ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಮೌನ ಮುರಿದಿದ್ದರ ಮರ್ಮ...?!

Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಯಾವುದೇ ವ್ಯಕ್ತಿಯ ಕುರಿತಾದ ಭಿನ್ನಾ­ಭಿಪ್ರಾಯಗಳು, ವಿರೋ­ಧ­ಗಳು ನಮಗೆ ಇದ್ದಲ್ಲಿ ಅವುಗಳನ್ನು ಆ ವ್ಯಕ್ತಿ ಜೀವಂತವಿದ್ದಾಗಲೇ ವ್ಯಕ್ತಪಡಿಸಬೇಕು ಎಂದು ನಂಬುವವನು ನಾನು. ನಾನೊಬ್ಬನೇ ಅಲ್ಲ, ಯಾವ ನಾಗರಿಕ, ಸುಸಂಸ್ಕೃತ ವ್ಯಕ್ತಿಯೂ ನಂಬು­ವುದು ಅದನ್ನೇ. ವ್ಯಕ್ತಿ ತೀರಿಕೊಂಡ ಮೇಲೆ ದಿಢೀರ್‌ ಕಂಡುಕೊಳ್ಳುವ ನಮ್ಮ ಬಿಚ್ಚುನುಡಿ­ಗಳಿಗೆ ಬಿಡಿಗಾಸಿನ ಬೆಲೆ ಇರುವುದಿಲ್ಲ. ಹಲವು ದಶಕಗಳ ಒಳಗಿನ ಹುಳಿಯನ್ನು ಸಾರ್ವಜನಿಕ­ವಾಗಿ ಕಕ್ಕಿಕೊಂಡಷ್ಟೇ ಬೆಲೆ ಅದಕ್ಕೆ. ಸಾಹಿತ್ಯಿಕವಾಗಿ ನಾವು ಮಾಡುವ ವಿಮರ್ಶೆ ಬೇರೆ ಮಾತು. ಆದರೆ ವೈಯಕ್ತಿಕ ಟೀಕೆಗಳು–ಅವು ಸಾಹಿತ್ಯಿಕ ಎಂಬ ಸೋಗಿನಲ್ಲಿ ಪ್ರಕಟವಾದರೂ ಆಡುವವರಿಗೆ ಶೋಭೆ ತರುವಂಥವಲ್ಲ.

ಗಿರೀಶ ಕಾರ್ನಾಡರು ಅನಂತಮೂರ್ತಿ ಅವ­ರನ್ನು ಹಲವು ದಶಕಗಳಿಂದ ಬಲ್ಲವರು. ‘ನಾನು ಅವರ ಬೆನ್ನೆಲುಬಾಗಿದ್ದೆ’ ಎಂದು ಅವರೇ ಹೇಳಿ­ಕೊಂಡಿದ್ದಾರೆ. ಹಾಗಿದ್ದಾಗ ನಿಜವಾದ ಸ್ನೇಹವಿ­ರು­ವುದು, ಗೌರವವಿರುವುದು– ಪರಸ್ಪರರಲ್ಲಿ ಕಂಡ ನ್ಯೂನತೆಗಳು, ವಿರೋಧಾಭಾಸಗಳು, ದೋಷ­ಗಳು ಇವುಗಳ ಕುರಿತಾಗಿ ಮಾತನಾಡಿ ಒಂದು ಬಗೆಯ ಉನ್ನತ ರೀತಿಯ ಸಂವಾದವನ್ನು ಉಳಿಸಿ­ಕೊಂಡು ಹೋಗುವುದರಲ್ಲಿ ಇಂಥ ಚರ್ಚೆಗಳು, ಇಂಥ ಮುಖಾಮುಖಿಗಳು ಇಬ್ಬ­ರನ್ನೂ ಬೆಳೆಸು­ತ್ತವೆ. ಒಟ್ಟು ಸಮಾಜವನ್ನು ಕೂಡ ಅರಳಿಸುತ್ತದೆ.

ಅದರ ಬದಲು ಇಷ್ಟು ದಶಕಗಳು ಮೌನವಾ­ಗಿದ್ದು, ಜಾಣತನದ ದೂರವನ್ನು ಕಾಪಾಡಿ­ಕೊಂಡು ಬಂದು ಈಗ ಇದ್ದಕ್ಕಿದ್ದಂತೆ ಸ್ಫೋಟಿಸುವ ಟೀಕಾಸ್ತ್ರಗಳು, ಪ್ರಯೋಗಿಸಿದ ನಮ್ಮಗಳ ವ್ಯಕ್ತಿತ್ವ ಪ್ರದರ್ಶಿಸುತ್ತವೆಯೇ ಹೊರತು ತೀರಿಕೊಂಡ ವ್ಯಕ್ತಿಗೆ ಕಿಂಚಿತ್ತೂ ಮುಟ್ಟದೇ ನಿಷ್ಪ್ರಯೋಜಕ­ವಾಗುತ್ತವೆ. ಈ ಆರೋಪದ ಪ್ರಕರಣ ಕೂಡ  ಅಂಥದ್ದು. ಅನಂತಮೂರ್ತಿ­ಯವರ ಕುರಿತಾಗಿ ಗಿರೀಶರು ಆಡಿರುವ ಮಾತು­ಗಳು ಆರೋಗ್ಯಕರ, ಸೃಜನಶೀಲ ವಿಮರ್ಶೆಯಲ್ಲ.

ಇಂತಹ ಎರಡನೆ ದರ್ಜೆ ಮಾತುಗಳನ್ನು ಗಿರೀಶರಂಥ­ವರಿಂದ ನಾವು ನಿರೀಕ್ಷಿಸಿರಲಿಲ್ಲ.
* ಅವರ ‘ಸಂಸ್ಕಾರ’ ಕಾದಂಬರಿಯ ನಂತ­ರದ ಕಾದಂಬರಿಗಳು ‘ಎರಡನೆ ದರ್ಜೆಯ’ವು, ಅವರ ‘ಹಿಂದುತ್ವದ’ ವಿವರಣೆ, ‘ಬಾಲಿಶ’ ಎಂಬೆಲ್ಲ ಮಾತುಗಳು ಅಂದೇ ಯಾಕೆ ಹೇಳಲಿಲ್ಲ? ಅಥವಾ ಮುಂದೆ ಮೂರ್ತಿಯವರು ಬದುಕಿ­ದ್ದಷ್ಟೂ ಕಾಲವಾದರೂ ಏಕೆ ಮೌನವಹಿಸಿದ್ದರು?
* ‘ರಾಜ್ಯಸಭೆ ಸ್ಥಾನಕ್ಕೆ ಹುಚ್ಚನಂತೆ ‘ಹಟಕ್ಕೆ ಬಿದ್ದಿದ್ದರು’ ಎಂಬ ಮಾತಿನ ಹಿಂದೆ ಅಸಹನೆಯಷ್ಟೆ ಅಲ್ಲ, ತೀವ್ರ ಕ್ರೋಧವೂ ಸ್ಪಷ್ಟವಾಗಿ ರಾಚುತ್ತದೆ.
* ‘ಚಿಂತಕ’ ಎಂಬ ಸೋಗು ಅರ್ಥವಿಲ್ಲದ್ದು . ಅವರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವ್ಯಕ್ತಿ’ ಎಂದು ಗಿರೀಶರು  ತೀರ್ಪು ನೀಡಿದ್ದಾರೆ. ಸೂಕ್ಷ್ಮಜ್ಞ ಮತ್ತು ಚಿಂತಕ ಇವು ನನ್ನ ಪ್ರಕಾರ  ಸಮಾನಾರ್ಥಕ ಶಬ್ದಗಳಾಗಿದ್ದು ಇವುಗಳ  ಮಧ್ಯೆ ಗಿರೀಶರು ಕಂಡಿರುವ ವ್ಯತ್ಯಾಸಗಳೇನು ಎಂದು ಅವರೇ ವಿವರಿಸಬೇಕು.
* ಎಚ್‌. ಡಿ. ಕುಮಾರಸ್ವಾಮಿಯವರಿಗೆ ತಂಪು ಪಾನೀಯ ನೀಡಿ ಉಪವಾಸ ನಿಲ್ಲಿಸುವಂತೆ ಮನವಿ ಮಾಡಿದ್ದರ ಕುರಿತೂ ಗಿರೀಶರ ವ್ಯಂಗ್ಯ­ವಿದೆ. ‘ಅನಂತಮೂರ್ತಿ ಯಾರ್ರೀ?’ ಎಂದು ಅಬ್ಬ­ರಿ­ಸಿದ ಎಚ್‌.ಡಿ.ಕೆ.ಗೂ, ತಂಪು ಪಾನೀಯ ನೀಡಿ ‘ಉಪವಾಸ ನಿಲ್ಲಿಸಿ’ ಎಂದು ಕೇಳಿದ ಅನಂತ­ಮೂರ್ತಿ ಅವರಿಗೂ ಅವರವರ ವರ್ತನೆಗ­ಳಿಂದಲೇ ಅವರ ವ್ಯಕ್ತಿತ್ವಗಳು ಪ್ರಕಟವಾಗುವು­ದಿಲ್ಲವೆ? ‘ಅನಂತಮೂರ್ತಿ ಅವರ ಒಂದೇ ಮುಖ­ವನ್ನು ತೋರಿಸುವುದು ಸರಿಯಲ್ಲ’ ಎಂದು ಹೇಳು­ತ್ತಲೇ ಗಿರೀಶರು ಅವರ ಹಲವು ಮುಖಗಳನ್ನು ಪ್ರದರ್ಶಿಸಿದ್ದಾರೆ.

ಅನಂತಮೂರ್ತಿ ಅವರು ಪರಿಪೂರ್ಣ ವ್ಯಕ್ತಿ ಎಂದಾಗಲೀ ಲೋಪಾತೀತ ಚಿಂತಕರೆಂದಾಲೀ ಯಾವ ಅವರ ಕಟ್ಟಾ ಅಭಿಮಾನಿಯೂ ಹೇಳು­ತ್ತಿಲ್ಲ. ಅಂಥ ಪರಿಪೂರ್ಣತ್ವದ ಕನಸು ಕಾಣುತ್ತಿದ್ದ ಹಲವು ಚಿಂತಕರಲ್ಲಿ ಅವರೂ ಒಬ್ಬರು. ಅದಕ್ಕೇ ಅವರು ನಮಗೆ ಇಷ್ಟವಾಗುವುದು. ಅವರ ಎಲ್ಲ ವಿರೋಧಾಭಾಸಗಳ ಮಧ್ಯೆಯೂ ಅವರೊಬ್ಬ ಸ್ವಚ್ಛಂದ ಮನಸ್ಸಿನ ವ್ಯಕ್ತಿಯಾಗಿದ್ದರು. ಸ್ವಯಂ­ನಿರ್ಮಿತ ಬಂಗಾರದ ಪಂಜರದಲ್ಲಿ ಬಂಧಿತರಾಗಿ ಕೂತು, ಇದ್ದಕ್ಕಿದ್ದಂತೆ ಪಂಜರ ಭೇದಿಸಿ ಹೊರ­ಬಂದು ಹಾಡಲಿಕ್ಕಾಗಲೀ ಹಾರು­ವು­ದ­ಕ್ಕಾಗಲೀ ಆಗದೆ ಚಡಪಡಿಸುವ ಹಕ್ಕಿಯಂತೆ ಕಂಡುಬರುವ ಅಪಾಯಗಳ ಬಗ್ಗೆ ತಿಳಿವಿರಬೇಕು.

