಗೆ ಬುಧವಾರ ಜಿಲ್ಲಾಧಿಕಾರಿ ಎಸ್.ಟಿ.ಅಂಜನಕುಮಾರ್ ದಿಢೀರ್ ಭೇಟಿ ನೀಡಿದಾಗ ಕಂಡ ದುರವಸ್ಥೆಯ ಚಿತ್ರಣವಿದು.
ಎರಡು ದಶಕಗಳ ಹಿಂದೆ ಕಾರ್ಮಿಕರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದ ಈ ಕಟ್ಟಡವನ್ನು ಸ್ಥಳೀಯರು ಕೊಟ್ಟಿಗೆಯಾಗಿ ಮಾರ್ಪಡಿಸಿಕೊಂಡಿದ್ದನ್ನು ಕಂಡು ಅವರು ಹೌಹಾರಿದರು.
ಕಾರ್ಮಿಕ ಇಲಾಖೆ ಉಪ ಆಯುಕ್ತ ಗುರುಪ್ರಸಾದ್ ಹಾಗೂ ತಾಂತ್ರಿಕ ವಿಭಾಗದ ಸಹಾಯಕ ಅಧಿಕಾರಿ ಹಿರೇಗೌಡ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಂತೆಯೇ, ಪಾಲಿಕೆ ಆರೋಗ್ಯ ಅಧಿಕಾರಿ ಶರೀಫ್ ಅವರಿಗೆ ಆಸ್ಪತ್ರೆಯಲ್ಲಿರುವ ಕಸ ತೆಗೆಸಬೇಕು. ಮುಂದೆ ಇದೇ ರೀತಿ ಕಂಡುಬಂದರೆ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಟ್ಟಡವನ್ನು ಬಳಸಿಕೊಳ್ಳಲು ಚಿಟಗೇರಿ ಜಿಲ್ಲಾ ಆಸ್ಪತ್ರೆಯವರು ಅನುಮತಿ ಕೇಳಿದ್ದಾರೆ. ಕಟ್ಟಡ ಬಳಕೆಗೆ ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಈ ಬಗ್ಗೆ ಸಭೆ ಕರೆಯಲಾಗಿದೆ’ ಎಂದರು.
ಶಾಲೆ ಅಂಗಳದಲ್ಲಿ ಮಂಡಕ್ಕಿ!: ನಂತರ ಆಸ್ಪತ್ರೆ ಎದುರಿನಲ್ಲಿರುವ ಸರ್ಕಾರಿ ಉರ್ದು ಶಾಲೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಶಾಲೆಯ ಅಂಗಳದಲ್ಲೇ ಮಂಡಕ್ಕಿ ಫ್ಯಾಕ್ಟರಿ ಮಾಲೀಕರೊಬ್ಬರು ಅಕ್ಕಿ ಒಣಗಲು ಹಾಕಿದ್ದು ಕಂಡುಬಂತು. ತಕ್ಷಣ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದರು.