ನವದೆಹಲಿ (ಪಿಟಿಐ): ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಾಗೂ ರದ್ದುಗೊಂಡಿರುವ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಗೆ ದಾರಿ ಮಾಡಿಕೊಡುವ ಎರಡು ಸುಗ್ರೀವಾಜ್ಞೆಗಳಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶುಕ್ರವಾರ ಅಂಕಿತ ಹಾಕಿದರು.
ವಿಮೆ ಹಾಗೂ ಕಲ್ಲಿದ್ದಲು ಕ್ಷೇತ್ರಗಳಲ್ಲಿ ಸುಧಾರಣಾ ಕ್ರಮಗಳನ್ನು ತರುವುದಕ್ಕಾಗಿ ಸರ್ಕಾರವು ಈ ಸುಗ್ರೀವಾಜ್ಞೆಗಳನ್ನು ಹೊರಡಿಸಲು ನಿರ್ಧರಿಸಿತ್ತು. ಡಿ.೨೪ರಂದು ಸಂಪುಟವು ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿತ್ತು.
ಹೆಚ್ಚುವರಿ ಪರಿಹಾರ ವಿತರಣೆಗೆ ಸೂಚನೆ
ನವದೆಹಲಿ (ಪಿಟಿಐ): ೧೯೮೪ರಲ್ಲಿ ನಡೆದ ಸಿಖ್ ಹತ್ಯಾಕಾಂಡ ಸಂತ್ರಸ್ತರಿಗೆ ಹೆಚ್ಚುವರಿಯಾಗಿ ಘೋಷಿಸಿರುವ ತಲಾ ರೂ೫ ಲಕ್ಷ ಪರಿಹಾರವನ್ನು ಕೂಡಲೇ ವಿತರಿಸಲು ಕ್ರಮ ತೆಗೆದುಕೊಳ್ಳುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಗೃಹಸಚಿವ ರಾಜನಾಥ್ ಸಿಂಗ್ ಸೂಚನೆ ನೀಡಿದ್ದಾರೆ.
ವಿತರಣೆ: ರಾಜನಾಥ್ ಸಿಂಗ್ ಅವರು ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ೧೭ ಸಂತ್ರಸ್ತರಿಗೆ ತಲಾ ರೂ ೫ ಲಕ್ಷ ರೂಪಾಯಿಯ ಚೆಕ್ ವಿತರಣೆ ಮಾಡಿದರು.
ತಾಜ್ಮಹಲ್ ವೀಕ್ಷಣೆಗೆ ಆನ್ಲೈನ್ ಬುಕಿಂಗ್
ಆಗ್ರಾ (ಐಎಎನ್ಎಸ್): ವಿಶ್ವ ಪ್ರಸಿದ್ಧ ತಾಜ್ಮಹಲ್ ವೀಕ್ಷಣೆಗೆ ಆನ್ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ ಶನಿವಾರದಿಂದ ಜಾರಿಗೆ ಬರಲಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿದೆ. ಆಸಕ್ತರು ask.irctc.co. ಮೂಲಕ ಟಿಕೆಟ್ ಬುಕ್ ಮಾಡಬಹುದು.
‘ಒಂದೇ ದರ್ಜೆ ಒಂದೇ ಪಿಂಚಣಿ’
ಪಣಜಿ (ಪಿಟಿಐ): ಮುಂಬರುವ ಬಜೆಟ್ ಒಳಗಾಗಿ ರಕ್ಷಣಾ ಪಡೆಗಳಲ್ಲಿ ‘ಒಂದೇ ದರ್ಜೆ ಒಂದೇ ಪಿಂಚಣಿ’ ನಿಯಮವನ್ನು ಜಾರಿ ಮಾಡಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದರು.
ಸಚಿವ ಮಜೀಠಿಯಾ ವಿಚಾರಣೆ
ಜಲಂಧರ (ಐಎಎನ್ಎಸ್): ಬಹುಕೋಟಿ ರಾಸಾಯನಿಕ ಔಷಧ ಹಗರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸಚಿವ ಬಿಕ್ರಮ್ ಸಿಂಗ್ ಮಜೀಠಿಯಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ವಿಚಾರಣೆಗೊಳಪಡಿಸಿದರು.