ಧಾರವಾಡದ ಮನೋಹರ ಗ್ರಂಥಮಾಲೆಯ ಅಟ್ಟಕ್ಕೆ ಹಿರಿಯರು ಇವರನ್ನು ಏರಿಸಿದ ಮೇಲೆ ಆ ‘ಅಟ್ಟ’ದಿಂದ ಕೆಳಗೇ ಇಳಿಯಲಾರದೆ ‘ಪಂಚ­ತಾರಾ ಸೆಮಿನಾರಿಸ್ಟ್’ ರೀತಿ ಬದುಕುತ್ತಿದ್ದು, ಜನಸಾಮಾನ್ಯರಿಂದ ದೂರವೇ ಉಳಿದು­ಬಿಟ್ಟಿದ್ದು, ಈಗ ಎಲ್ಲಿಲ್ಲದ ಹುರುಪಿನಲ್ಲಿ ಮತ್ತೊಂದು ಪಂಚತಾರಾ ಸೆಮಿನಾರಿನಲ್ಲಿ ‘ಬಹು ನಿರ್ಭಿಡೆಯ ಮಾತುಗಳನ್ನಾಡುತ್ತಿದ್ದೇನೆ’ ಎಂದು ಗಿರೀಶರು ಭ್ರಮಿಸುವುದನ್ನು ಕನಿಕರಿಸ­ಬೇಕಷ್ಟೆ. ಅವರ ‘ತುಘಲಕ್‌’ ಮತ್ತು ‘ತಲೆದಂಡ’ ಇವು ನಿಜಕ್ಕೂ ಉತ್ತಮ ನಾಟಕಗಳು. ಅವರ ಸಾಮಾ­ಜಿಕ ನಾಟಕಗಳು ಅತ್ಯಂತ ಸಾಮಾನ್ಯ ದರ್ಜೆಯ ನಾಟಕಗಳು. ಅಂದ ಮಾತ್ರಕ್ಕೆ ಅವರ ನಾಟಕ ರಚನಾ ಕೌಶಲವನ್ನು ನಾನು ಪ್ರಶ್ನಿಸುತ್ತಿಲ್ಲ. ಆದರೆ ಅವರ ಸಾಧನೆ, ಮಿತಿಗಳನ್ನು ಗುರುತಿಸಿ ಅವರು ಜೀವಂತ­ವಿರುವಾಗಲೇ ಹೇಳುತ್ತಿದ್ದೇನೆ. ಅವರ ಆತ್ಮ (ವಿಹೀನ) ಚರಿತ್ರೆ ಎಂಬ ಹೆಸರಿ­ನಲ್ಲಿ ಪ್ರಕಟವಾ­ಗಿರುವ ‘ಆಡಾಡ್ತಾ ಆಯುಷ್ಯ’ ಪುಸ್ತಕವೊಂದು ‘ಹಲವು ಜನರ ನಿಂದನಾತ್ಮಕ, ನಕಾರಾತ್ಮಕ ಜೀವನ ಚರಿತ್ರೆ’ಯ ತುಣುಕುಗಳ ಸಂಗ್ರಹ ಎಂದು ನನಗೆ ತೀವ್ರವಾಗಿ ಅನ್ನಿಸುತ್ತದೆ.

ಅದೇ ಸಭೆಯಲ್ಲಿ ಕಲಾವಿದ ಎಸ್‌.ಜಿ. ವಾಸುದೇವ್‌ ತಮ್ಮ ದನಿಯನ್ನೂ ಸೇರಿಸಿದ್ದಾರೆ. ಎಲ್ಲ ಕ್ರಾಂತಿಕಾರಿ ಕ್ರಮಗಳನ್ನು ಸಾಧಿಸಿದ್ದೇನೆ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದ ಮೂರ್ತಿ­ಯ­ವರು ‘ಗಾಯತ್ರಿ ಮಂತ್ರ ಪಠಣ ಮಾಡುತ್ತಿ­ದ್ದರು’ ಎಂದು. ಯಾಕೆ ವಾಸುದೇವ್‌ ಅವರೆ, ಗಾಯತ್ರಿ ಮಂತ್ರ ಪಠಣ ಮಾಡುವವನೊಬ್ಬ ಜಾತ್ಯತೀತವಾದಿಯೂ, ಅತ್ಯಂತ ಮಾನವತಾ­ವಾದಿಯೂ ಆಗಿರಬಾರದೆ? ನಿಮ್ಮ ವಿವರಣೆಗೆ ಸಲ್ಲು­ವವರು ಮಾತ್ರ ಕ್ರಾಂತಿಕಾರಿಗಳೆ? ಆ ವಿವರಣೆ­ಯಾದರೂ ಏನು ಎಂದು ದಯವಿಟ್ಟು ತಿಳಿಸಬೇಕು.
–ಜಿ. ಕೆ. ಗೋವಿಂದರಾವ್‌,
               ಬೆಂಗಳೂರು

