ಬೆಂಗಳೂರು: ಕಬ್ಬನ್ ಪಾರ್ಕ್ನ ಎರಡು ಪ್ರಮುಖ ರಸ್ತೆಗಳನ್ನು ಶಾಶ್ವತವಾಗಿ ಮುಚ್ಚುವಂತೆ ಬೆಂಗಳೂರು ನಗರ ಪೊಲೀಸರಿಗೆ ಮತ್ತೊಮ್ಮೆ ಮನವಿ ಮಾಡಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.
ಎಂ.ಜಿ.ರಸ್ತೆಯಿಂದ ಫೌಂಟೇನ್ ಸರ್ಕಲ್ ಮೂಲಕವಾಗಿ ಕೆ.ಆರ್.ಸರ್ಕಲ್ ಮತ್ತು ಯು.ಬಿ ಸಿಟಿ ಕಡೆಗೆ ಸಾಗುವ 700 ಮೀಟರ್ ಉದ್ದದ ರಸ್ತೆ ಮತ್ತು ಪ್ರೆಸ್ಕ್ಲಬ್ನಿಂದ ಹೈಕೋರ್ಟ್ ಕಡೆಗೆ ಸಾಗುವ 600 ಮೀಟರ್ ಉದ್ದದ ರಸ್ತೆಯನ್ನು ಶಾಶ್ವತವಾಗಿ ಮುಚ್ಚಬೇಕು ಎಂಬುದು ತೋಟಗಾರಿಕೆ ಇಲಾಖೆಯ ಒತ್ತಾಯ.
‘ಬಾಲಭವನ ಕಡೆಯಿಂದ ಫೌಂಟೇನ್ ಸರ್ಕಲ್ವರೆಗಿನ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಗೇಟ್ ತೆರೆಯುವಂತೆ 2011 ರ ಮಾರ್ಚ್ನಲ್ಲಿ ಅಂದಿನ ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಆದೇಶಿಸಿದ್ದರು. ಮೆಟ್ರೊ ಕಾಮಗಾರಿ ಮುಗಿಯುವವರೆಗೆ ಮಾತ್ರ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದರು. ಈಗ ಮೆಟ್ರೊ ಕಾಮಗಾರಿ ಮುಗಿದಿದೆ.
ಆದ್ದರಿಂದ ಗೇಟ್ಗಳನ್ನು ಮುಚ್ಚಿ ಸಂಚಾರವನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ಮನವಿ ಮಾಡುತ್ತೇವೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ‘ಪ್ರಜಾವಾಣಿ’ಗೆ ತಿಳಿಸಿದರು.