ಬದಿಯಡ್ಕ: ಕಾಸರಗೋಡು ಜಿಲ್ಲೆಯ ಪೆರಡಾಲ ಕವಿತಾ ಕುಟೀರದ ಹಿರಿಯ ಕವಿ ಕಯ್ಯಾರ ಕಿಂಞಣ್ಣ ರೈ ಅವರಿಗೆ 2013ನೇ ಸಾಲಿನ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿ ಘೋಷಣೆಯಾಗಿದೆ.
ಕರ್ನಾಟಕ ಸರ್ಕಾರದ ಪರವಾಗಿ ಮಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಚಂದ್ರಹಾಸ ರೈ ಅವರು ಮಂಗಳವಾರ ಕಯ್ಯಾರರ ಮನೆಗೆ ತೆರಳಿ ಆಹ್ವಾನ ಪತ್ರಿಕೆಯನ್ನು ನೀಡಿದರು. ಇದೇ 23ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಆದರೆ ಅಸೌಖ್ಯದಿಂದ ಬಳಲುತ್ತಿರುವ ಕಯ್ಯಾರರು ಬೆಂಗಳೂರಿಗೆ ತೆರಳುವ ಸಾಧ್ಯತೆ ಕಡಿಮೆ ಇದೆ.
ಕಯ್ಯಾರರು ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಕನ್ನಡ ಅಧ್ಯಾಪಕರು. ಅವರು ‘ದುರ್ಗಾದಾಸ’ ಎಂಬ ಕಾವ್ಯನಾಮದಲ್ಲಿ ಅನೇಕ ಬರಹಗಳನ್ನು ಬರೆದಿದ್ದಾರೆ. 1915 ಜೂನ್ 8ರಂದು ಪೆರಡಾಲದಲ್ಲಿ ಜನಸಿದ ಅವರಿಗೆ ಇದೇ ಜೂನ್ 8ರಂದು ಜನ್ಮಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಸಿದ್ಧತೆ ನಡೆಯುತ್ತಿದ್ದಂತೆಯೇ ಪಂಪ ಪ್ರಶಸ್ತಿ ಘೋಷಣೆಯಾಗಿದೆ.