* * *

ಅಸೂಯೆಯೇ ಟೀಕೆಗೆ ಕಾರಣ

ಅನಂತಮೂರ್ತಿಯವರು ತೀರಿ ಕೊಳ್ಳುವು­ದನ್ನೇ ಕಾದಿದ್ದರೋ ಎಂಬಂತೆ ಮೈಮೇಲೆ ಬಂದ­ವರ ಹಾಗೆ ಗಿರೀಶ್ ಕಾರ್ನಾಡರು ಮಾಡುತ್ತಿ­ರುವ ಟೀಕಾ ಪ್ರಹಾರದಿಂದ, ಅನಂತಮೂರ್ತಿ­ಯವರ ಸಾಧನೆ, ಗಿರೀಶರ ಮತ್ತು ಅನಂತ­ಮೂರ್ತಿ­ಯವರ ಒಡನಾಟ ಇವನ್ನೆಲ್ಲ ಅರಿತವ­ರಿಗೆ ಕಸಿವಿಸಿಯ ಜತೆಗೆ ಅಲ್ಲ, ಕಾರ್ನಾ­ಡರ  ವಿಮ­ರ್ಶನ ಪ್ರಜ್ಞೆ ಮತ್ತು ಔಚಿತ್ಯ ಪ್ರಜ್ಞೆಗಳ ಬಗೆಗೂ ಸಂದೇಹ ಉಂಟಾಗುತ್ತಿದೆ.
ಅನಂತಮೂರ್ತಿಯವರ ಅನೇಕ ರಾಜ­ಕೀಯ, ಸಾಮಾಜಿಕ ನಿಲುವುಗಳನ್ನು ಒಪ್ಪದಿರು­ವವರು ಕೂಡ ಅವ­ರೊಬ್ಬ ಶ್ರೇಷ್ಠ ಕಥೆಗಾರರು ಹಾಗೂ ಕನ್ನಡ ವಿಮರ್ಶೆ ಮತ್ತು ವೈಚಾರಿಕ ಕ್ಷೇತ್ರದಲ್ಲಿ ಅವರದು  ಕಾವ್ಯ ಕ್ಷೇತ್ರದ ಅಡಿಗರಿಗೆ ಸರಿ­ಮಿಗಿ­ಲಾದ ಸಾಧನೆ ಎಂಬ ಬಗ್ಗೆ ಬಹುಶಃ ಎರಡ­ಭಿಪ್ರಾಯ ತಳೆಯ­ಲಾರರು.

