ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿಗಳಿಗೆ ತನಿಖೆಯ ಉರುಳು?

ಇನ್ನಷ್ಟು ವಿಶ್ವವಿದ್ಯಾಲಯಗಳಲ್ಲಿ ಅವ್ಯವಹಾರ
Last Updated 1 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಇನ್ನೂ ಕೆಲವು ವಿಶ್ವವಿದ್ಯಾಲಯಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣ­ಗಳನ್ನು ರಾಜ್ಯಪಾಲ ವಜುಭಾಯ್‌ ವಾಲಾ ಅವರು ಗಂಭೀರವಾಗಿ ಪರಿಗಣಿ­ಸಿದ್ದಾರೆ. ಹೀಗಾಗಿ ಅಕ್ರಮ ನಡೆಸಿದ ಮತ್ತು ಅದಕ್ಕೆ ಅವಕಾಶ ನೀಡಿದ ಕುಲಪತಿಗಳಿಗೂ ತನಿಖೆಯ ಉರುಳು ಸುತ್ತಿಕೊಳ್ಳುವ ಸಾಧ್ಯತೆ ಇದೆ.

ಅವ್ಯವಹಾರದಲ್ಲಿ ಭಾಗಿಯಾ­ಗಿರುವ ಆರೋಪ ಎದುರಿಸುತ್ತಿರುವ ಧಾರವಾಡದ ಕರ್ನಾಟಕ ವಿವಿಯ ವಿಶ್ರಾಂತ ಕುಲಪತಿ ಎಚ್‌.ಬಿ. ವಾಲಿ­ಕಾರ ಅವರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೆಲವು ವಿಶ್ರಾಂತ ಕುಲಪತಿಗಳ ಮೇಲೆ ಬಂದಿರುವ ದೂರುಗಳನ್ನು ರಾಜ್ಯ­ಪಾಲರು ಗಂಭೀರವಾಗಿ ಪರಿಗಣಿ­ಸಿ­­ದ್ದಾರೆ. ಈ ಎಲ್ಲ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಸಾಧ್ಯತೆ­ಗಳನ್ನು ಪರಿಶೀಲಿಸುತ್ತಿರುವ ಅವರು ಉನ್ನತ ಶಿಕ್ಷಣ ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಬಯಸಿ­ದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಕರ್ನಾಟಕ ಮುಕ್ತ ವಿವಿಯ (ಕೆಎಸ್‌ಒಯು) ಕುಲಪತಿ ಕೆ.ಎಸ್‌. ರಂಗಪ್ಪ, ರಾಣಿ ಚೆನ್ನಮ್ಮ ವಿವಿಯ ವಿಶ್ರಾಂತ ಕುಲಪತಿ ಬಿ.ಆರ್‌. ಅನಂತನ್‌, ಕರ್ನಾಟಕ ಮಹಿಳಾ ವಿವಿ ವಿಶ್ರಾಂತ ಕುಲಪತಿ ಸೈಯದಾ ಅಖ್ತರ್‌ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಚ್‌. ಮಹೇಶಪ್ಪ ವಿರುದ್ಧದ ದೂರುಗಳು ಇನ್ನೂ ಇತ್ಯರ್ಥವಾಗದೇ ಉಳಿದಿವೆ.  ಈ ಪ್ರಕರಣಗಳಲ್ಲಿ ಕೆಲವು ದೂರುಗಳಿಗೆ ದಾಖಲೆಗಳಿದ್ದರೆ, ಇನ್ನು ಕೆಲವು ಕೇವಲ ಆರೋಪಗಳಷ್ಟೇ.

ಮಹೇಶಪ್ಪ ಮತ್ತು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್‌ ಗೋಯಲ್‌ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ­ಯಾಗಿದ್ದ ಜಿ.ವಿ. ಕೃಷ್ಣ ರಾವ್‌ ಅವರು ಪ್ರಾಥಮಿಕ ತನಿಖೆ ನಡೆಸಿ, ಆರೋಪಗಳ ಬಗ್ಗೆ ಇನ್ನಷ್ಟು ತನಿಖೆ ನಡೆಸುವಂತೆ ವರದಿ ನೀಡಿದ್ದಾರೆ. ಆದರೂ ಸರ್ಕಾರ ಇನ್ನಷ್ಟೇ ಈ ಬಗ್ಗೆ  ನಿರ್ಧಾರ ಕೈಗೊಳ್ಳಬೇಕಿದೆ.
ರಂಗಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ  ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರು ವಾಲಾ ಅವರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT