ನವದೆಹಲಿ (ಪಿಟಿಐ): ಕಪ್ಪುಹಣ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಸೋಮವಾರ ಪ್ರಮಾಣ ಪತ್ರ ಸಲ್ಲಿಸಿರುವ ಕೇಂದ್ರ ಸರ್ಕಾರ, ಪ್ರಮುಖ ಉದ್ಯಮಿ ಪ್ರದೀಪ್ ಬರ್ಮನ್ ಸೇರಿದಂತೆ ಮೂವರ ಹೆಸರನ್ನು ಬಹಿರಂಗ ಪಡಿಸಿದೆ.
ಗೋವಾ ಮೂಲದ ಗಣಿ ಉದ್ಯಮಿ ರಾಧಾ ಎಸ್. ತಿಬ್ಲೊ ಹಾಗೂ ಚಿನ್ನ–ಬೆಳ್ಳಿ ವ್ಯಾಪಾರಿ ಪಂಕಜ್ ಚಿಮನಲಾಲ್ ಲೋಧ್ಯಾ ಅವರು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಹೆಸರಿಸಿರುವ ಇತರ ಇನ್ನಿಬ್ಬರು.
ವಿದೇಶದಲ್ಲಿ ಕಪ್ಪಹಣ ಇಟ್ಟವರ ಹೆಸರುಗಳನ್ನು ಬಹಿರಂಗಗೊಳಿಸಬಾರದು ಎಂಬ ಉದ್ದೇಶವೇನೂ ತನಗೆ ಇರಲಿಲ್ಲ. ತೆರಿಗೆ ತಪ್ಪಿಸಿರುವ ಎಲ್ಲಾ ಪ್ರಕರಣಗಳ ಬಗ್ಗೆ ವಿದೇಶಗಳಿಂದ ಲಭಿಸುವ ಮಾಹಿತಿಯನ್ನು ಬಹಿರಂಗ ಪಡಿಸುವುದಾಗಿ ನ್ಯಾಯಾಲಯಕ್ಕೆ ಸರ್ಕಾರ ತಿಳಿಸಿದೆ.
ಅಲ್ಲದೇ, ಭಾರತೀಯ ವ್ಯಕ್ತಿ ಹೊಂದುವ ಪ್ರತಿಯೊಂದು ವಿದೇಶಿ ಖಾತೆಯೂ ಅಕ್ರಮವಲ್ಲ ಎಂದು ಹೇಳಿರುವ ಸರ್ಕಾರ, ತಪ್ಪು ನಡೆದಿರುವ ಬಗ್ಗೆ ಮೇಲ್ನೋಟಕ್ಕೆ ಸಾಬೀತಾಗುವ ತನಕ ಅವರ ಹೆಸರುಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದಿದೆ.
ಇದೇ ವೇಳೆ, ಆದಾಯ ತೆರಿಗೆ ಇಲಾಖೆಯಿಂದ ತನಿಖೆ ನಡೆದಿರುವ ಪ್ರಕರಣಗಳಲ್ಲಿ ಕಪ್ಪು ಹಣದ ಮಾಹಿತಿ ನೀಡುವ ಬಗ್ಗೆ ಸ್ವಿಟ್ಜರ್ಲೆಂಡ್ ಸುಳಿವು ನೀಡಿದೆ ಎಂದೂ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.