ಬೆಂಗಳೂರು: `ಉನ್ನತಿ ಸಂಸ್ಥೆಯು ಉಚಿತವಾಗಿ ಎಪ್ಪತ್ತು ದಿನಗಳ ವೃತ್ತಿ ತರಬೇತಿಯನ್ನು ನೀಡುತ್ತಿದ್ದು, ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ನೂರಕ್ಕೆ ನೂರರಷ್ಟು ಕೆಲಸ ದೊರೆಯುತ್ತಿದೆ' ಎಂದು ಸಂಸ್ಥೆಯ ಟ್ರಸ್ಟಿ ರಮೇಶ್ ಸ್ವಾಮಿ ಹೇಳಿದರು.
ಉನ್ನತಿ ಸಂಸ್ಥೆಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ, ರಿಟೇಲ್, ಡಾಟಾ ಬೇಸ್, ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಹೀಗೆ ಇನ್ನೂ ಮುಂತಾದ ಕೋರ್ಸ್ಗಳನ್ನು ನಡೆಸಲಾಗುತ್ತಿದೆ. ವರ್ಷದಲ್ಲಿ ಸುಮಾರು 2,000 ವಿದ್ಯಾರ್ಥಿಗಳು ತರಬೇತಿ ಹೊಂದುತ್ತಾರೆ. ತರಬೇತಿಯು ಎಪ್ಪತ್ತು ದಿನಗಳಾಗಿದ್ದು, ಉಚಿತ ಊಟ ಮತ್ತು ವಸತಿಯನ್ನು ಕಲ್ಪಿಸಲಾಗಿದೆ' ಎಂದರು.
`ಇಲ್ಲಿ ವಿದ್ಯಾರ್ಹತೆಯ ಮಿತಿಯಿಲ್ಲ. ಅವರವರ ಅರ್ಹತೆಯ ಆಧಾರದ ಮೇಲೆ ಅವರಿಗೆ ತರಬೇತಿ ನೀಡಲಾಗುತ್ತದೆ. ಯುವಕರಿಗೆ 18 ರಿಂದ 29 ವರ್ಷದವರೆಗೆ, ಮಹಿಳೆಯರಿಗೆ 40 ವರ್ಷದವರೆಗೆ ಅವಕಾಶವಿದೆ. ತರಬೇತಿ ಹೊಂದಿದವರಿಗೆ ಕ್ಯಾಂಪಸ್ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ನೂರರಷ್ಟು ಕೆಲಸ ಖಂಡಿತವಾಗಿ ದೊರೆಯುತ್ತದೆ' ಎಂದು ಹೇಳಿದರು.
ಉತ್ಸವ 2013 ಸಂಭ್ರಮ: ಉನ್ನತಿ ಸಂಸ್ಥೆಯು `ಉತ್ಸವ 2013 ಸಂಭ್ರಮ' ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಗಸ್ಟ್ 10 ರಿಂದ ಸೆ. 1 ರವರೆಗೆ ಆಯೋಜಿಸಿದೆ. ಯು.ಶ್ರೀನಿವಾಸ್, ಶ್ರೀಕೃಷ್ಣ ಮೋಹನ್, ರಾಮ್ಕುಮಾರ್ ಮೋಹನ್, ಸಂಜಯ ಸುಬ್ರಮಣಿಯನ್, ಮದುರೈ ಟಿ.ಎನ್.ಶೇಷಗೋಪಾಲನ್, ಷಣ್ಮುಗಪ್ರಿಯಾ, ಹರಿಪ್ರಿಯಾ ಮುಂತಾದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಟ ರಮೇಶ್ ಅರವಿಂದ ಅವರು ಉನ್ನತಿ ಸಂಸ್ಥೆಯ ಬ್ರ್ಯಾಂಡ್ ಅಂಬಾಸಡರ್ ಆಗಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.