ಅಂಥದ್ದರಲ್ಲಿ ‘ಸಂಸ್ಕಾರ’ ಕಾದಂಬರಿ ನಂತರದ ಮೂರ್ತಿಯವರ  ಸಾಹಿತ್ಯವೆಲ್ಲ ಎರಡನೇ ದರ್ಜೆಯ ಸಾಹಿತ್ಯವೆಂದು ಅದ್ಯಾವ ಧೈರ್ಯದ ಮೇಲೆ ಕಾರ್ನಾಡರು ಹೇಳುತ್ತಾರೋ ತಿಳಿಯದಾ­ಗಿದೆ. ಅನಂತಮೂರ್ತಿಯವರ ಸಾಹಿ­ತ್ಯ­­ವನ್ನು ಸುಮ್ಮನೆ ಬೀಸುಹೇಳಿಕೆ ಮೂಲಕ ಬೇಜವಾ­ಬ್ದಾ­ರಿಯಿಂದ ಟೀಕಿಸುವ ಬದಲು ಗಟ್ಟಿಯಾದ ವಿಮರ್ಶೆ ಮೂಲಕ ಕಾರ್ನಾ­ಡರು ಅಭಿಪ್ರಾಯ ವ್ಯಕ್ತಪಡಿಸಲಿ. ಬಹಳ ಹಿಂದೆಯೇ ಮಾಸ್ತಿಯವರ ’ಕಾಕನ ಕೋಟೆ’ ನಾಟಕದ ಬಗ್ಗೆ ಒಳ ನೋಟಗಳುಳ್ಳ ಸುಂದರ ವಿಮರ್ಶೆ ಬರೆದಿರುವ ಕಾರ್ನಾಡರಿಗೆ ಇದೇನೂ ಅಸಾಧ್ಯವಲ್ಲ.

ಶ್ರದ್ಧಾಂಜಲಿ ಸಭೆ ಎಂದು ಹೇಳಬಹುದಾದಲ್ಲಿ ಹೀಗೆ ಟೀಕೆಯ ಸುರಿಮಳೆ ಮಾಡುವುದು ಎಷ್ಟುಮಾತ್ರಕ್ಕೂ ಶೋಭಿಸುವುದಿಲ್ಲ ಎಂಬುದನ್ನು ಈ ಜ್ಞಾನಪೀಠಿ­ಗಳಿಗೆ ತಿಳಿಸಬೇಕಾಗಿ ಬಂದಿರು­ವುದು ಕನ್ನಡಿಗರ ದುರ್ದೈವವೇ ಸರಿ. ಡಾ. ಪಿ.ವಿ. ನಾರಾಯಣ ಹೇಳಿರುವಂತೆ ಎಂದೂ ಜನ­ಸಾಮಾನ್ಯ­ರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳದ ಕಾರ್ನಾಡರಿಗೆ ಜನಪರ ಹೋರಾಟಗಳಲ್ಲಿ ಸದಾ ಮುಂಚೂಣಿ­ಯಲ್ಲಿರುತ್ತಿದ್ದ ಅನಂತಮೂರ್ತಿಯ­ವರನ್ನು ಕಂಡರೆ ಅಸೂಯೆ ಇದ್ದ ಕಾರಣದಿಂದಲೇ ಹೀಗೆ ಇವರು ಅನಂತಮೂರ್ತಿಯವರ ಮೇಲೆ ಮುಗಿ ಬೀಳುತ್ತಿದ್ದಾರೆಂದು ಜನರಿಗೆ ಅನಿಸಿದರೆ ಅದರಲ್ಲಿ ಆಶ್ಚರ್ಯವೇ ಇಲ್ಲ.

ಇವರ ದೃಷ್ಟಿಯಲ್ಲಿ ಅನಂತ­ಮೂರ್ತಿ­ಯಂಥವರ ಪಾಡೇ ಹೀಗಾದ ಮೇಲೆ ಇನ್ನು ಇದು ಕನ್ನಡವೇ ಎಂದು ಮನಃಪೂರ್ವಕ­ವಾಗಿ ಹೇಳಲು ಕಷ್ಟವಾದ ಇವರ ನಾಟಕಗಳ ಭಾಷೆಯ ಬಗ್ಗೆ  ಹಾಗೂ ಒಟ್ಟಾರೆ ಇವರ ನಾಟಕಗಳ ಬಗ್ಗೆ ಕನ್ನಡಿಗರು ಯಾವ ನಿಲುವು ತಳೆಯ ಬೇಕು? ಗಿರೀಶರೇ ಹೇಳಬೇಕು.
–ಡಾ. ಆರ್. ಲಕ್ಷ್ಮೀನಾರಾಯಣ,
               ಪ್ರೊ. ಶಿವರಾಮಯ್ಯ,
                       ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT