ಮುಂಬೈ (ಪಿಟಿಐ): ಸಾಲ ಬಾಕಿ ಉಳಿಸಿಕೊಳ್ಳುವ ಕಂಪೆನಿಗಳ ನಿರ್ದೇಶಕರನ್ನು ತನ್ನ ಪರಿಧಿಯೊಳಗೆ ತರುವ ಸಲುವಾಗಿ ‘ಉದ್ದೇಶಪೂರ್ವಕ ಸುಸ್ತಿದಾರ’ರ ವ್ಯಾಖ್ಯೆಯನ್ನು ಮಾರ್ಪಾಡು ಮಾಡುತ್ತಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ರಘುರಾಮ್ ರಾಜನ್ ಪ್ರಕಟಿಸಿದ್ದಾರೆ.
‘ಎಲ್ಲಾ ನಿರ್ದೇಶಕರನ್ನೂ ಉದ್ದೇಶಪೂರ್ವಕ ಸುಸ್ತಿದಾರರೆಂದು ಘೋಷಿಸಬಹುದೇ ಎಂಬುದರ ಕುರಿತು ಕಲ್ಕತ್ತಾ ಹೈಕೋರ್ಟ್ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಅದರ ಕುರಿತು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಉದ್ದೇಶಪೂರ್ವಕವಾಗಿ ಸುಸ್ತಿ ಉಳಿಸಿಕೊಂಡು ನಿರ್ಲಕ್ಷಿಸುತ್ತಿರುವುದು ಸ್ಪಷ್ಟವಾದವರ ಅಥವಾ ಆ ಚಟುವಟಿಕೆಯಲ್ಲಿ ತೊಡಗಿರುವ ನಿರ್ದೇಶಕರು ಶಿಕ್ಷಾರ್ಹರು ಎಂದು ವ್ಯಾಖ್ಯಾನವನ್ನು ಬದಲಿಸುವ ಪ್ರಕ್ರಿಯೆಯೂ ನಡೆದಿದೆ’ ಎಂದು ರಾಜನ್ ತಿಳಿಸಿದ್ದಾರೆ.
ಪ್ರಸ್ತುತ ವ್ಯಾಖ್ಯಾನದ ಪ್ರಕಾರ, ಉದ್ದೇಶಪೂರ್ವಕ ಸುಸ್ತಿದಾರನು, ತಾನು ತೆಗೆದುಕೊಂಡ ಹಣವನ್ನು ಅದೇ ಉದ್ದೇಶಕ್ಕೆ ಬಳಸದವನು ಅಥವಾ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿದಾಗ ಅಥವಾ ಬ್ಯಾಂಕ್ನ ಗಮನಕ್ಕೆ ತಾರದೆಯೇ ಸಾಲ ತೆಗೆದುಕೊಳ್ಳಲು ಅಡವಿಟ್ಟ ಸಂಪತ್ತನ್ನು ನಾಶಪಡಿಸಿ, ಸುಸ್ಥಿ ಮರುಪಾವತಿ ಮಾಡದೆ ಉಳಿಸಿಕೊಳ್ಳುವವನಾಗಿದ್ದಾನೆ. ಮರುಪಾವತಿಗೆ ನಿರಾಕರಿಸುವ ಮತ್ತು ಇಡೀ ಮರುಪಾವತಿ ಪ್ರಕ್ರಿಯೆಗೆ ಅಡಚಣೆ ಉಂಟುಮಾಡುವ ಅಸಹಕಾರಿ ಸುಸ್ತಿದಾರರನ್ನು ಎದುರಿಸಲು ಮಾರ್ಗದರ್ಶಿಯನ್ನು ರಚಿಸಲಾಗಿದೆ ಎಂದು ರಾಜನ್ ತಿಳಿಸಿದರು.