ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಸಾರಂ'ನಲ್ಲಿ ಸಾಹಿತ್ಯವೊಂದೇ ನಮ್ಮ ಕೆಲಸ...

Last Updated 18 ಮೇ 2013, 19:59 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಹಲವು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳಿವೆ. `ಕನ್ನಡ ಸಾಹಿತ್ಯ ರಂಗ' ಯಾವ ರೀತಿಯಲ್ಲಿ ಉಳಿದವುಗಳಿಗಿಂಥ ಭಿನ್ನ?
ಸಾಂಸ್ಕೃತಿಕ ಸಂಘಗಳಲ್ಲಿ ಮನೆಮಂದಿಗೆಲ್ಲ ಬೇಕಾದ ಕಾರ್ಯಕ್ರಮಗಳಿರುತ್ತವೆ. ಮುಖ್ಯವಾಗಿ ಹಬ್ಬಗಳ ಆಚರಣೆ; ಗೌರಿ-ಗಣೇಶ, ಯುಗಾದಿ, ದೀಪಾವಳಿ- ಇತ್ಯಾದಿ. ಸಂಗೀತ, ನೃತ್ಯ, ನಾಟಕ ಎಲ್ಲವೂ ಇರುತ್ತವೆ. ಅಲ್ಲಿನ ಕಾರ್ಯಕ್ರಮಗಳಲ್ಲಿ ಹಬ್ಬದ ಮನೆಯ ವಾತಾವರಣ ಇರುತ್ತದೆ. ಮನರಂಜನೆ, ಹೊಟ್ಟೆ ತುಂಬ ಸವಿಯಾದ ಊಟ- ಇವೆಲ್ಲ ಮುಖ್ಯ. ಆದರೆ ಸಾಹಿತ್ಯದ ಆಸ್ವಾದನೆಗೆ ಸ್ವಲ್ಪ ಬೇರೆ ಬಗೆಯ ವಾತಾವರಣ ಬೇಕು. ಇದನ್ನು ಬೆಳಸುವುದು ನಮ್ಮ ರಂಗದ ಮುಖ್ಯ ಕರ್ತವ್ಯ. ಸಾಹಿತ್ಯದಲ್ಲಿ ಒಲವುಳ್ಳವರು ಎಲ್ಲ ಸಂಸ್ಥೆಗಳಲ್ಲೂ ಶೇ. 15-20 ಇದ್ದರೆ ಹೆಚ್ಚು. ಆ ಅಲ್ಪಸಂಖ್ಯಾತರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಅಪೇಕ್ಷಿಸುವುದು ಅಷ್ಟು ಸಾಧುವಲ್ಲ. ಆದ್ದರಿಂದ ಎಲ್ಲ ಸಂಸ್ಥೆಗಳಿಂದಲೂ ಈ ಸಾಹಿತ್ಯಾಸಕ್ತರನ್ನು ಕೂಡಿಸಿದರೆ ಅದೊಂದು ವಿಶಿಷ್ಟ ಆಸಕ್ತಿಯ ಸದಸ್ಯವರ್ಗ ಆಗುತ್ತದೆ ಎಂಬ ಯೋಚನೆಯಲ್ಲಿ ಈ ರಂಗವನ್ನು ಸ್ಥಾಪಿಸಿದೆವು. ಈ ಕನ್ನಡ ಸಾಹಿತ್ಯ ರಂಗದಲ್ಲಿ ಸಾಹಿತ್ಯವೇ ಸಂಪೂರ್ಣ ಕಾರ್ಯರಂಗ. ಸಾಹಿತ್ಯ ಬಿಟ್ಟು ಇನ್ನಾವ ಕೆಲಸಕ್ಕೂ ಕೈಹಾಕುವುದಿಲ್ಲ. ಹಾಗೆಂದು ನಮಗೆ ಬೇರೆ ಕಾರ್ಯಕಲಾಪಗಳಲ್ಲಿ ಆಸಕ್ತಿ ಇಲ್ಲ ಎಂದಲ್ಲ. ನಮ್ಮೆಲ್ಲರಿಗೂ ಆ ಬಗೆಯ ಸಾಮಾಜಿಕ ಆಸಕ್ತಿಗಳುಂಟು. ಅವುಗಳ ಪೂರೈಕೆಗೆ ಇತರ ಸಾಂಸ್ಕೃತಿಕ ಸಂಸ್ಥೆಗಳಿಗೆ ಹೋಗುತ್ತೇವೆ. `ಕಸಾರಂ'ನಲ್ಲಿ ಮಾತ್ರ ಸಾಹಿತ್ಯವೊಂದೇ ನಮ್ಮ ಕೆಲಸ.

ನಮ್ಮ ಮುಖ್ಯವಾದ ಗುರಿ ನಮ್ಮಲ್ಲಿರುವ ಕನ್ನಡ ಸಾಹಿತ್ಯಾಸಕ್ತಿಯನ್ನು ಬೆಳಸಿಕೊಳ್ಳುವುದು. ವಿದೇಶದಲ್ಲಿ ನೆಲೆಸಿ ಅನೇಕ ಹೊಸ ಭಾವನೆಗಳಿಗೆ, ಯೋಚನೆಗಳಿಗೆ, ಅನುಭವಗಳಿಗೆ ತೆರೆದುಕೊಂಡಿರುವ ನಮ್ಮ ಮನಸ್ಸುಗಳನ್ನು ಸಾಹಿತ್ಯದ ಮೂಲಕ ಹೊರಗೆಡಹಬೇಕು. ಈ ಅನುಭವಗಳು ವೈಯಕ್ತಿಕ ಹಾಗೂ ಸಾಮಾಜಿಕ. ಈ ಅನಿವಾಸಿ ಅನುಭವ ((immigrant experience)ಎನ್ನುವುದು ಒಂದು ಪ್ರಖರವಾದ ಅನುಭವ. ಅದನ್ನು ಸಾಹಿತ್ಯವಾಗಿಸುವ ಕಲೆ, ಶ್ರದ್ಧೆಯನ್ನು ನಾವು ಬೆಳೆಸಿಕೊಳ್ಳಬೇಕು.

ರಂಗ ಎರಡು ವರ್ಷಕ್ಕೊಮ್ಮೆ ಒಂದು ಸಾಹಿತ್ಯ ಸಮ್ಮೇಳನ ನಡೆಸುತ್ತದೆ. ಈ ಸಮ್ಮೇಳನ ಪ್ರತಿ ಸಲವೂ ಅಮೆರಿಕದ ಬೇರೆ ಬೇರೆ ಪಟ್ಟಣಗಳಲ್ಲಿ ನಡೆಯುತ್ತದೆ. ಆ ಸಮಯದಲ್ಲಿ ಭಾರತದಿಂದ ಶ್ರೇಷ್ಠ ಸಾಹಿತಿಗಳನ್ನು ಕರೆಸಿ ಅವರ ಭಾಷಣ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತೇವೆ. ನಮ್ಮ ಇಲ್ಲಿನ ಕನ್ನಡಿಗರೇ ಬರೆದ ಲೇಖನ ಸಂಗ್ರಹ ತರುತ್ತೇವೆ. ನಮ್ಮ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡುತ್ತೇವೆ. ಅವನ್ನು ಕೊಳ್ಳಲು ಅವಕಾಶ ಕಲ್ಪಿಸುತ್ತೇವೆ.

ಈ ಸಲದ ಸಮ್ಮೇಳನ ಸಂದರ್ಭದಲ್ಲಿ `ಅಮೆರಿಕದಲ್ಲಿ ನಮ್ಮ ಬದುಕು' ಎಂಬ ಮುಖ್ಯವಸ್ತುವಿನ ಮೇಲೆ ಸುಮಾರು 37 ಲೇಖನಗಳನ್ನುಳ್ಳ 550 ಪುಟದ ಪುಸ್ತಕ ಹೊರಬರುತ್ತಿದೆ. ನಮ್ಮ ಚಟುವಟಿಕೆಗಳನ್ನು ಚ್ಞ್ಞಜಿಠಿಚ್ಟಚ್ಞಜ.ಟ್ಟಜ ಅಂತರ್ಜಾಲ ತಾಣದಲ್ಲಿ ನೋಡಬಹುದು. 

`ಸಾಹಿತ್ಯ ರಂಗ'ದ ಹತ್ತು ವರ್ಷಗಳ ನಡಿಗೆಯಲ್ಲಿ ನಿಮ್ಮ ಉದ್ದೇಶಗಳು ಈಡೇರಿವೆಯೇ?
ನಾವು ಪ್ರಾರಂಭಿಸಿದ್ದಾಗ ನಮ್ಮ ಉದ್ದೇಶ, ಗುರಿ ಸ್ಪಷ್ಟವಾಗಿ ನಮ್ಮ ಕಣ್ಣೆದುರಿಗಿತ್ತು. ಅವುಗಳನ್ನು ಸಾಧಿಸಲು ಮಾಡಬೇಕಾದ ಕೆಲಸಗಳನ್ನೆಲ್ಲ ಕೈಗೊಳ್ಳಬೇಕೆಂಬ ಸ್ಥೂಲವಾದ ಆಲೋಚನೆ ಇತ್ತೇ ಹೊರತು ಇಂಥವೇ ಕೆಲಸಗಳನ್ನು ಮಾಡಬೇಕೆಂಬ ಪಟ್ಟಿ ತಯಾರಿಸಿಕೊಂಡಿರಲಿಲ್ಲ. ಈಗಲೂ ಇಲ್ಲ. ಆದರೆ, ಸಾಹಿತ್ಯ ಸಮ್ಮೇಳನಗಳನ್ನು ನಿಗದಿತ ಸಮಯಗಳಲ್ಲಿ ನಡೆಸಬೇಕು, ಸಾಹಿತ್ಯಾಸಕ್ತರನ್ನೆಲ್ಲ ಒಂದು ಕಡೆ ಸೇರಿಸಬೇಕು, ಜನರ ಕೈಲಿ ಬರೆಸಬೇಕು, ಅದನ್ನು ಇಲ್ಲಿನ ಕನ್ನಡಿಗರಿಗೆ - ಕರ್ನಾಟಕದ ಕನ್ನಡಿಗರಿಗೆ ತಲುಪಿಸಬೇಕು ಎಂಬ ಕೆಲವು ಸ್ಪಷ್ಟ ಕಾರ್ಯಕ್ರಮಗಳನ್ನು ಗುರುತಿಸಿಕೊಂಡಿದ್ದೆವು. ಅದನ್ನು ಸಾಧಿಸಿದ್ದೇವೆ ಎನ್ನಿಸುತ್ತದೆ. ಮುಖ್ಯವಾಗಿ ಇಂಥ ಒಂದು ಸಂಸ್ಥೆ ಇಲ್ಲಿ ಬೇರೂರಬಲ್ಲದು ಎಂಬುದೇ ನಮಗೆ ತುಂಬ ಧೈರ್ಯೋತ್ಸಾಹ ಕೊಟ್ಟಿದೆ.

ಅಮೆರಿಕದಲ್ಲಿ ನೆಲೆಸಿ ಇಷ್ಟೂ ವರ್ಷಗಳಾದ ಮೇಲೂ ನಿಮಗೆ ಅನಿವಾಸಿತನ ಎಂಬುದು ಕಾಡುವ ಸಂಗತಿಯೇ?
`ಕಾಡುವ' ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ನಾವಿಲ್ಲಿ ಬಂದು ಹಲವು ದಶಕಗಳೇ ಆಗಿವೆ, ನಮ್ಮ ಸಂಸಾರಗಳು ಇಲ್ಲಿ ಬೆಳೆದಿವೆ. ಎರಡನೆಯ, ಮೂರನೆಯ ತಲೆಮಾರಿನ ಜನ ಬೆಳೆಯುತ್ತಿದ್ದಾರೆ. ಇಲ್ಲಿ ನಾವು ಮನೆಗಳನ್ನು ಕೊಂಡು ಈ ನೆಲಕ್ಕೆ ಅಂಟಿಕೊಂಡಿದ್ದೇವೆ. ಇದೇ ನಮ್ಮ ಮನೆ ಎಂಬ ಅರಿವು ಬಹಳ ಜನರ ಮನಸ್ಸಿನಲ್ಲಿ ಮೂಡಿದೆ. ಆದರೆ ನಾವು ಭೂಗೋಳದ ಇನ್ನೊಂದು ಕಡೆಯಿಂದ ಬಂದವರು ಎಂಬ ಪ್ರಜ್ಞೆ ಅಳಿಸಿಹೋಗುವುದಿಲ್ಲ. ಯಾಕೆ ಹೋಗಬೇಕು? ಆ ಇನ್ನೊಂದು ಸಂಸ್ಕೃತಿಯನ್ನೂ ಸಾಧ್ಯವಾದ ಮಟ್ಟಿಗೆ ಉಳಿಸಿಕೊಳ್ಳಬೇಕೆಂಬುದೇ ಇಲ್ಲಿನ ಬಹು ಜನರ ಮತ. ಹಾಗೆ ಉಳಿಸಿಕೊಳ್ಳುವುದು ಒಂದು `ಕಾಡಿಸುವ' ಪ್ರಶ್ನೆಯಾಗುತ್ತದೆ ಎಂದು ನನಗೆ ಅನಿಸಿಲ್ಲ.

ನೀವು ಕಲಿಯುತ್ತಿದ್ದ ಸಾಹಿತ್ಯಕ ವಾತಾವರಣಕ್ಕೂ ಈಗಿನ ಸಾಹಿತ್ಯ ಸಂದರ್ಭಕ್ಕೂ ಇರುವ ಅಂತರಗಳನ್ನು ಹೇಗೆ ಗುರುತಿಸುತ್ತೀರಿ?
ನನ್ನ ಬಾಲ್ಯ ಗಾಂಧೀಯುಗಕ್ಕೆ ಸೇರಿದ್ದು. ಇಡೀ ದೇಶ ಜಾಗೃತಗೊಳ್ಳುತ್ತಿದ್ದ ಸಮಯ. ನಮ್ಮ ದೇಶದ ಬಗ್ಗೆ, ಸಂಸ್ಕೃತಿಯ ಬಗ್ಗೆ, ಭಾಷೆಯ ಬಗ್ಗೆ ಒಂದು ಹೊಸ ವಿಶ್ವಾಸ, ಗೌರವ, ಕೆಚ್ಚು ಮೂಡುತ್ತಿದ್ದ ಕಾಲ. ಕನ್ನಡದ ಬಗ್ಗೆ ನಮ್ಮಲ್ಲಿ ಒಂದು ವಿಶೇಷವಾದ ಹೆಮ್ಮೆ, ಗೌರವ ಬೆಳೆಯುತ್ತಿತ್ತು. ಸಾಹಿತ್ಯ, ಸಾಹಿತಿಗಳು ಎಂದರೆ ಅವರಿಗೊಂದು ಉನ್ನತ ಸ್ಥಾನವಿತ್ತು. ಈಗ ಇಲ್ಲ ಎಂದಲ್ಲ, ಆದರೆ ಕನ್ನಡದ ಬಗ್ಗೆ ನಮ್ಮ ಕಿರಿಯ ಜನಾಂಗಕ್ಕೆ ಸಾಕಷ್ಟು ಛ್ಡ್ಚಿಜಿಠಿಛಿಞಛ್ಞಿಠಿ ಇಲ್ಲ ಎನ್ನಿಸುತ್ತದೆ. ನನ್ನ ಬೆಂಗಳೂರಿನ ನೆಂಟರಲ್ಲೇ ಕನ್ನಡದಲ್ಲಿ ಚೆನ್ನಾಗಿ ಓದಿ ಬರೆದು ಮಾಡುವ ಸಾಮರ್ಥ್ಯಯುಳ್ಳವರು ಕಮ್ಮಿ. ಈಗಿನ ಮಕ್ಕಳು ಎಷ್ಟೋ ವಿಚಾರಗಳಲ್ಲಿ ಡಿಛ್ಝ್ಝಿ ಜ್ಞ್ಛಿಟ್ಟಞಛಿ ಆಗಿದ್ದಾರೆ. ಆದರೆ ಅವರಲ್ಲಿ ಕನ್ನಡ ಪ್ರೀತಿ, ಸಾಹಿತ್ಯ ಪ್ರೀತಿ ಇನ್ನು ಸ್ವಲ್ಪ ಹೆಚ್ಚಾಗಬೇಕು ಎನ್ನಿಸುತ್ತದೆ. ಎಲ್ಲವನ್ನೂ ಹಣ ಗಳಿಕೆಯ, ಉದ್ಯೋಗದ ಸಾಧ್ಯತೆಯ ದೃಷ್ಟಿಯಿಂದಲೇ ನೋಡುವ ಕ್ರಮ ನಮ್ಮಲ್ಲಿ ನೆಟ್ಟುಹೋಗಿದೆ.  

`ಕನ್ನಡ ಸಾಹಿತ್ಯ ರಂಗ'ದಲ್ಲಿ ತೊಡಗಿಸಿಕೊಂಡಿದ್ದರಿಂದ ವೈಯಕ್ತಿಕವಾಗಿ ನಿಮಗಾದ ಲಾಭಗಳೇನು?
ಅಮೆರಿಕದ ಎಲ್ಲ ಕಡೆಗಳಿಂದಲೂ ಸಾಹಿತ್ಯ ಪ್ರೇಮಿಗಳ ಪರಿಚಯದ ಲಾಭವಾಗಿದೆ. ಈ ಎಲ್ಲರೊಡನೆ ಕೇವಲ ಮೇಲು ಮೇಲಿನ ಸಂಬಂಧವಲ್ಲದೆ ಅವರೊಡನೆ ಕೈಜೋಡಿಸಿ ಕೆಲಸ ಮಾಡುವ ಸುಯೋಗ ದೊರೆತಿದೆ. ನಮ್ಮ ಜನರಲ್ಲಿ ಕನ್ನಡಪ್ರೇಮ ಎಷ್ಟು ಆಳವಾಗಿದೆ ಎಂದು ನೋಡಿ ಅವರ ಬಗ್ಗೆ ಗೌರವ, ಪ್ರೀತಿ ಬೆಳೆದಿದೆ. ಇದಲ್ಲದೆ ರಂಗದ ಕೆಲಸದ ಮೂಲಕ ಕರ್ನಾಟಕದಲ್ಲಿ ಎಷ್ಟೋ ಮಂದಿ ಶ್ರೇಷ್ಠ ಸಾಹಿತಿಗಳ ಪರಿಚಯವಾಗಿದೆ. ಇದಂತೂ `ಕಸಾರಂ' ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ. `ಕಸಾರಂ' ನೆವದಲ್ಲಿ ಕನ್ನಡ ಓದುವುದು ಬರೆಯುವುದು ಹೆಚ್ಚಾಗಿದೆ. ಮನೆಯಲ್ಲಿ ಕನ್ನಡ ಪುಸ್ತಕಗಳು ಹೆಚ್ಚಿವೆ. ನಾವು ಮಾಡುತ್ತಿರುವ ಕೆಲಸದ ಪ್ರಮಾಣ ಕಡಿಮೆ ಇರಬಹುದು. ಆದರೆ ಅದು ಮನಸ್ಸಿಗೆ ಸಂತೋಷವನ್ನುಂಟು ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT