ಉಡುಪಿ: ಕಾರವಾರ ಬಂದರು ಪ್ರದೇಶದಲ್ಲಿ ಮೀನುಗಾರಿಕೆ ನಡೆಸುವ ಮಲ್ಪೆ ಮೀನುಗಾರರ ಸಂಘದ ಸದಸ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸಂಘದ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು ಅವರ ನೇತೃತ್ವದಲ್ಲಿ ಸಂಘದ ಸದಸ್ಯರು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಸಂಘದ ಸದಸ್ಯರು ಅ.10ರಂದು ಮೀನು ಹಿಡಿದು 6 ಬೋಟ್ಗಳಿಗೆ ತುಂಬಿಸಿಕೊಂಡು ಹೋಗುತ್ತಿದ್ದ ವೇಳೆ ಗಣಪತಿ ರಾಮ ಮಾಂಗ್ರೆ, ರಾಜು ಎಲ್ ತಾಂಡೇಲ, ವಾಮನ ಹರಿಕಾಂತ, ಸುರೇಶ ತಾಂಡೇಲ, ದಿಲೀಪ್ ಚಂಡೇಕರ್, ಸುಧಾಕರ್ ದುರ್ಗೇಕರ್ ಅವರ ತಂಡ ಬೋಟ್ಗಳನ್ನು ಅಡ್ಡಗಟ್ಟಿದೆ. ಆ ನಂತರ ಎಲ್ಲ ಮೀನುಗಳನ್ನು ಬಲತ್ಕಾರವಾಗಿ ಮಾರಾಟ ಮಾಡಿ ಸುಮಾರು ₨12 ಲಕ್ಷ ರೂಪಾಯಿ ನಷ್ಟ ಉಂಟು ಮಾಡಿದೆ.
ಕಾರವಾರ ಬಂದರಿನ ಪೊಲೀಸ್ ಸಿಬ್ಬಂದಿ ನಮ್ಮ ಸಂಘದ ಸದಸ್ಯರನ್ನು ಠಾಣೆಗೆ ಕರೆಯಿಸಿಕೊಂಡು ಕೆಲವು ಕಾಗದ ಪತ್ರಗಳಿಗೆ ಬಲವಂತವಾಗಿ ಸಹಿ ಹಾಕಿಸಿಕೊಂಡಿದ್ದಾರೆ. ‘ಎಲ್ಲ 6 ಬೋಟ್ಗಳನ್ನು ಕೂಡಲೇ ತೆಗೆದುಕೊಂಡು ಹೋಗಿ, ಇಲ್ಲದಿದ್ದರೆ ಅಪಾಯವಿದೆ’ ಎಂದು ಪೊಲೀಸರು ಹೆದರಿಸಿ ಕಳುಹಿಸಿದ್ದಾರೆ. ಈ ಹಿಂದೆಯೂ ಎರಡು ಮೂರು ಸಾರಿ ಸಂಘದ ಸದಸ್ಯರ ಬೋಟ್ಗಳನ್ನು ಅಡ್ಡಗಟ್ಟಿ ಮೀನು ಮಾರಾಟ ಮಾಡಲಾಗಿತ್ತು ಎಂದು ಮನವಿಯಲ್ಲಿ ದೂರಿದ್ದಾರೆ.
ಗಣಪತಿ ರಾಮ ಮಾಂಗ್ರೆ ಮತ್ತು ಅವರ ತಂಡದಿಂದ ಮುಂದೆಯೂ ಸಂಘದ ಸದಸ್ಯರಿಗೆ ಅಪಾಯ ಎದುರಾಗುವ ಸೂಚನೆ ಇದೆ. ಆದ್ದರಿಂದ ಸೂಕ್ತ ರಕ್ಷಣೆ ನೀಡಬೇಕು. ದೌರ್ಜನ್ಯ ಎಸಗಿರುವ ಅವರ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿ ಬಂಧಿಸಬೇಕು. ಸಂಘದ ಸದಸ್ಯರು ಕಾರವಾರ ಪ್ರದೇಶದಲ್ಲಿ ಮೀನುಗಾರಿಕೆ ಮಾಡುವ ವೇಳೆ ತೊಂದರೆ ನೀಡುವುದಿಲ್ಲ ಎಂದು ಅವರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಬೇಕು. ಈಗಾಗಲೇ ಆಗಿರುವ ನಷ್ಟಕ್ಕೆ ಅವರಿಂದಲೇ ಪರಿಹಾರ ದೊರಕಿಸಿಕೊಡಬೇಕು. ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುವಂತೆ ಕಾರವಾರ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮಲ್ಪೆ ಮೀನುಗಾರರ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.