ಬೆಂಗಳೂರು: ‘ಐಪಿಸಿ ಕಲಂ 377ಅನ್ನು ಕೇಂದ್ರ ಸರ್ಕಾರ ಕೂಡಲೇ ರದ್ದುಪಡಿಸಬೇಕು’ ಎಂದುಲೈಂಗಿಕ ಅಲ್ಪಸಂಖ್ಯಾತರ ಸರ್ಕಾರೇತರ ಸಂಸ್ಥೆ ‘ಸಂಗಮ’ದ ನಿರ್ದೇಶಕರಾದ ರಾಜೇಶ್ ಉಮಾದೇವಿ ಒತ್ತಾಯಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಕಲಂ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆ ಸ್ವಾಗತಾರ್ಹ. ಅಂತೆಯೇ ಕಲಂ ರದ್ಧತಿಗೆ ಸರ್ಕಾರ ಕಾರ್ಯಪ್ರವೃತ್ತರಾಗಬೇಕು’ ಎಂದರು.
‘ಸಲಿಂಗಿಗಳು ಮತ್ತು ಲೈಂಗಿಕ ಅಲ್ಪಸಂಖ್ಯಾತರ ವಿರೋಧಿಯಾಗಿರುವ ಈ ಕಲಂ, ಸಲಿಂಗ ಕಾಮ ಅಪರಾಧ ಎಂದು ವ್ಯಾಖ್ಯಾನಿಸುತ್ತದೆ. ಇದು ನಮ್ಮ ಹಕ್ಕುಗಳನ್ನು ಉಲ್ಲಂಘಿಸುತ್ತದೆ’ ಎಂದು ದೂರಿದರು.
‘ದೇಶದಲ್ಲಿ ಲೈಂಗಿಕ ಅಲ್ಪ ಸಂಖ್ಯಾತರ ಹಕ್ಕುಗಳಿಗೆ ಬೆಲೆ ಇಲ್ಲದಂತಾಗಿದೆ. ನಾವೂ ಮನುಷ್ಯರು. ನಮಗೂ ಬದುಕುವ ಹಕ್ಕಿದೆ. ನಮ್ಮ ಮೇಲೆ ದೌರ್ಜನ್ಯಕ್ಕೆ ಎಡೆ ಮಾಡಿಕೊಡುವ ಯಾವುದೇ ಕಾಯ್ದೆಗಳನ್ನು ಸರ್ಕಾರ ಜಾರಿಗೆ ತರಬಾರದು’ ಎಂದು ಆಗ್ರಹಿಸಿದರು.