ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಚಿದ `ಲಾಲ್ಗುಡಿ' ಪಿಟೀಲಿನ 4 ನೇ ಕೊಂಡಿ

Last Updated 22 ಏಪ್ರಿಲ್ 2013, 20:24 IST
ಅಕ್ಷರ ಗಾತ್ರ

ಚೆನ್ನೈ(ಪಿಟಿಐ): ಖ್ಯಾತ ಪಿಟೀಲು ವಾದಕ ಲಾಲ್ಗುಡಿ ಜಯರಾಮನ್ (82) ಅಲ್ಪಕಾಲದ ಅಸ್ವಸ್ಥತೆಯ ನಂತರ ಸೋಮವಾರ ಇಲ್ಲಿ ನಿಧನರಾದರು.

ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಸಂಗೀತಾಭಿಮಾನಿಗಳನ್ನು ಅಗಲಿರುವ ಲಾಲ್ಗುಡಿ ಕರ್ನಾಟಕ ಸಂಗೀತಕ್ಕೆ ತಮ್ಮ ಜೀವನವನ್ನೇ ಅರ್ಪಿಸಿಕೊಂಡಿದ್ದರು.

12ನೇ ವಯಸ್ಸಿನಲ್ಲೇ ಸಂಗೀತಾಭ್ಯಾಸ ಆರಂಭಿಸಿದ ಲಾಲ್ಗುಡಿ ತೆಲುಗು, ತಮಿಳು, ಕನ್ನಡ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಅತ್ಯುತ್ತಮ ಸಂಗೀತ ಸಂಯೋಜಕರಾಗಿ ಹೆಸರು ಮಾಡಿದ್ದರು. ವಿಶ್ವದಾದ್ಯಂತ ಹಲವು ಸಂಗೀತ ಕಛೇರಿ ನೀಡಿದ್ದ ಲಾಲ್ಗುಡಿ ಅವರಿಗೆ 1972ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು.

ಕಳಚಿದ `ಲಾಲ್ಗುಡಿ' ಪಿಟೀಲಿನ 4 ನೇ ಕೊಂಡಿ
ಪ್ರಜಾವಾಣಿ ವಾರ್ತೆ
ಚೆನ್ನೈ
: ಕರ್ನಾಟಕ ಸಂಗೀತದ ಅಗ್ರಗಣ್ಯ ಪಿಟೀಲು ವಾದಕ ಲಾಲ್ಗುಡಿ ಜಯರಾಮನ್ ಅವರ (82) ನಿಧನದ ಮೂಲಕ `ಲಾಲ್ಗುಡಿ' ಸಂಗೀತ ಪರಂಪರೆಯ ನಾಲ್ಕನೇ ತಲೆಮಾರಿನ ಕೊಂಡಿಯೊಂದು ಕಳಚಿದಂತಾಗಿದೆ.

ವೀಣೆಗೆ ಶೇಷಣ್ಣ ಹಾಗೂ ಕೊಳಲಿಗೆ ಚೌರಾಸಿಯಾ ಅವರಂತೆ  ಪಿಟೀಲು ವಾದನಕ್ಕೆ ಹೆಸರಾಗಿದ್ದವರು ಜಯರಾಮನ್.

ತಿರುಚನಾಪಳ್ಳಿ ಜಿಲ್ಲೆಯ ಲಾಲ್ಗುಡಿ ಜಯರಾಮನ್ ಅವರ ತವರೂರು. ಅವರದ್ದು ಸಂಗೀತ ಮನೆತನವಾದ್ದರಿಂದ ಸಂಗೀತ ಅವರಿಗೆ ರಕ್ತಗತವಾಗಿಯೇ ಒಲಿದು ಬಂದಿತು. ಜಯರಾಮನ್ ಅವರು ಲಾಲ್ಗುಡಿ ಬಳಿಯ ಇದತುಮಗಲಂನಲ್ಲಿ 1930ರ ಸೆಪ್ಟೆಂಬರ್ 17ರಂದು ಜನಿಸಿದರು.

ಜಯರಾಮನ್ ಅವರ ತಂದೆ ವಿ.ಆರ್. ಗೋಪಾಲ್ ಅಯ್ಯರ್ ಅವರು ಸಂಗೀತ ಸಂತ ತ್ಯಾಗರಾಜ ಅವರ ಶಿಷ್ಯ ಪರಂಪರೆಯಲ್ಲಿ ಬಂದವರು. ಮಗನಿಗೂ ಅದನ್ನು ಧಾರೆ ಎರೆದರು.

12ನೇ ವಯಸ್ಸಿನಲ್ಲೇ ಬಾಲಕ ಜಯರಾಮನ್ ಕರ್ನಾಟಕ ಸಂಗೀತ ಮೇರು ಪ್ರತಿಭೆಗಳಾಗಿದ್ದ ಅರಿಯಕುಡಿ ರಾಮಾನುಜ ಅಯ್ಯಂಗಾರ್, ಚೆಂಬೈ ವೈದ್ಯನಾಥ್ ಭಾಗವತರ್ ಹಾಗೂ ಶೆಮ್ಮಂಗುಡಿ ಶ್ರೀನಿವಾಸ್ ಅಯ್ಯರ್ ಅವರೊಂದಿಗೆ ಕಛೇರಿಯಲ್ಲಿ ಕಾಣಿಸಿಕೊಂಡು ಭರವಸೆಯ ಪಿಟೀಲು ವಾದಕರೆನಿಸಿಕೊಂಡು ಹಿರಿಯ ಸಾಧಕರಿಂದ ಬೆನ್ನುತಟ್ಟಿಸಿಕೊಂಡರು.

`ಶಿಸ್ತಿನ ಸಂಗೀತಗಾರ' ಎಂದೇ ಹೆಸರಾಗಿದ್ದ ಜಯರಾಮನ್, ಸಂಪ್ರದಾಯದ ಚೌಕಟ್ಟಿನೊಳಗೆ `ಸಮ್ಮೊಹನಗೊಳಿಸುವ ತಂತ್ರ'ಗಳ ಅನ್ವೇಷಣೆಗೆ ಮುಂದಾಗಿ `ಲಾಲ್ಗುಡಿ' ಶೈಲಿಯನ್ನು ಹುಟ್ಟುಹಾಕಿದರು. ವಿದೇಶಗಳಲ್ಲಿ  ನೀಡಿದ ಹಲವಾರು ಸಂಗೀತ ಕಛೇರಿಯಲ್ಲಿ ಜಯರಾಮನ್ ಅವರ `ಲಾಲ್ಗುಡಿ' ಮಾಡಿದ ಮೋಡಿ ಅಷ್ಟಿಷ್ಟಲ್ಲ. ವಿವಿಧ ಪ್ರಯೋಗಗಳ ಮೂಲಕ ಸಂಗೀತ ಸಮೃದ್ಧಿಗೊಳಿಸುವ ಕನಸು ಕಾಣುತ್ತಿದ್ದ ಜಯರಾಮನ್, `ಲಾಲ್ಗುಡಿ ಬನಿ' ಎಂಬ ತಮ್ಮದೇ ಆದ ವಿಶಿಷ್ಟ ತಂತಿವಾದ್ಯವನ್ನು  ಪರಿಚಯಿಸಿ ಅದರ ಮೂಲಕ ವಿಶ್ವ ಸಂಗೀತ ರಸಿಕರ ಮನಸೂರೆಗೊಂಡಿದ್ದರು.

ಸಂಗೀತ ಪ್ರಿಯರಿಂದ `ಕರ್ನಾಟಕಿ ಸಂಗೀತ ಸಾಗರ' ಎಂದೇ ಕರೆಯಿಸಿಕೊಳ್ಳುತ್ತಿದ್ದ ಜಯರಾಮನ್, ಪಿಟೀಲು ವಾದನ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಹಾಗೂ ವಾಗ್ಗೇಯಕಾರರಾಗಿದ್ದರು. ತಮಿಳು, ತೆಲುಗು, ಕನ್ನಡ ಹಾಗೂ ಸಂಸ್ಕೃತದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಸಂಗೀತದ ಜೊತೆಗೆ ಭರತನಾಟ್ಯಕ್ಕೆ ತಮ್ಮದೇ ಆದ ಆಯಾಮ ನೀಡಿದ ಜಯರಾಮನ್, ಅಪೂರ್ವ ತಿಲ್ಲಾನಗಳು ಹಾಗೂ ವರ್ಣಗಳ ಬಹುದೊಡ್ಡ ಕೊಡುಗೆ ನೀಡ್ದ್ದಿದಾರೆ.

ಭಾರತದ ಸಂಗೀತ ಹಾಗೂ ಸಾಂಸ್ಕೃತಿಕ ನಿಯೋಗಗಳಲ್ಲಿ ರಷ್ಯಾ, ಲಂಡನ್, ಸಿಂಗಪುರ, ಜರ್ಮನಿ ಹಾಗೂ ಇಟಲಿ ಸೇರಿದಂತೆ ಹತ್ತು ಹಲವು ದೇಶಗಳಲ್ಲಿ ಸಂಗೀತ ಕಛೇರಿ ನೀಡಿದ್ದಾರೆ. ಸುಮಾರು ಏಳು ದಶಕಗಳ ಕಾಲ ಸಂಗೀತ ಸರಸ್ವತಿಯ ಸೇವೆ ಮಾಡಿದ ಜಯರಾಮನ್ ಅವರಿಗೆ 1972ರಲ್ಲಿ `ಪದ್ಮಶ್ರೀ' ಹಾಗೂ 2001ರಲ್ಲಿ `ಪದ್ಮಭೂಷಣ' ಪ್ರಶಸ್ತಿಗಳು ಸಂದಿವೆ.

ಜತೆಗೆ ಚೌಡಯ್ಯ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ, ಸಂಗೀತ ಕಲಾನಿಧಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮುಡಿಯನ್ನು ಅಲಂಕರಿಸಿವೆ.ಕರ್ನಾಟಕ ಸಂಗೀತಕ್ಕೆ ಜೀವನವನ್ನೇ ಮುಡುಪಾಗಿಟ್ಟ ಜಯರಾಮನ್, ತಮ್ಮ ಮಕ್ಕಳಿಗೂ ವಂಶ ಪಾರಂಪರ್ಯವಾಗಿ ಬಂದ ಕಲೆಯನ್ನು ಧಾರೆ ಎರೆದಿದ್ದಾರೆ. ಅವರ ಪುತ್ರ ಲಾಲ್ಗುಡಿ ಜಿ.ಜೆ.ಆರ್. ಕೃಷ್ಣನ್ ಹಾಗೂ ಪುತ್ರಿ ಲಾಲ್ಗುಡಿ ವಿಜಯಲಕ್ಷ್ಮಿ ಕೂಡ ಪ್ರತಿಭಾವಂತ ಪಿಟೀಲು ವಾದಕರು. ಜೊತೆಗೆ ಜಯರಾಮನ್ ಅವರು ಶಿಷ್ಯ ಪಡೆಯನ್ನು ಬೆಳೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT