ಕಠ್ಮಂಡು (ಪಿಟಿಐ): ವಿಶ್ವದ ಅತ್ಯಂತ ಎತ್ತರದ ಪರ್ವತ ಮೌಂಟ್ ಎವರೆಸ್ಟ್ನಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಹಿಮಕುಸಿತದಲ್ಲಿ ಕನಿಷ್ಠ 13 ಶೆರ್ಪಾ ಚಾರಣ ಮಾರ್ಗದರ್ಶಿಗಳು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.
ಇತ್ತೀಚಿಗಿನ ದಿನಗಳಲ್ಲಿ ಇಲ್ಲಿ ನಡೆದ ಅತ್ಯಂತ ಭೀಕರ ದುರಂತ ಇದಾಗಿದೆ. ಸುಮಾರು 5,800 ಮೀಟರ್ ಎತ್ತರದ ‘ಪಾಪ್ಕಾರ್ನ್ ಫೀಲ್ಡ್’ ಎಂದು ಕರೆಯುವ ಪ್ರದೇಶದಲ್ಲಿ ಬೆಳಿಗ್ಗೆ 6.45 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.
‘೧೩ ಮೃತದೇಹಗಳನ್ನು ಮೂಲ ಶಿಬಿರಕ್ಕೆ ತರಲಾಗಿದೆ. ಗಾಯಗೊಂಡ ಮೂವರು ಪರ್ವತಾರೋಹಿಗಳನ್ನು ಕಠ್ಮಂಡುವಿಗೆ ಕರೆದೊಯ್ಯಲಾಗಿದೆ. ಇನ್ನೂ 7 ಪರ್ವತಾರೋಹಿಗಳು ನಾಪತ್ತೆಯಾಗಿದ್ದಾರೆ’ ಎಂದು ನೇಪಾಳಿ ಪ್ರವಾಸೋದ್ಯಮ ಸಚಿವಾಲಯದ ಪರ್ವತಾರೋಹಣ ವಿಭಾಗದ ಮೂಲಗಳು ತಿಳಿಸಿವೆ.
‘ಸುಮಾರು 15 ಪರ್ವತಾರೋಹಿಗಳು ಮತ್ತು ಶೆರ್ಪಾ ಮಾರ್ಗದರ್ಶಿಗಳ ಗುಂಪು ಮೌಂಟ್ ಎವರೆಸ್ಟ್ನ ಮೂಲ ಶಿಬಿರದಿಂದ ಒಂದನೇ ಶಿಬಿರಕ್ಕೆ ತೆರಳುತ್ತಿದ್ದಾಗ ಹಿಮಕುಸಿತ ಸಂಭವಿಸಿದೆ’ ಎಂದು ಪರ್ವತಾರೋಹಣ ವಿಭಾಗದ ಅಧಿಕಾರಿ ತಿಲಕ್ ಪಾಂಡೆ ಹೇಳಿದ್ದಾರೆ.
ಸ್ಥಳದಲ್ಲಿ ಸುಮಾರು 100 ಶೆರ್ಪಾ ಮಾರ್ಗದರ್ಶಿಗಳು ಮತ್ತು ಪರ್ವತಾರೋಹಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ‘ಕೆಲವು ಪರ್ವತಾರೋಹಿಗಳನ್ನು ರಕ್ಷಿಸಲಾಗಿದೆ. ಆದರೆ, ಇನ್ನೂ ಅನೇಕರು ನಾಪತ್ತೆಯಾಗಿದ್ದಾರೆ’ ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆ ವಕ್ತಾರರು ತಿಳಿಸಿದ್ದಾರೆ.
‘ಸ್ಥಳೀಯ ಮಾರ್ಗದರ್ಶಕರು ನಸುಕಿನಲ್ಲಿ ಹಗ್ಗಗಳನ್ನು ಕಟ್ಟಿ ಪರ್ವಾತಾರೋಹಣಕ್ಕೆ ದಾರಿ ರೂಪಿಸುತ್ತಿದ್ದಾಗ ಹಿಮಕುಸಿತ ಸಂಭವಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನೇಪಾಳ ಸೇನಾಪಡೆ, ಸಶಸ್ತ್ರ ಪೊಲೀಸ್ ಪಡೆಯ ಸಹಯೋಗದೊಂದಿಗೆ ಹಿಮಾಲಯ ರಕ್ಷಣಾ ದಳ, ಸ್ಥಳೀಯ ಮಾರ್ಗದರ್ಶಕರು ಪರಿ
ಹಾರ ಕಾರ್ಯ ಕೈಗೊಂಡಿದ್ದಾರೆ’ ಎಂದು ಟ್ರೆಕ್ಕಿಂಗ್ ಅಸೋಸಿಯೇಶನ್ ತಿಳಿಸಿದೆ.
ಏಪ್ರಿಲ್–ಮೇ ತಿಂಗಳಿನಲ್ಲಿ ಪರ್ವತಾರೋಹಿಗಳ ಸಂಖ್ಯೆ ಹೆಚ್ಚಿರುವ ಸಂದರ್ಭದಲ್ಲಿಯೇ ಈ ಅವಘಡ ನಡೆದಿದೆ. ೮,೮೪೮ ಮೀಟರ್ ಎತ್ತರದ ಎವರೆಸ್ಟ್ ಏರಲು ಈಗಾಗಲೇ ಮೂಲ ಶಿಬಿರಕ್ಕೆ ನೂರಾರು ಮಂದಿ ಲಗ್ಗೆ ಇಟ್ಟಿದ್ದಾರೆ. ‘ಮುಂದಿನ 2 ತಿಂಗಳಲ್ಲಿ 334 ವಿದೇಶಿಯರಿಗೆ ಎವರೆಸ್ಟ್ ಏರಲು ಅನುಮತಿ ನೀಡಲಾಗಿದೆ. ಇವರಿಗೆ 400 ಶೆರ್ಪಾಗಳು ನೆರವು ನೀಡಲಿದ್ದಾರೆ’ ಎಂದು ಪರ್ವತಾರೋಹಣ ವಿಭಾಗದ ಅಧಿಕಾರಿ ದೀಪೇಂದ್ರ ಪೌಡೆಲ್ ಹೇಳಿದ್ದಾರೆ.
ಎಡ್ಮಂಡ್ ಹಿಲರಿ ಹಾಗೂ ತೇನ್ಸಿಂಗ್ ನೊರ್ಗೆ, ೧೯೫೩ರಲ್ಲಿ ಮೊದಲ ಬಾರಿ ಎವರೆಸ್ಟ್ ಏರಿ ದಾಖಲೆ ಮಾಡಿದ್ದರು. ಅಲ್ಲಿಂದ ಈವರೆಗೆ ಸುಮಾರು ೪,೦೦೦ ಮಂದಿ ಎವರೆಸ್ಟ್ ಏರಿದ್ದಾರೆ. 1970ರ ಉತ್ತರಾರ್ಧದವರೆಗೆ ಪ್ರತಿ ವರ್ಷ ಬೆರಳೆಣಿಕೆಯಷ್ಟು ಜನ ಎವರೆಸ್ಟ್ ಏರಿದ್ದರು. 1993ರಲ್ಲಿ ಮೊದಲ ಬಾರಿ ಈ ಸಂಖ್ಯೆ 100ಕ್ಕೆ ಏರಿತ್ತು. 2004ರ ಹೊತ್ತಿಗೆ 300ಕ್ಕೂ ಹೆಚ್ಚು ಮಂದಿ ಮೌಂಟ್ ಎವರೆಸ್ಟ್ ಏರಿದ್ದರು. 2012ರಲ್ಲಿ ಯಶಸ್ವಿ ಪರ್ವತಾರೋಹಿಗಳ ಸಂಖ್ಯೆ 500ಕ್ಕೂ ಹೆಚ್ಚಿತ್ತು.
ಕರಾಳ ನೆನಪು
ಈವರೆಗೆ ೨೫೦ಕ್ಕೂ ಹೆಚ್ಚು ಪರ್ವತಾರೋಹಿಗಳು ಮೃತಪಟ್ಟಿದ್ದಾರೆ. 1996ರಲ್ಲಿ 15 ಹಾಗೂ 2006ರಲ್ಲಿ ೧೨ ಮಂದಿ ಬಲಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.